ಸಾರಾಂಶ
ಗಂಗಾವತಿ: ಎರಡು ವರ್ಷಗಳಿಂದ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರನ ವಿರುದ್ಧ ಪ್ರಿಯತಮೆ ಠಾಣೆಯ ಮೆಟ್ಟಿಲೇರಿದ್ದಾಳೆ.ಯುವತಿಯ ಕುಟುಂಬ ಶುಕ್ರವಾರ ತಡರಾತ್ರಿ ಠಾಣೆಗೆ ಆಗಮಿಸಿ ದೂರು ನೀಡಿದ್ದು, ಕನಕಗಿರಿ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮದ ಯುವಕ ಶಿವರಾಜ ಎಂಬವರ ವಿರುದ್ಧ ಶನಿವಾರ ಬೆಳಿಗ್ಗೆ ಪ್ರಕರಣ ದಾಖಲಾಗಿದೆ.ಹಿರೇಡಂಕನಕಲ್ ಗ್ರಾಮದ ಯುವತಿ ಹಾಗೂ ಚಿಕ್ಕಡಂಕನಕಲ್ನ ಯುವಕ ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಗೆ ಯುವತಿಯ ಪೋಷಕರು ಒಪ್ಪಿಗೆ ಸೂಚಿಸಿದ್ದರು. ಆದರೆ ಪ್ರಿಯಕರನ ತಂದೆ-ತಾಯಿ ಮದುವೆಗೆ ವಿರೋಧಿಸಿ ಯುವತಿಯ ಪಾಲಕರಿಗೆ ಜೀವ ಬೆದರಿಕೆ ಹಾಕಿದ್ದರು. ಇದಕ್ಕೆ ಹೆದರಿದ ಯುವತಿಯ ಪಾಲಕರು ಬೇರೊಬ್ಬ ಯುವಕನ ಜತೆ ಯುವತಿಯ ಮದುವೆ ನಿರ್ಣಯಿಸಿ ಶುಕ್ರವಾರ ರಾತ್ರಿ ಹೂವು-ಹಣ್ಣು ಇಡುವ ಕಾರ್ಯಕ್ರಮ ನಡೆಸಲಾಗಿತ್ತು. ಈ ವೇಳೆ ಆರೋಪಿ ಶಿವರಾಜ ಆಗಮಿಸಿ ಯುವತಿಯ ಪಾಲಕರಿಗೆ ನಿಂದಿಸಿದ್ದಾನೆ. ಯುವತಿ ಪ್ರೀತಿಸಿದ ವಿಷಯ ಊರೆಲ್ಲ ಹರಡಿಸಿ, ಆಕೆಯ ಜೀವನ ಹಾಳು ಮಾಡಿದ್ದಾನೆ. ಆರೋಪಿ ವಿರುದ್ಧ ಕ್ರಮ ಕೈಗೊಂಡು ಆತನ ಜೊತೆಯೇ ಮದುವೆ ಮಾಡಿಸಿಕೊಡಬೇಕು ಎಂದು ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.