ಸಾರಾಂಶ
ಬೇಕಲದ ಗೋಕುಲಂ ಗೋಶಾಲೆಯಲ್ಲಿ ಮೇ 8ರಿಂದ 16ರ ತನಕ ಗೆಜ್ಜೆಯ ನಾದ ಕೇಳಿಬರಲಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮೊದಲ ದೇಶೀಯ ನೃತ್ಯೋತ್ಸವ ಇದಾಗಿದೆ. ಪ್ರತೀದಿನ ಸಂಜೆ 5ರಿಂದ 9ರ ತನಕ ನಡೆಯುವ ನೃತ್ಯೋತ್ಸವದಲ್ಲಿ ದೇಶದ ಹೆಸರಾಂತ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಕನ್ನಡಪ್ರಭ ವಾರ್ತೆ ಕಾಸರಗೋಡು
ಬೇಕಲದ ಗೋಕುಲಂ ಗೋಶಾಲೆಯಲ್ಲಿ ಮೇ 8ರಿಂದ 16ರ ತನಕ ಗೆಜ್ಜೆಯ ನಾದ ಕೇಳಿಬರಲಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮೊದಲ ದೇಶೀಯ ನೃತ್ಯೋತ್ಸವ ಇದಾಗಿದೆ. ಪ್ರತೀದಿನ ಸಂಜೆ 5ರಿಂದ 9ರ ತನಕ ನಡೆಯುವ ನೃತ್ಯೋತ್ಸವದಲ್ಲಿ ದೇಶದ ಹೆಸರಾಂತ ಕಲಾವಿದರು ಪಾಲ್ಗೊಳ್ಳಲಿದ್ದಾರೆ.9 ದಿನಗಳ ನೃತೋತ್ಸವ:
ಪ್ರತೀವರ್ಷ ಪೆರಿಯ ಗೋಕುಲಂ ಗೋಶಾಲೆಯಲ್ಲಿ ದೀಪಾವಳಿ ಸಂಗೀತೋತ್ಸವವು ವಿಜೃಂಭಣೆಯಿಂದ ಜರುಗುತ್ತಿದ್ದು, ಭಾರತದ ನಾನಾ ಭಾಗಗಳಿಂದ ನುರಿತ ಸಂಗೀತ ಕಲಾವಿದರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನೃತ್ಯ ಕಲಾವಿದರಿಗೂ ಅವಕಾಶವನ್ನು ಕಲ್ಪಿಸುವ ಸಲುವಾಗಿ ದೇಶೀಯ ನೃತ್ಯೋತ್ಸವ 9 ದಿನ ನಡೆಯಲಿದೆ. ಮೇ 8ರಂದು ಸಂಜೆ 5ರಿಂದ ಗಾಯತ್ರಿ ರಾಜಾಜಿ, ತೀರ್ಥ ಇ.ಪೊದುವಾಳ್, ವರ್ಷಾ ರಾಜಕುಮಾರ್, ಕಲಾಕ್ಷೇತ್ರ ಎಂ.ಎಸ್.ಸನೀಶ್ ಅವರಿಂದ ಭರತನಾಟ್ಯ ನಡೆಯಲಿದೆ. ಮೇ 16ರ ತನಕ ಮುಂದುವರಿಯಲಿರುವ ನೃತೋತ್ಸವದಲ್ಲಿ 372 ಮಂದಿ ನೃತ್ಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ.ಪೆರಿಯ ಗೋಕುಲಂ ಗೋಶಾಲೆ:
ಗೋಕುಲಂ ಗೋಶಾಲೆಯು ಒಂದು ಕಪಿಲ ಹೋರಿ ಮತ್ತು ವೆಚೂರ್ ತಳಿಯ ಹಸುವಿನೊಂದಿಗೆ ಪ್ರಾರಂಭವಾಗಿದ್ದು, ಇಂದು ಸುಮಾರು 200ಕ್ಕೂ ಹೆಚ್ಚು ವಿವಿಧ ದೇಶೀಯ ತಳಿಯ ಗೋವುಗಳಿವೆ. ಗೋಶಾಲೆಯ ಮಧ್ಯದಲ್ಲೇ ಸಂಗೀತೋತ್ಸವ ನಡೆಯಲಿದೆ. 2021ರಲ್ಲಿ ವಿಷ್ಣುಪ್ರಸಾದ ಹೆಬ್ಬಾರ್ ಅವರ ನೇತೃತ್ವದಲ್ಲಿ ವೇದ-ವೇದಾಂಗ ವಿದ್ಯೆಗಳನ್ನು ಕಲಿಸುವ ನಿಟ್ಟಿನಲ್ಲಿ ಪರಂಪರಾ ವಿದ್ಯಾಪೀಠವನ್ನು ಸ್ಥಾಪಿಸಲಾಯಿತು.ಗೋಶಾಲೆಯ ಡಾ| ನಾಗರತ್ನ ಹೆಬ್ಬಾರ್ ಅವರೊಂದಿಗೆ ಪ್ರಸಿದ್ಧ ಕಲಾವಿದರಾದ ಪಯ್ಯನ್ನೂರು ಗೋವಿಂದ ಪ್ರಸಾದ್ ಹಾಗೂ ಕರ್ನಾಟಕ ಸಂಗೀತಗಾರ್ತಿ ವೈಷ್ಣವಿ ಆನಂದ್ ಅವರ ಮುಂದಾಳತ್ವದಲ್ಲಿ ಗೋಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಿದ್ಧ ನೃತ್ಯಕಲಾವಿದೆ ಡಾ। ಪದ್ಮಾಸುಬ್ರಹ್ಮಣ್ಯಂ ಅವರ ನಿರ್ದೇಶನದಲ್ಲಿ ನೃತ್ಯೋತ್ಸವದಲ್ಲಿ ಕೇರಳ, ಕರ್ನಾಟಕ, ಆಂದ್ರ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಮೊದಲಾದ ರಾಜ್ಯಗಳಿಂದ ಪ್ರಸಿದ್ಧ ನೃತ್ಯಪಟುಗಳು ಕಲಾಸಕ್ತರ ಮನತಣಿಸಲಿದ್ದಾರೆ.