- ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಭೀಮಣ್ಣಗೆ ಚಿಕಿತ್ಸೆ

- - -

ಚನ್ನಗಿರಿ: ತಾಲೂಕಿನ ಬಿ.ಆರ್.ಟಿ. ಕಾಲೋನಿಯಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆ ಸಮಯದಲ್ಲಿ ತೋಟದ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಸ್ಥಳೀಯ ನಿವಾಸಿ ಭೀಮಣ್ಣ (50) ಎಂಬಾತನ ಮೇಲೆ ಕರಡಿಯೊಂದು ದಿಢೀರ್‌ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.

ಬಿ.ಆರ್.ಟಿ ಕಾಲೋನಿ ಪಕ್ಕದ ಗ್ರಾಮವಾದ ಹಿರೇಮಳಲಿ ಗ್ರಾಮದ ರೈತರೊಬ್ಬರ ತೋಟಕ್ಕೆಂದು ಮನೆಯಿಂದ ಹೋಗುತ್ತಿದ್ದರು. ಈ ವೇಳೆ ಕರಡಿ ದಾಳಿ ನಡೆಸಿ ಬಲಗೈನ ತೋಳು ಕಚ್ಚಿ ಗಾಯಗೊಳಿಸಿದೆ. ಕರಡಿಯೊಂದಿಗೆ ಸೆಣಸಾಡುತ್ತಾ, ಕಿರುಚಾಡುತ್ತಿದ್ದಾಗ ಕೊಂಚ ದೂರದಲ್ಲೇ ಇದ್ದ ಜನರು ನೆರವಿಗೆ ಧಾವಿಸಿ ಕರಡಿಯನ್ನು ಓಡಿಸಿದ್ದಾರೆ ಎಂದು ಗ್ರಾಮದ ವೆಂಕಟೇಶ್ ತಿಳಿಸಿದ್ದಾರೆ. ಸಧ್ಯಕ್ಕೆ ಗಾಯಾಳು ಭೀಮಣ್ಣ ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಧಿಕಾರಿಗಳಿಂದ ಸ್ಥಳ ಮಹಜರು:


ಶುಕ್ರವಾರ ಬೆಳಗ್ಗೆ ಬಿ.ಆರ್.ಟಿ. ಕಾಲೋನಿಯ ಕಾರ್ಮಿಕ ಭೀಮಣ್ಣ ಅವರಿಗೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ನಮ್ಮ ಇಲಾಖೆ ಸಿಬ್ಬಂದಿ ಘಟನೆ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದ್ದಾರೆ ಎಂದು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಉಷಾ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಈಗಾಗಲೇ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಲಾಗಿದೆ. ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿಗೆ ಪರಿಹಾರ ನೀಡುವ ಜೊತೆಗೆ ಚಿಕಿತ್ಸೆ ಪಡೆದ ಆಸ್ಪತ್ರೆ ಬಿಲ್‌ಗಳನ್ನು ನೀಡಿದರೆ ಇಲಾಖೆ ವತಿಯಿಂದ ಚಿಕಿತ್ಸಾ ವೆಚ್ಚವನ್ನು ಭರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

- - -

-27ಕೆಸಿಎನ್ಜಿ1:

ಕರಡಿ ದಾಳಿಯಿಂದ ಗಾಯಗೊಂಡ ರೈತ ಭೀಮಣ್ಣ ಅವರನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.