ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ನಗರ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 2025-26 ನೇ ಸಾಲಿಗೆ ವಿವಿಧ ಮೂಲಗಳಿಂದ 6.21 ಕೋಟಿ ರು. ಹಾಗೂ ವಿವಿಧ ಅಭಿವೃದ್ಧಿ ಯೋಜನೆ 5.59 ಕೋಟಿ ರು. ಖರ್ಚು ಇರುವ 62.18 ಲಕ್ಷ ರು. ಮಿಗತೆ ಬಜೆಟನ್ನು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಅವರು ಮಂಡಿಸಿದರು.ಬೆಳ್ತಂಗಡಿ ಪಟ್ಟಣ ಪಂಚಾಯಿತಿನಲ್ಲಿ ಅಧ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಬಜೆಟ್ ಸಭೆಯಲ್ಲಿ ಚರ್ಚೆ ನಡೆದು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಬಳಿಕ ಸಾಮಾನ್ಯ ಸಭೆ ನಡೆಯಿತು.ಬೆಳ್ತಂಗಡಿ ವಿಘ್ನೇಶ್ ಸಿಟಿ ಎದುರು, ಅಯ್ಯಪ್ಪ ಗುಡಿಯ ಬಳಿ ವಾಹನ ಪಾರ್ಕಿಂಗ್ ಮಾಡಿ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಚರ್ಚ್ ರಸ್ತೆ ಹಾಗೂ ವಾಣಿ ಕಾಲೇಜು ಬಳಿ ರಸ್ತೆ ದಾಟಲು ಶಾಲಾ ಮಕ್ಕಳಿಗೆ ಸಮಸ್ಯೆಯಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಲು ನಗರ ಸಂಚಾರ ಠಾಣೆಗೆ ಹಾಗೂ ಬೆಳ್ತಂಗಡಿ ಪೊಲೀಸ್ ಪಂಚಾಯಿತಿ ನೇರ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.ಆದಾಯ ನಿರೀಕ್ಷೆ: ಆರಂಭಿಕ ಶುಲ್ಕ54.48 ಲಕ್ಷ ರು., ಆಸ್ತಿ ತೆರಿಗೆ, ಸಂತೆ ಮತ್ತು ಮೀನು ಮಾರುಕಟ್ಟೆ ನೀರಿನ ತೆರಿಗೆ, ಕಟ್ಟಡ ಪರವಾನಿಗೆ, ಸ್ಟಾಲ್ ಬಾಡಿಗೆ, ವ್ಯಾಪಾರೋದ್ಯಮ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಅನುದಾನ ಸೇರಿ ಒಟ್ಟು 5.66 ಕೋಟಿ ರು. ಸೇರಿದಂತೆ ಒಟ್ಟು 6.21 ಕೋಟಿ ರು. ಅನುದಾನವನ್ನು ವಿವಿಧ ಮೂಲಗಳಿಂದ ಜಮೆ ಮಾಡಲಾಗುವುದು.ಮುಖ್ಯ ಖರ್ಚುಗಳು: ಚರಂಡಿ ಹೂಳೆತ್ತುವುದು 7.88 ಲಕ್ಷ ರು., ಅಭಿವೃದ್ಧಿ ಕಾಮಗಾರಿಗಳಿಗೆ 16.50 ಲಕ್ಷ ರು., ಸಾರ್ವಜನಿಕ ಶೌಚಾಲಯ ದುರಸ್ತಿ 2 ಲಕ್ಷ ರು., ವಾಹನ ನಿರ್ವಹಣೆ ಹಾಗೂ ದುರಸ್ತಿ 12 ಲಕ್ಷ ರು., ನೀರು ಸರಬರಾಜು ಮತ್ತು ವಿದ್ಯುತ್ ಬಿಲ್ 40 ಲಕ್ಷ ರು., ಸೇರಿ 5.59 ಕೋಟಿ ರು. ವಿನಿಯೋಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
