ಸಾರಾಂಶ
ಪುನರೂರು ಶಾಲೆಯ ಸಭಾಂಗಣದಲ್ಲಿ ಸೈಬರ್ ಅಪರಾಧ ಹಾಗೂ ಮಕ್ಕಳ ರಕ್ಷಣೆ ಕಾನೂನು ಫೋಕ್ಸೋ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಮಕ್ಕಳು ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆ ಅಗತ್ಯ. ಆಮಿಷಗಳಿಗೆ ಬಲಿಯಾಗಬೇಡಿ, ದೇಶದಲ್ಲಿ ಬಾಲಕಾರ್ಮಿಕರಿಗೆ ನಿಷೇಧವಿದ್ದು , ಉತ್ತಮ ಶಿಕ್ಷಣದ ಮೂಲಕ ಸಾಧಕರಾಗಬೇಕು ಎಂದು ಮೂಲ್ಕಿ ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಅನಿತಾ ಎಚ್ ಬಿ ಅವರು ಹೇಳಿದರು. ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ 2024, ದ.ಕ , ಶಿಕ್ಷಣ ಸಂಪನ್ಮೂಲ ಕೇಂದ್ರದ ಒಕ್ಕೂಟ, ದ.ಕ, ಪಡಿ ಮಂಗಳೂರು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದ.ಕ., ಮೂಲ್ಕಿ ಪೊಲೀಸ್ ಠಾಣೆ ಮತ್ತು ಪುನರೂರು ಅನುದಾನಿತ ಭಾರತ್ ಮಾತಾ ಹಿರಿಯ ಹಾಗೂ ಪ್ರೌಢ ಶಾಲೆ ನೇತೃತ್ವದಲ್ಲಿ ಪುನರೂರು ಶಾಲೆಯ ಸಭಾಂಗಣದಲ್ಲಿ ನಡೆದ ಸೈಬರ್ ಅಪರಾಧ ಹಾಗೂ ಮಕ್ಕಳ ರಕ್ಷಣೆ ಕಾನೂನು ಫೋಕ್ಸೋ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ ವಹಿಸಿದ್ದು ಜಿ.ಪಂ. ಮಾಜಿ ಅಧ್ಯಕ್ಷೆ ಸುಗಂಧಿ ಕೊಂಡಾಣ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಹಿಲ್ಡಾ ಡಿಸೋಜಾ, ಮಕ್ಕಳ ಹಕ್ಕು ಮಾಸೋತ್ಸವ ಸಮಿತಿ ಸಹ ಸಂಚಾಲಕಿ ನಂದಾ ಪಾಯಸ್, ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಪೋಷಕ ಸಮಿತಿಯ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ, ಕೃಷ್ಣಯ್ಯ ಆಚಾರ್ಯ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಘವೇಂದ್ರ ರಾವ್, ಮೂಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಸಂದೀಪ್, ಶಿಕ್ಷಕರಾದ ರೇಣುಕಾ, ಜ್ಯೋತಿ, ಲತಾ ಉಪಸ್ಥಿತರಿದ್ದರು.