ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಸುರಕ್ಷಿತ ಉತ್ಪನ್ನಗಳು ಆತ್ಮವಿಶ್ವಾಸದ ಗ್ರಾಹಕರು ಎಂಬ ವಿಷಯದಡಿ ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ನಡೆಯಿತು.ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಾತನಾಡಿ ಸಮಾಜದಲ್ಲಿನ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಗ್ರಾಹಕರಾಗಿದ್ದು, ಗ್ರಾಹಕರ ಸುರಕ್ಷತೆ, ಮಾಹಿತಿ ಮತ್ತು ನ್ಯಾಯಸಮ್ಮತ ಸೇವೆ ದೊರಕುವುದು ಅತ್ಯಂತ ಅವಶ್ಯಕವಾಗಿದೆ ಎಂದರು. ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು ಮತ್ತು ಪ್ರಾಮಾಣಿಕ ವ್ಯವಸ್ಥೆ ನಿರ್ಮಿಸಲು ಕೈಜೋಡಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಹಿರಿಯ ವಕೀಲರಾದ ಎಂ.ಎ.ನಿರಂಜನ ಅವರು ಮಾತನಾಡಿ ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಪ್ರಜ್ಞಾವಂತರಾಗಬೇಕು ಎಂದರು.ಕಪ್ಪಗಿರುವವರು ಬೆಳ್ಳಗಾಗುವುದು, ದಪ್ಪ ಇರುವವರು ಸಣ್ಣ ಆಗುವ ಜಾಹೀರಾತುಗಳಿಗೆ ಮರುಳಾಗಬಾರದು ಎಂದು ಎಚ್ಚರಿಸಿದರು. ಗ್ರಾಹಕರ ಹಕ್ಕುಗಳ ಬಗ್ಗೆ ಚ್ಯುತಿ ಬಂದಾಗ ಗ್ರಾಹಕರ ಆಯೋಗಕ್ಕೆ ಮನವಿ ಮಾಡಬೇಕು. ಹಾಗೆಯೇ ತಮ್ಮ ಕರ್ತವ್ಯಗಳನ್ನು ಮರೆಯಬಾರದು ಎಂದು ಎಂ.ಎ.ನಿರಂಜನ್ ಕಿವಿಮಾತು ಹೇಳಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಗೌರಮ್ಮಣ್ಣಿ ಮಾತನಾಡಿ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಜೊತೆಗೆ ಕರ್ತವ್ಯವನ್ನು ಪಾಲಿಸಬೇಕು ಎಂದು ಹೇಳಿದರು.
ಗ್ರಾಹಕರು ಯಾವುದೇ ಒಂದು ವಸ್ತುವನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ. ಗ್ರಾಹಕ ಎಂದರೆ ಅನಪೇಕ್ಷಿತ ವ್ಯಕ್ತಿಯಲ್ಲ, ಸಮಾಜದಲ್ಲಿನ ಗೌರವಾನ್ವಿತ ವ್ಯಕ್ತಿ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು. ಪದಾರ್ಥಗಳನ್ನು ಕೊಳ್ಳುವಾಗ ತೂಕ ಮತ್ತು ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು. ಯಾವುದೇ ಒಂದು ವಸ್ತು ಕೊಳ್ಳುವಾಗ ರಶೀದಿ ಕಡ್ಡಾಯವಾಗಿ ಪಡೆಯಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಗ್ರಾಹಕ ಆಯೋಗವು ಸಲ್ಲಿಕೆಯಾಗುವ ದೂರು ಸಂಬಂಧ ಶೀಘ್ರ ವಿಚಾರಣೆ ನಡೆಸಿ ಪರಿಹಾರ ಒದಗಿಸಲಿದೆ ಎಂದು ಹೇಳಿದರು.ಕುಶಾಲನಗರದ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷ ಎ.ಎ.ಚಂಗಪ್ಪ ಅವರು ಮಾತನಾಡಿ ಗ್ರಾಹಕರ ಮಾಹಿತಿ ಕೇಂದ್ರದಿಂದ ಜಿಲ್ಲೆಯಲ್ಲಿ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ 52 ಪ್ರೌಢ ಶಾಲೆಗಳಲ್ಲಿ ಗ್ರಾಹಕರ ಕ್ಲಬ್ಗಳನ್ನು ರಚಿಸಿ, ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಇಂದಿನ ವೇಗದ ಬದುಕಿನಲ್ಲಿ ಡಿಜಿಟಲ್ ಮಾರುಕಟ್ಟೆಗಳು ಸಹ ಪ್ರಬಲವಾಗಿದ್ದು, ಗ್ರಾಹಕರು ಈ ಬಗ್ಗೆ ಸಹ ಎಚ್ಚರವಹಿಸಬೇಕು ಎಂದು ಸಲಹೆ ಮಾಡಿದರು.ಸುರಕ್ಷತೆ, ಮಾಹಿತಿ, ನಿವೇದನೆ, ಪರಿಹಾರ, ಗ್ರಾಹಕ ಶಿಕ್ಷಣ, ಅಗತ್ಯ ವಸ್ತುಗಳು, ಆರೋಗ್ಯ ಪೂರ್ಣ ಪರಿಸರ ಮತ್ತಿತರ ಹಕ್ಕುಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಇರಬೇಕು ಎಂದು ತಿಳಿಸಿದರು.
