ಸಾರಾಂಶ
ಸಿರಿಗೆರೆ: ಐದು ವರ್ಷಗಳಿಗೊಮ್ಮೆ ಹುಟ್ಟಿ ಕೆಲವು ನಾಯಕರು ಇನ್ನಿಲ್ಲದ ಮಾತುಗಳಿಂದ ಜನರ ದಾರಿ ತಪ್ಪಿಸುತ್ತಾರೆ. ಅಂತಹ ನಾಯಕರ ಬಗ್ಗೆ ಜನರು ಜಾಗೃತರಾಗಿರಬೇಕೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಸಿರಿಗೆರೆ ಸಮೀಪದ ಡಿ.ಮೆದಿಕೇರಿಪುರ ಗ್ರಾಮದಲ್ಲಿ ೬.೮೫ ಕೋಟಿ ರು.ಗಳ ವೆಚ್ಚದ ಶಾಲಾ ಕಟ್ಟಡ, ಸಿಸಿ ರಸ್ತೆ ಮತ್ತು ಆಸ್ಪತ್ರೆ ಕಟ್ಟಡಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.30 ವರ್ಷಗಳಿಂದ ಶಾಸಕನಾಗಿರುವ ನಾನು ಕ್ಷೇತ್ರದಲ್ಲಿ ನಿರ್ವಂಚನೆಯಿಂದ ಕೆಲಸ ಮಾಡಿದ್ದೇನೆ. ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಡಿ.ಮೆದಿಕೇರಿಪುರ ಇಲ್ಲಿನ ಗಣಿಗಾರಿಕೆಯಿಂದ ಧೂಳು ಹಿಡಿದು ಹೋಗಿತ್ತು. ಆಗ ಇಲ್ಲಿನ ಜನರ ಕಷ್ಟಗಳನ್ನು ಅರಿತು ಮೈನ್ಸ್ಗಳೊಂದಿಗೆ ಹೋರಾಟ ಮಾಡಿ ಗ್ರಾಮವನ್ನು ದತ್ತು ತೆಗೆದುಕೊಳ್ಳುವಂತೆಯೂ ಹಾಗೂ ಇಲ್ಲಿ ವಾಸ ಮಾಡುತ್ತಿರುವ ಜನರಿಗೆ ವಿಮೆ ಸೌಲಭ್ಯ ನೀಡಬೇಕೆಂದು ಹೋರಾಡಿದ್ದೆ ಎಂದು ನೆನಪು ಮಾಡಿಕೊಂಡರು.
ಕ್ಷೇತ್ರದಲ್ಲಿ ೪೯೩ ಹಳ್ಳಿಗಳು ಇವೆ. ಇವೆಲ್ಲವನ್ನು ಹಸುಗಳಂತೆ ನೋಡಿಕೊಂಡಿದ್ದೇನೆ. ಹಲವು ಹಾಲು ಕೊಡದ ಹಸುಗಳೂ ಇವೆ. ಅವೆಲ್ಲವನ್ನೂ ಏಕಮತದಿಂದ ತಾರತಮ್ಯ ಮಾಡದೇ ಒಟ್ಟಿಗೇ ಕೊಂಡೊಯ್ಯುತ್ತಿದ್ದೇನೆ. ಯಾರಲ್ಲಿಯೂ ಭಿನ್ನಭೇದ ಮಾಡದೆ ಕೆಲಸ ಮಾಡಿದ್ದೇನೆ ಎಂದರು.ಗಣಿಗಾರಿಕೆಯ ಕಂಪನಿಗಳು ಕೊಡುವ ಶೇಕಡ ೨ರ ಸಿಎಸ್ಆರ್ ನಿಧಿಯಿಂದ ಈಗ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇನೆ ಎಂದ ಅವರು, ನಮ್ಮ ಹಳ್ಳಿಗಳಲ್ಲಿನ ಮಕ್ಕಳಿಗೂ ಸೂಕ್ತ ರೀತಿಯ ಶಿಕ್ಷಣ ನೀಡಬೇಕಿದೆ. ಅದಕ್ಕಾಗಿ ಸರ್ಕಾರಿ ಶಾಲೆಗಳನ್ನು ಸಶಕ್ತಗೊಳಿಸಲಾಗುತ್ತಿದೆ. ಯಾವುದೇ ಖಾಸಗಿ ಶಾಲೆಗಳಲ್ಲಿ ಸಿಗುವ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗಬೇಕು. ಬಸ್ ಸೌಲಭ್ಯ ಇಲ್ಲದ ಶಾಲೆಗಳ ಮಕ್ಕಳಿಗೆ ಸ್ವಂತ ಹಣದಲ್ಲಿ ಬಸ್ ಸೌಲಭ್ಯ ಒದಗಿಸಿಕೊಟ್ಟಿದ್ದೇನೆ. ಅವರಿಗೆ ಉಚಿತ ಊಟ, ಪುಸ್ತಕ, ಸಮವಸ್ತ್ರ ಮುಂತಾದ ಸೌಲಭ್ಯಗಳು ದೊರೆಯುತ್ತಿವೆ ಎಂದರು.
ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಶೈಲೇಶ್ ಕುಮಾರು ಮಾತನಾಡಿ, ಶಾಸಕ ಚಂದ್ರಪ್ಪನವರ ಕಾಮಗಾರಿಗಳು ಉತ್ತಮ ಗುಣಮಟ್ಟ ಹೊಂದಿರುತ್ತವೆ. ಕ್ಷೇತ್ರದಲ್ಲಿ ಅವರು ನಿರ್ಮಿಸಿರುವ ಶಾಲಾ ಕೊಠಡಿಗಳು, ದೇವಸ್ಥಾನಗಳು ಇದಕ್ಕೆ ಸಾಕ್ಷಿಯಾಗಿವೆ ಎಂದರು.ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿ ಅವು ಖಾಸಗಿ ಸಂಸ್ಥೆಗಳ ಶಾಲೆಗಳಂತೆಯೇ ಇರಬೇಕೆನ್ನುವ ಅಪೇಕ್ಷೆ ಶಾಸಕರದ್ದು. ಅದಕ್ಕಾಗಿಯೇ ಅವರು ಕ್ಷೇತ್ರದಲ್ಲಿ ಸುಮಾರು ೧೫೦ ಶಾಲೆಗಳಿಗೆ ಅನುದಾನ ನೀಡಿ ಕೊಠಡಿಗಳನ್ನು ನಿರ್ಮಿಸುತ್ತಿದ್ದಾರೆ ಎಂದರು.
ಕಾಕಬಾಳು ಬಳಿ ವಿದ್ಯುತ್ ಕೇಂದ್ರ ನಿರ್ಮಿಸಲು ಸ್ಥಳೀಯರು ಅಡ್ಡಿಪಡಿಸಿದ್ದರಿಂದ ಸಮೀಪದ ಅಡವಿಗೊಲ್ಲರಹಟ್ಟಿಯಲ್ಲಿ ಉತ್ತಮ ಜಾಗವನ್ನು ಗುರುತಿಸಿ ಅಲ್ಲಿ ವಿದ್ಯುತ್ ಕೇಂದ್ರವನ್ನು ೨೫೦ ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ರೈತರಿಗೆ ವರದಾನ ಆಗಲಿದೆ ಎಂದು ತಿಳಿಸಿದರು.ಯುವಮೋರ್ಚಾ ಕಾರ್ಯದರ್ಶಿ ಕೆ.ಬಿ.ಮೋಹನ್ ಮಾತನಾಡಿ, ಶಾಸಕ ಎಂ.ಚಂದ್ರಪ್ಪ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿದ್ದಾರೆ. ಕ್ಷೇತ್ರದ ತುಂಬಾ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸ ಮಾಡುತ್ತಿದ್ದಾರೆ. ಇವರ ಕಾರ್ಯವೈಖರಿಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಮೆಚ್ಚುಗೆ ಸೂಚಿಸಿದ್ದಾರೆ ಎಂದರು.
ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಗಂಗಪ್ಪ, ಎಸ್ಡಿಎಂಸಿ ಸದಸ್ಯ ಅರುಣ್ ಕುಮಾರ್, ನರಸಿಂಹಮೂರ್ತಿ, ಗ್ರಾಪಂ ಸದಸ್ಯ ರಮೇಶ್, ಕುಬೇರಮ್ಮ, ತಾಲೂಕು ಶಿಕ್ಷಣಾಧಿಕಾರಿ ನಾಗಭೂಷಣ್, ಹಿರೇಬೆನ್ನೂರು ರಾಜಣ್ಣ, ಪಂಚಾಕ್ಷರಯ್ಯ, ಕುಬೇರಮ್ಮ ಮುಂತಾದವರು ಭಾಗವಹಿಸಿದ್ದರು.ನಮಗೆ ಅಪರೂಪಕ್ಕೆ ಸಿಕ್ಕಿರುವ ಶಾಸಕರು
ಶಾಸಕ ಎಂ. ಚಂದ್ರಪ್ಪ ಜನಾನುರಾಗಿಯಾಗಿ ಕ್ಷೇತ್ರದ ಎಲ್ಲ ಕಡೆ ಸಮಾನದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ ಗ್ರಾಮವಾದ ಡಿ.ಮೆದಿಕೇರಿಪುರದಲ್ಲಿ ನಮ್ಮ ಬೇಡಿಕೆಗಳಿಗೆ ಮನ್ನಿಸಿ ಇಂದು ಹಲವು ಕಾಮಗಾರಿಗಳಿಗೆ ಭೂಮಿಪೂಜೆ ನಡೆಸಿದ್ದಾರೆ. ಇಂತಹ ಶಾಸಕರು ನಮಗೆ ಅಪರೂಪಕ್ಕೆ ಸಿಕ್ಕಿದ್ದಾರೆ ಎಂದು ಗ್ರಾಮದ ಕುಬೇರಮ್ಮ ಶಾಸಕರಿಗೆ ವೇದಿಕೆ ಮೇಲೆ ಸಕ್ಕರೆ ತಿನ್ನಿಸಿದರು. ಕಲ್ಯಾಣ ಮಂಟಪ ನಿರ್ಮಿಸಿ ಕೊಡಿ
ಗ್ರಾಮದಲ್ಲಿನ ಜನರ ಆರ್ಥಿಕ ಸಾಮಾಜಿಕ ಸ್ಥಿತಿ ಗಂಭೀರವಾದುದಾಗಿದೆ. ಇಲ್ಲಿಯ ಜನರು ಬೇರೆ ಸ್ಥಳಗಳಿಗೆ ಹೋಗಿ ದುಬಾರಿ ಮದುವೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ತಾವು ಇಲ್ಲಿನ ಜನರ ಕಷ್ಟಗಳನ್ನು ಅರಿತಿದ್ದೀರಿ. ದಯಮಾಡಿ ನಮ್ಮ ಗ್ರಾಮದಲ್ಲಿ ಚಿಕ್ಕದೊಂದು ಕಲ್ಯಾಣ ಮಂಟಪ ನಿರ್ಮಾಣ ಮಾಡಿಕೊಡಬೇಕೆಂದು ಗ್ರಾಮದ ಮುಖಂಡ ಜಿ. ವಿಷ್ಣು ಮನವಿ ಮಾಡಿದರು.