ಧಾರವಾಡ:

ಸರ್ವ ಜನಾಂಗದವರ ಒಳಿತನ್ನು ಬಯಸಿದ ಬಸವೇಶ್ವರರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಕವಿವಿ ‌ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.

ಕರ್ನಾಟಕ ವಿವಿ ಬಸವೇಶ್ವರ ಪೀಠ ಅಲ್ಲಮಪ್ರಭು ಸಭಾಭವನದಲ್ಲಿ ಆಯೋಜಿಸಿದ್ದ ವಿದುಷಿ ಡಾ. ನಂದಾ ಪಾಟೀಲ್ ವಚನ ಸಂಗೀತ ದತ್ತಿ ಉದ್ಘಾಟಿಸಿ ಮಾತನಾಡಿದರು.

ಬಸವೇಶ್ವರ ಪೀಠ ಕ್ರಿಯಾಶೀಲ ಮತ್ತು ಮಾದರಿಯಾಗಿದೆ. ಬಸವಣ್ಣನವರ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಉತ್ತಮ ಕಾರ್ಯಕ್ರಮ ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಕುರಿತು ಜಾಗೃತಿ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.

ಕವಿವಿ ಕುಲಸಚಿವ ಪ್ರೊ. ಮೃತ್ಯುಂಜಯ ಅಗಡಿ ಮಾತನಾಡಿ, ಸಾಹಿತ್ಯ ಮತ್ತು ಸಂಗೀತಕ್ಕೆ ಅವಿನಾಭಾವ ಸಂಬಂಧವಿದೆ. ವಚನ ಸಾಹಿತ್ಯ ಸಂಗೀತದ ಮೂಲಕ ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತು ಎಂದು ಹೇಳಿದರು.


ಇಂತಹ ವಚನ ಸಂಗೀತ ದತ್ತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯ ಮತ್ತು ಸಂಗೀತ ಕುರಿತು ಹೆಚ್ಚು ಆಸಕ್ತಿ ಮೂಡಿಸಲು ಸಹಾಯಕವಾಗಿವೆ ಎಂದರು.

ದತ್ತಿದಾನಿ ಪ್ರೊ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಚಿಂತಕರಾದ ಪ್ಲೇಟೋ, ಕಾರ್ಲ್ ಮಾರ್ಕ್ಸ್, ರೂಸೋ, ಅರಿಸ್ಟಾಟಲ್ ಅವರ ಎಲ್ಲ ಚಿಂತನೆಗಳು ಬಸವೇಶ್ವರರ‌‌ ಚಿಂತನೆಗಳಲ್ಲಿ ಕಾಣುತ್ತೇವೆ. ಇಂತಹ ಶ್ರೇಷ್ಠ ಚಿಂತನೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಬೆಳೆಯಬೇಕಾಗಿದೆ ಎಂದು ಸಲಹೆ ನೀಡಿದರು.

ಸಂಗೀತಗಾರ್ತಿ ಡಾ. ಶಕ್ತಿ ಪಾಟೀಲ್ ವಚನ ಸಂಗೀತ ನಡೆಸಿಕೊಟ್ಟರು.‌ ಬಸವೇಶ್ವರ ಪೀಠದ ಸಂಯೋಜಕ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಸ್ವಾಗತಿಸಿದರು. ಡಾ. ವೀರಣ್ಣ ರಾಜೂರ, ಡಾ. ಸಿ.ಎಂ. ಕುಂದಗೋಳ, ಡಾ. ಅನುಸೂಯ ಕಾಂಬಳೆ, ಡಾ. ಮಲ್ಲಪ್ಪ ಬಂಡಿ, ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಪ್ರೊ. ನಂದಾ ಪಾಟೀಲ್‌, ಡಾ. ಶಕ್ತಿ ಪಾಟೀಲ್, ಡಾ. ಈರಣ್ಣ ಇಂಜಗನೇರಿ, ಮಲ್ಲಿಕಾರ್ಜುನ ಸಂಶಿ ಮತ್ತು ಸೋಹೈಲ್ ಸೈಯದ್ ಪವಿತ್ರಾ ಭಂಡಾರಿ ಇದ್ದರು.