ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಮಹಾರಾಷ್ಟ್ರಹಾಗೂ ತಾಲೂಕಿನ ಸುರಿಯುತ್ತಿರು ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಇನ್ನು ಮಳೆ ಹೆಚ್ಚಾದರೇ ಪ್ರವಾಹ ಬರುವ ಸಂಭವವಿದ್ದು, ಕೂಡಲೇ ನೋಡಲ ಅಧಿಕಾರಿಗಳ ನದಿಯ ದಡದ 14 ಗ್ರಾಮಗಳಲ್ಲಿ ಅಗತ್ಯ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಸೂಚಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪ್ರವಾಹ ಸಂಬಂಧ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನದಿ ತೀರದ ಗ್ರಾಮಗಳಲ್ಲಿ ಅಗತ್ಯವಾಗಿ ಬೋಟ್ ಗಳನ್ನು ಸನ್ನದ್ಧವಾಗಿ ಇಡಬೇಕು. ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳನ್ನು ಸಂಗ್ರಹಿಸಿ ಇಡಬೇಕು. ಮಳೆಗಾಲ ಆರಂಭವಾಗಿದ್ದು, ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭದಲ್ಲಿರುವಂತೆ ಕ್ರಮಕೈಗೊಳ್ಳಬೇಕು. ನೀರಿನ ಮಟ್ಟದ ಹೆಚ್ಚಾದಲ್ಲಿ ನದಿಯ ದಡದ ಜನರ ಮನವೊಲಿಸಿ ಜಾನುವಾರು ಸಮೇತ ಅವರನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನೀರಿನಮಟ್ಟ ದಿನೆ ದಿನೇ ಹೆಚ್ಚಾಗಿ ಕೆಳಹಂತದ ರಸ್ತೆಗಳು ಜಲಾವೃತ ಆದಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ಸ್ಥಗಿತಗೊಳಿಸಬೇಕು. 60 ವರ್ಷ ಮೇಲ್ಪಟ್ಟವರು, ಗರ್ಭೀಣಿ ಹಾಗೂ ಸಣ್ಣ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ಅಧಿಕಾರಿ ಸಿಬ್ಬಂದಿ ಅಗತ್ಯದ ಹೊರತಾಗಿ ರಜೆ ತೆಗೆದುಕೊಳ್ಳಬಾರದು. ಒಂದು ವೇಳೆ ನಿರ್ಲಕ್ಷ್ಯ ತೋರಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ತಹಸೀಲ್ದಾರ್ ರಾಜೇಶ ಬುರ್ಲಿ, ಬಿಇಒ ಎಂ.ಆರ್.ಮುಂಜೆ, ಉಪತಹಸೀಲ್ದಾರ್ ರಶ್ಮಿ ಜಕಾತಿ, ಸಿಡಿಪಿಒ ಸಂಜುಕುಮಾರ ಸದಲಗೆ, ಜಯಾನಂದ ಹಿರೇಮಠ, ನಿಂಗನಗೌಡ ಬಿರಾದಾರ, ಪ್ರಶಾಂತ ಪೊತದಾರ, ರಾಕೇಶ ಅರ್ಜುನವಾಡ, ರವೀಂದ್ರ ಮುರಗಾಲಿ, ಎ.ಡಿ.ಅನ್ಸಾರಿ ಅನೇಕ ಅಧಿಕಾರಿಗಳು ಸೇರಿದಂತೆ ಎಲ್ಲ ಗ್ರಾಮಗಳ ಗ್ರಾಮಲೇಕ್ಕಾಧಿಕಾರಿಗಳು ಪಿಡಿಒಗಳು ಇದ್ದರು.