ಸಾರಾಂಶ
ಸಮಾಜದಲ್ಲಿ ಅಂಟಿಕೊಂಡಿದ್ದ ಮೋಸ, ದರೋಡೆ, ವಂಚನೆಗಳಂತಹ ಅನಾಚಾರಗಳನ್ನು ಹೋಗಲಾಡಿಸಲು ದೃಢ ಸಂಕಲ್ಪ ತೊಟ್ಟು ನಿಂತ ದಾರ್ಶನಿಕ ವ್ಯಕ್ತಿ. ಸಮಾಜದ ಒಳಿತಿಗಾಗಿ ಶ್ರಮಿಸಿದ ಮಾಚಿದೇವ ಅವರ ಕೊಡುಗೆ ನಿಜಕ್ಕೂ ಅಪಾರವಾದದ್ದು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಡಿವಾಳ ವೃತ್ತಿಯಲ್ಲಿ ಕಾಯಕ ನಿಷ್ಠೆ ಕಂಡವರು ಮಡಿವಾಳ ಮಾಚಿದೇವ ಎಂದರೆ ತಪ್ಪಾಗುವುದಿಲ್ಲ. ತಮ್ಮ ಕೆಲಸವನ್ನು ಅವರು ವೃತ್ತಿ ಎಂದು ಪರಿಗಣಿಸದೆ ದೇವರ ಕೆಲಸ ಎಂದು ಜನರ ಸೇವೆ ಮಾಡುತ್ತಿದರು. ಅವರ ಆಲೋಚನೆಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.ನಗರದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಹಮ್ಮಿಕೊಳ್ಳಲ್ಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಅಂಟಿಕೊಂಡಿದ್ದ ಮೋಸ, ದರೋಡೆ, ವಂಚನೆಗಳಂತಹ ಅನಾಚಾರಗಳನ್ನು ಹೋಗಲಾಡಿಸಲು ದೃಢ ಸಂಕಲ್ಪ ತೊಟ್ಟು ನಿಂತ ದಾರ್ಶನಿಕ ವ್ಯಕ್ತಿ. ಸಮಾಜದ ಒಳಿತಿಗಾಗಿ ಶ್ರಮಿಸಿದ ಮಾಚಿದೇವ ಅವರ ಕೊಡುಗೆ ನಿಜಕ್ಕೂ ಅಪಾರವಾದದ್ದು ಎಂದರು.
ಉಪ ಪ್ರಾಂಶುಪಾಲ ಕೊತ್ತತ್ತಿ ರಾಜು ಅವರು ಮಡಿವಾಳ ಮಾಚಿದೇವ ಅವರ ಬಗ್ಗೆ ಉಪನ್ಯಾಸ ನೀಡಿ, ಸಮಾಜದಲ್ಲಿ ಹೀನಾಯವಾಗಿ ಕಾಣುತ್ತಿದ ಮಡಿವಾಳ ವೃತ್ತಿಗೆ ಘನತೆ, ಗೌರವ ತಂದು ಕೊಟ್ಟವರು ಮಾಚಿದೇವ. ಅವರು ಬಟ್ಟೆಯನ್ನು ಮಾತ್ರ ಮಡಿ ಮಾಡಿದವರಲ್ಲ. ಸಮಾಜದಲ್ಲಿದ್ದ ಅನಾಚಾರಗಳನ್ನು ತೊಳೆದು ಸಮಾಜವನ್ನೇ ಮಡಿ ಮಾಡಿದವರು ಎಂದರು.ಹನ್ನೆರಡನೇ ಶತಮಾನದ ವಚನಕಾರರಲ್ಲಿ ಒಬ್ಬರಾದ ಇವರು ವೇದ ಪುರಾಣ, ಪರಾಂಗತ, ಸಾಹಿತ್ಯ, ಸಂಸ್ಕೃತಿ, ಬರವಣಿಗೆಗಳಲ್ಲಿ ಅನೇಕ ಕೊಡುಗೆ ನೀಡಿದ್ದಾರೆ. ನಿಜಕ್ಕೂ ಇವರ ಕೊಡುಗೆ ಅಪಾರವಾದದ್ದು. ಇಂದಿನ ಯುವ ಪೀಳಿಗೆಗೆ ಇವರ ವಚನಗಳನ್ನು ಓದುವಂತೆ ನಾವೆಲ್ಲ ಒಟ್ಟುಗೂಡಿ ಅರಿವು ಮೂಡಿಸಬೇಕು ಎಂದರು.
ಸಮುದಾಯದಲ್ಲಿ ಸಾಧನೆ ಗೈದಿರುವ ಹಾಗೂ ಸಮಾಜ ಸೇವೆ ಮಾಡಿರುವಂತಹ ಗಣ್ಯವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಡಿವಾಳ ಸಂಘದ ಅಧ್ಯಕ್ಷ ಒಓ ರವಿ, ನಗರಸಭಾ ಅಧ್ಯಕ್ಷ ನಾಗೇಶ್, ನಗರಸಭೆ ಮಾಜಿ ಸದಸ್ಯೆ ಪದ್ಮಾ, ಅರೋಗ್ಯ ನಿರೀಕ್ಷಕ ಗೋವಿಂದ. ಮಡಿವಾಳ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.