ಸಾರಾಂಶ
ಶಿವಮೊಗ್ಗ: ಅಧ್ಯಾಪಕರು ಹೊಸ ಬದಲಾವಣೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಹೊಸ ವಿಚಾರಗಳ ಕಲಿಕೆಯಲ್ಲಿ ಆಸಕ್ತಿ ವಹಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಆಂತರಿಕ ಗುಣಮಟ್ಟಕೋಶದ ನೋಡಲ್ ಅಧಿಕಾರಿ ಡಾ.ವಿಕ್ರಮ್.ಕೆ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ವಿಭಾಗ, ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಆಂತರಿಕ ಗುಣಮಟ್ಟ ಕೋಶ ವಿಭಾಗದ ಆಶ್ರಯದಲ್ಲಿ ಇತ್ತೀಚಿನ ಬದಲಾವಣೆಗಳು ಮತ್ತು ಹೊಸ ವಿನ್ಯಾಸಗಳ ಕುರಿತು ಆಯೋಜಿಸಿದ್ದ ಒಂದು ವಿಶೇಷ ಕಾರ್ಯಗಾರದಲ್ಲಿ ಮಾತನಾಡಿದರು.ಇಂದಿನ ತಾಂತ್ರಿಕ ಯುಗದಲ್ಲಿ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಿ ತರಗತಿ ರಹಿತ ವ್ಯಾಸಂಗ ಮುಂದುವರಿಯಬಹುದು ಎಂದರು.
ಆನ್ಲೈನ್ ಮೂಲಕವೇ ಎಲ್ಲ ರೀತಿಯ ಮೌಲ್ಯಮಾಪನಗಳು ಸಾಧ್ಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಪ್ರತಿಯೊಂದನ್ನು ತಿರಸ್ಕರಿಸುವ ಮನೋಭಾವನೆಯನ್ನು ಬಿಟ್ಟು ಹೆದರಿಕೆಯಿಂದ ಹೊರಬಂದು ಹೊಸ ವಿಷಯಗಳಿಗೆ ಮನಸ್ಸುಗಳನ್ನು ಸಿದ್ಧಪಡಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದರು.ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾನಿಲಯದ ಐಕ್ಯೂಎಂಸಿ ನಿರ್ದೇಶಕ ಡಾ.ಸೈಯದ್ ಅಶ್ವಕ್ ಅಹಮದ್ ಮಾತನಾಡಿ, ಬದಲಾವಣೆ ಜಗದ ನಿಯಮ. ಈ ಬದಲಾವಣೆಗಳನ್ನು ಎಲ್ಲರೂ ಸಮ್ಮತಿಸಿ ವಿದ್ಯಾರ್ಥಿ ಸ್ನೇಹಿ ವಿಚಾರಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಆಡಳಿತ ಸಮಿತಿಯ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ಅಧ್ಯಾಪಕರಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳುವ ಮನಸ್ಥಿತಿ ಕಡಿಮೆ ಇದೆ. ಅಧ್ಯಾಪಕರು ಹೊಸ ವಿಷಯಗಳ ಕಲಿಕೆಯಲ್ಲಿ ಆಸಕ್ತಿ ತೋರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಪ್ರಾಂಶುಪಾಲರು ಭಾಗವಹಿಸಿದ್ದರುಡಿವಿಎಸ್ ಆಡಳಿತ ಸಮಿತಿಯ ಕಾರ್ಯದರ್ಶಿ ಎಸ್.ರಾಜಶೇಖರ್, ಕೋಶಾಧ್ಯಕ್ಷ ಬಿ.ಗೋಪಿನಾಥ್, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ವೆಂಕಟೇಶ್ , ಐಕ್ಯೂಎಸಿ ಕೋ ಆರ್ಡಿನೇಟರ್ ಪ್ರೊ.ಕುಮಾರಸ್ವಾಮಿ ಭಾಗವಹಿಸಿದ್ದರು.