ಕನ್ನಡಪ್ರಭ ವಾರ್ತೆ ಶೃಂಗೇರಿ

ಅಡಕೆ ಸಹಿತ ತೋಟಗಾರಿಕೆ ಸರಿಯಾದ ಪ್ರಮಾಣದಲ್ಲಿ ಬಿಸಿಗಾಳಿ ಹಾಗೂ ಹೆಚ್ಚಾದ ಉಷ್ಣತೆಯಿಂದ ಆಗುತ್ತಿರುವ ವ್ಯತಿರಿಕ್ತ ಪರಿಣಾಮ, ಸಮಸ್ಯೆ ತಡೆಗಟ್ಟಲು ರೈತರು ಮುಂಜಾಗರೂಕ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ ತಿಳಿಸಿದ್ದಾರೆ.

ತೋಟಗಾರಿಕೆ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರುಣಿಸುವುದು, ಅಂದರೆ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗದಂತೆ ನಿಗದಿತ ಪ್ರಮಾಣದಲ್ಲಿ ನಿರಂತರವಾಗಿ ನೀರನ್ನು ಒದಗಿಸಬೇಕು. ಅಡಕೆ, ಕಾಳುಮೆಣಸು ಮತ್ತು ಇತರೆ ಬೆಳೆಗಳಿಗೆ ಹನಿ, ತುಂತುರು ನೀರಾವರಿಯಲ್ಲಿ ನೀರು ಒದಗಿಸಬೇಕು. ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಬೇಕು ಎಂದಿದ್ದಾರೆ.

ತೋಟದಲ್ಲಿ ಬೆಳೆದು ,ಒಣಗಿ ನಿಂತಿರುವ ಕಳೆ ಗಿಡಗಳನ್ನು ತೆಗೆಯಬೇಕು.ತೋಟದ ಸುತ್ತಲು 3 ಮೀಟರ್ ಅಂತರದಲ್ಲಿ ಬೆಳೆದು ನಿಂತಿರುವ ಕಳೆ ಗಿಡಗಳನ್ನು ತೆಗೆದು ಬೆಂಕಿ ಸುರಕ್ಷಿತ ವಲಯವನ್ನಾಗಿ ಮಾಡಬೇಕು.ಮಣ್ಣು ಪರೀಕ್ಷೆ ಮಾಡಿಸಿ ಶಿಪಾರಸ್ಸು ಮಾಡಿದ ಗೊಬ್ಬರವನ್ನು ಕಾಲಕಾಲಕ್ಕೆ ನೀಡಬೇಕು.ಜೀವಾಣು ಗೊಬ್ಬರಗಳಾದ ಎಎಂಸಿ, ಟ್ರೈಕೋಡರ್ಮ ಮತ್ತು ಸುಡಮೋನಸ್ ಗೊಬ್ಬರವನ್ನು ಶಿಪಾರಸು ಮಾಡಿದ ಪ್ರಮಾಣದಲ್ಲಿ ಅಡಕೆ, ಕಾಳುಮೆಣಸು, ಜಾಯಿಕಾಯಿ, ಲವಂಗ ಇತರೆ ಬೆಳೆಗಳಿಗೆ ನೀರಿನ ತೇವಾಂಶ ಇರುವಾಗ ನೀಡಬೇಕು ಎಂದು ತಿಳಿಸಿದ್ದಾರೆ.

ಅಡಕೆ ಎಲೆಚುಕ್ಕಿ ರೋಗ, ಕೊಳೆ ರೋಗ ಮತ್ತು ಹಿಂಗಾರು ಒಣಗುವಿಕೆಯನ್ನು ತಡೆಗಟ್ಟಲು ಶೇಕಡ 1ರ ಬೋರ್ಡೋ ದ್ರಾವಣ ಅಥವಾ ಕಾರ್ಬೆಂಡೈಜಿಮ್, ಮ್ಯಾಂಕೋಜೇಬ್, 2 ಗ್ರಾಂ, 1 ಲೀ ನೀರು ಅಥವಾ ಕಾಪರ್ ಆಕ್ಸಿ ಕ್ಲೋರೈಡ್ 2.5 ಗ್ರಾಂ, 1 ಲೀ ನೀರಿಗೆ ಅಥವಾ ಪ್ರೋಪಿಕೊನಜೋಲ್ ಶೇ 25 ಇಸಿ,1 ಮಿಲಿ,1 ಲೀನೀರಿನೊಂದಿಗೆ ಸೇರಸಿ ಚೆನ್ನಾಗಿ ಹಿಂಗಾರ ಮತ್ತು ಎಲೆಗಳು ನೆನೆಯುವಂತೆ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.


ಚಿಕ್ಕ ಸಸಿಗಳಿಗೆ ಬಿಸಿಲಿನಿಂದ ರಕ್ಷಿಸಲು ಅಡಕೆ ಗರಿಗಳು, ತೆಂಗಿನ ಗರಿಗಳು ಅಥವಾ ನೆರಳು ಪರದೆಯನ್ನು ಬಳಸಿ ನೆರಳನ್ನು ನೀಡಬೇಕು. ಬಿಸಿಲಿನ ತಾಪಕ್ಕೆ ರೋಗ ಹಾಗೂ ಕೀಟಗಳ ಬಾಧೆ ಹೆಚ್ಚಾಗುತ್ತದೆ. ಆದುದರಿಂದ ಕಾಲ ಕಾಲಕ್ಕೆ ಪರಿಶೀಲಿಸಿ ಸಂಶೋಧನಾ ಕೇಂದ್ರ. ತೋಟಕ್ಕೆ ಭೇಟಿ ನೀಡಿ ಸೂಕ್ತ ಮಾಹಿತಿ ಸಲಹೆ ಪಡೆದುಕೊಳ್ಳಬಹುದು. ಕಾಳುಮೆಣಸು ಬೆಳೆಗೆ ಕೊಳರೋಗದಿಂದ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಅತಿಯಾದ ರೋಗಪೀಡಿತ ಬಳ್ಳಿಗಳನ್ನು ಗುರುತಿಸಿ ಕಿತ್ತು ತೋಟದಿಂದ ದೂರ ಸಾಗಿಸಿ ಸುಡಬೇಕು. ಔಷದಿ ಸಿಂಡಡಣೆ ಮಾಡಬೇಕು. ಬಿಸಿಲಿನ ತಾರ, ರೋಗಗಳಿಂದ ತೋಟಗಾರಿಕೆ ಬೆಳೆಗಳನ್ನು ಮುಂಜಾಗರೂಕತೆ ಕ್ರಮ ವಹಿಸಿ ರಕ್ಷಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.