ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಮೀನುಗಾರಿಕೆ ಲಾಭದಾಯಕ ವೃತ್ತಿಯಾಗಿದ್ದು, ಮಹಿಳೆಯರು ಮೀನು ಸಾಕಾಣಿಕೆಯನ್ನು ಉಪಕಸುಬಾಗಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಎಂ.ಶಿವಕುಮಾರ್ ಕರೆ ನೀಡಿದರು.ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಶಿಕಾರಿಪುರ ಮತ್ತು ಸೊರಬ ತಾಲೂಕಿನ ಮಹಿಳಾ ಸ್ವ ಸಹಾಯ ಸಂಘಗಳಿಗೆ ಮೀನು ಸಾಕಾಣಿಕೆ ಕುರಿತು ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮತ್ಸ್ಯೋದ್ಯಮ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಲಾಭದಾಯಕ ವೃತ್ತಿಯಾಗಿದ್ದು, ಪ್ರಸ್ತುತ ಮೀನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಬಹುದೊಡ್ಡದಿದೆ ಎಂದರು.
ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಬೃಹತ್ ಉದ್ಯಮವಾಗಿದ್ದು, ಮೀನುಗಳ ಮಾರಾಟದಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಂಪೂರ್ಣ ಮೀನುಗಾರಿಕೆಯಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳುವುದು, ಇಲಾಖೆಯ ಹೊಸ ಪ್ರಯತ್ನವಾಗಿದ್ದು ಮೀನು ಸಾಕಾಣಿಕೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವ ಮೂಲಕ ಲಾಭದಾಯಕ ವೃತ್ತಿಯನ್ನು ಉಪಕಸುಬಾಗಿ ಸ್ವೀಕರಿಸಿ ಆರ್ಥಿಕವಾಗಿ ಸದೃಢರಾಗುವಂತೆ ಕರೆ ನೀಡಿದರು.ಸಂಪನ್ಮೂಲ ವ್ಯಕ್ತಿ ಇಲ್ಲಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿನಯ್ ಅವರು ಗ್ರಾ.ಪಂ ಕೆರೆಗಳಲ್ಲಿ ಮೀನು ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿ, ಮೀನುಗಾರಿಕೆ ವೃತ್ತಿಗೆ ಇಲಾಖೆ ಅತ್ಯಧಿಕ ರೀತಿಯಲ್ಲಿ ಪ್ರೋತ್ಸಾಹಿಸುತ್ತಿದೆ. ಸರ್ಕಾರ ಮೀನುಗಾರಿಕೆಗೆ ನೀಡುತ್ತಿರುವ ಯಥೇಚ್ಚ ಪ್ರೋತ್ಸಾಹದಿಂದಾಗಿ ಎಲ್ಲ ಪರಿಕರಗಳಿಗೆ ಸಹಾಯಧನ ನೀಡಲಾಗುತ್ತಿದೆ. ಸರ್ಕಾರದ ಸೌಲಭ್ಯ ಸದುಪಯೋಗದ ಮೂಲಕ ಮೀನುಗಾರಿಕೆ ವೃತ್ತಿ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ತಿಳಿಸಿದರು.
ಯಶಸ್ವಿ ಮೀನು ಸಾಕಾಣಿಕೆಗೆ ಕೆರೆಗಳಲ್ಲಿನ ಕಳೆಗಳ ನಿರ್ಮೂಲನೆ ಮೂಲಕ ಕೆರೆಗಳನ್ನು ಸುಸಜ್ಜಿತ ರೀತಿಯಲ್ಲಿ ಸಿದ್ಧಪಡಿಸುವಿಕೆ, ಉತ್ತಮ ಮೀನು ತಳಿಗಳ ಆಯ್ಕೆ, ಪ್ರಮಾಣ, ಕೃತಕ ಆಹಾರ ನೀಡುವಿಕೆ ಮೂಲಕ ವೃತ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ತಿಳಿಸಿದರು.ಇದೇ ವೇಳೆ ವ್ಯವಸ್ಥಿತ ಮೀನು ಸಾಕಾಣಿಕೆ ಬಗ್ಗೆ ಇಲಾಖೆಯ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಹರ್ತಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಶಾಂತ್, ತಾಪಂ ಸಹಾಯಕ ನಿರ್ದೇಶಕ ಕುಮಾರ್, ಕಾರ್ಯಕ್ರಮ ವ್ಯವಸ್ಥಾಪಕ ಹರೀಶ್, ಇಮ್ರಾನ್ ಸಹಿತ ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.