ಸಾರಾಂಶ
ಕನ್ನಡಪ್ರಭವಾರ್ತೆ ಚನ್ನಗಿರಿ
ಬೀದಿ ಬದಿಯ ವ್ಯಾಪಾರಿಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಂತಹ ಶ್ರೀಮಂತ ವ್ಯಕ್ತಿಯಾದರೂ ಸಹಾ ಬೀದಿ ಬದಿಯಲ್ಲಿ ಸಿಗುವ ತಿಂಡಿ-ತಿನಿಸುಗಳ ಮೇಲೆ ವ್ಯಾಮೋಹ ಇಟ್ಟು ಕೊಂಡಿರುತ್ತಾನೆ ಎಂದು ತಹಸೀಲ್ದಾರ್ ಶಂಕರಪ್ಪ ಹೇಳಿದರು.ಅವರು ಗುರುವಾರ ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಸಮುದಾಯ ಭವನದಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಪುರಸಭೆ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪಿ.ಎಂ. ಸ್ವಾನಿಧಿ ಯೋಜನೆಯ ಮಾಹಿತಿ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಾಮಾನ್ಯ ಜನರ ಕೈಗೆ ಎಟಕುವ ದರದಲ್ಲಿ ಜನರಿಗೆ ಬೇಕಾದ ತಿನಿಸು ಮಾರಾಟ ಮಾಡುವ ನಿಮಗೆ ಆರ್ಥಿಕ ಶಕ್ತಿ ತುಂಬಲು ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದೆ. ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ರಸ್ತೆಗಳ ಬದಿಯಲ್ಲಿ ತಮ್ಮ ದೈನಂದಿನ ವ್ಯವಹಾರಗಳನ್ನು ನಡೆಸುವ ನೀವು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ಆರ್ಥಿಕ ಶಕ್ತಿಯನ್ನು ತುಂಬಲು ವಿವಿಧ ಇಲಾಖೆಗಳ ಮೂಲಕ 8 ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಿರಿ. ನಿಮ್ಮ ಜೀವನದ ನಿರ್ವಹಣೆಗಾಗಿ ಸ್ವಯಂ ಉದ್ಯೋಗಗಳನ್ನು ಅವಲಂಬಿಸಿಕೊಂಡಿರುವ ನಿಮಗೆ ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎಂದು ತಿಳಿಸಿದರು.
ಕುಟುಂಬ ಭವಿಷ್ಯದಲ್ಲಿ ಸುರಕ್ಷಿತವಾಗಿರಲು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಸಂಕಷ್ಟ ಸಮಯದಲ್ಲಿ ಆರ್ಥಿಕ ನೆರವು ನೀಡಲು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ, ವೃದ್ದಾಪ್ಯ ಪಿಂಚಣಿಗಾಗಿ ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆ, ಒಂದೇ ಕಾರ್ಡ ನೊಂದಿಗೆ ಯಾವುದೇ ಪ್ರದೇಶದಲ್ಲಿ ಪಡಿತರ ತೆಗೆದುಕೊಳ್ಳಲು ಒನ್ ನೇಷನ್ ಒನ್ ರೇಷನ್ ಯೋಜನೆ ಯೋಜನೆಗಳಿವೆ ಎಂದು ತಿಳಿಸಿದರು.ಸುರಕ್ಷಿತ ಬ್ಯಾಂಕಿಂಗ್ ಸೌಲಭ್ಯಕ್ಕಾಗಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಹಣಕಾಸಿನ ಮತ್ತು ಇತರೆ ಸೌಲಭ್ಯಗಳಿಗಾಗಿ ಲೇಬರ್ ಕಾರ್ಡ್, ಹೆರಿಗೆಯಲ್ಲಿ ಸಮಯದಲ್ಲಿ ಗರ್ಭಿಣಿಯರ ಸಹಾಯಕ್ಕಾಗಿ ಜನನಿ ಸುರಕ್ಷಾ ಯೋಜನೆ, ಪ್ರಾಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿಗೆ ತಂದಿದೆ. ಇವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಪುರಸಭೆ ಸಮುದಾಯ ಸಂಘಟನಾಧಿಕಾರಿ ಬಾಲಾಜಿರಾವ್ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಸದಸ್ಯರಾದ ಪಾರಿಪರಮೇಶ್, ಮೊಟ್ಟೆಚಿಕ್ಕಣ್ಣ, ಪಟ್ಲಿನಾಗರಾಜ್, ಗಾದ್ರಿರಾಜು, ಲಕ್ಷ್ಮಿದೇವಮ್ಮ, ಕಮಲಾ, ಸವಿತಾ ಸೇರಿದಂತೆ ಪಟ್ಟಣದ ಎಲ್ಲಾ ಬೀದಿ ಬದಿಯ ವ್ಯಾಪಾರಸ್ಥರು ಭಾಗವಹಿಸಿದ್ದರು.