ಆಹಾರ ಇಲಾಖೆ ಉಪ ನಿರ್ದೇಶಕರಾದ ಎಂ.ಭೀಮರಾಯ ಅವರು ಮಾತನಾಡಿ ಗ್ರಾಹಕರ ಸಮಗ್ರ ಹಿತರಕ್ಷಣೆಯೇ ಅತೀ ಮುಖ್ಯವಾಗಿದ್ದು, ಗ್ರಾಹಕರು ವಂಚನೆಗೆ ಒಳಗಾಗುವುದನ್ನು ತಡೆಯಲು ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಗ್ರಾಹಕರು ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಗ್ರಾಹಕರ ಹಿತ ಕಾಯುವುದು ಆದ್ಯ ಕರ್ತವ್ಯವಾಗಿದೆ. ಗ್ರಾಹಕರು ಸಂತೃಪ್ತಿ ಹೊಂದಿದಾಗ ಮಾತ್ರ ವಸ್ತುವಿನ ಅಥವಾ ಸೇವೆಯು ಸಾರ್ಥಕತೆ ಪಡೆಯುತ್ತದೆ ಎಂದು ವಿವರಿಸಿದರು.ಇಂದಿನ ದಿನಗಳಲ್ಲಿ ಗ್ರಾಹಕರು ಅನೇಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಯನ್ನು ಸರಿಪಡಿಸಿ ಕಾನೂನಾತ್ಮಕ ಪರಿಹಾರಗಳನ್ನು ಸೂಚಿಸುವುದು ಆಹಾರ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೂ ಮೊದಲು ಗ್ರಾಹಕರ ದಿನಾಚರಣೆ ಪ್ರಯುಕ್ತ ಗಣ್ಯರು ಗಿಡ ನೆಟ್ಟರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್ ಪ್ರಸನ್ನ, ಆಹಾರ ಇಲಾಖೆ ಸಹಾಯಕ ನಿರ್ದೇಶಕರಾದ ರಮಾ, ಪ್ರಾಧ್ಯಾಪಕರಾದ ನವೀನ್ ಕುಮಾರ್, ಆಹಾರ ನಿರೀಕ್ಷಕರಾದ ವೀಣಾ, ಯಶಸ್ವಿನಿ, ನಿಶಾ, ಸ್ವಾತಿ, ಸೀನಾ ಕುಮಾರಿ, ಕಿರಣ್, ನಾಗೇಂದ್ರ, ಪ್ರಮೋದ್ ಕುಮಾರ್, ಗಿರೀಶ್, ಕುಸುಮ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಕೇಳಿಬಂದ ಘೋಷಣೆ: ಗುಣಮಟ್ಟದ ಉತ್ಪನ್ನ ಹಾಗೂ ಸೇವೆ ಪ್ರತಿ ಗ್ರಾಹಕರ ಮೂಲಭೂತ ಹಕ್ಕು. ಗ್ರಾಹಕನೇ ರಾಜ, ಆದರೆ ಹಕ್ಕುಗಳ ಬಗ್ಗೆ ತಿಳುವಳಿಕೆ ಇದ್ದಾಗ ಮಾತ್ರ. ಖರೀದಿಸುವ ಮೊದಲು ಯೋಚಿಸಿ, ಗುಣಮಟ್ಟವನ್ನು ಪರೀಕ್ಷಿಸಿ. ಗ್ರಾಹಕರ ಹಕ್ಕುಗಳ ಅರಿವೇ ಮೋಸದಿಂದ ರಕ್ಷಣೆ. ಇಂತಹ ಸಂದೇಶವು ಬುಧವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಸಂದರ್ಭದಲ್ಲಿ ಕೇಳಿ ಬಂದವು.