6 ವರ್ಷವಾದರೂ ಮುಗಿಯದ ಕಾಮಗಾರಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಕೋಟಿ ರು. ವೆಚ್ಚದಲ್ಲಿ 33 ಕಾಮಗಾರಿ ಗುತ್ತಿಗೆಯನ್ನು ವಹಿಸಿಕೊಂಡ ಕೆಆರ್ ಡಿಎಲ್ ನವರು 6 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸದಿರುವ ವಿಚಾರ ಚರ್ಚೆಗೆ ಒಳಗಾಯಿತು. ಎಂಜಿನಿಯರ್ ಪ್ರದೀಪ್ ಸಭೆಗೆ ಮಾಹಿತಿ ನೀಡಿ ಒಟ್ಟು 34 ಕಾಮಗಾರಿಯಲ್ಲಿ 24 ಕಾಮಗಾರಿ ಪೂರ್ಣವಾಗಿದೆ. ಇದರಲ್ಲಿ 27 ಕಾಮಗಾರಿ ಹಸ್ತಾಂತರವಾಗಿದೆ. 4 ಕಾಮಗಾರಿ ಬಾಕಿ ಇದೆ, 5.50 ಕೋಟಿ ರು. ಮಾತ್ರ ಸರ್ಕಾರದಿಂದ ಬಿಡುಗಡೆಯಾಗಿದೆ. ಹೆಚ್ಚುವರಿ 3.50 ಕೋಟಿ ರು. ಕಾಮಗಾರಿ ಮಾಡಲಾಗಿದೆ. ಅನುದಾನ ಬಾರದೆ ಕೆಲಸ ಬಾಕಿಯಾಗಿದೆ ಎಂದರು. 6 ವರ್ಷವಾದರೂ ಕಾಮಗಾರಿ ಪೂರ್ತಿ ಮಾಡದಿರುವುದಕ್ಕೆ ಸದಸ್ಯ ಜಗದೀಶ್ ಎಂಜಿಯರ್ ಅನ್ನು ತರಾಟೆಗೆ ತೆಗೆದುಕೊಂಡರು.ಉಪಾಧ್ಯಕ್ಷೆ ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಪ.ಪಂ. ಸದಸ್ಯರು, ನಾಮನಿರ್ದೇಶನ ಸದಸ್ಯರು, ಮೆಸ್ಕಾಂ, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರಾಜೇಶ್ ಸ್ವಾಗತಿಸಿ, ಎಂಜಿನಿಯರ್ ಮಹಾವೀರ ಆರಿಗ ವಂದಿಸಿದರು.
ಬೆಳ್ತಂಗಡಿಗೆ ಸದ್ಯದಲ್ಲೇ ರಾಷ್ಟ್ರಪತಿಗಳ ಭೇಟಿ:ಬೆಳ್ತಂಗಡಿಗೆ ರಾಷ್ಟ್ರಪತಿಗಳು ಬರುವ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿರುವುದರಿಂದ ಬೆಳ್ತಂಗಡಿ ಸಮಾಜ ಮಂದಿರದ ಬಳಿಯಿಂದ ರೆಂಕೆದಗುತ್ತು. ಚೌಕದಬೆಟ್ಟು ರಸ್ತೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಸುಮಾರು 20 ಲಕ್ಷ ರು. ಗೂ ಹೆಚ್ಚು ಅನುದಾನ ಬೇಕಾಗಬಹುದು ಎಂದು ಎಂಜಿನಿಯರ್ ಹೇಳಿದರೆ, ಈ ಬಗ್ಗೆ ಡಿ.ಸಿಯವರನ್ನು ಮುಖತಃ ಭೇಟಿ ಮಾಡಿ ಮಾತನಾಡುವ ಎಂದು ಅಧ್ಯಕ್ಷ ಜಯಾನಂದ ಸಲಹೆ ನೀಡಿದರು. ರಾಷ್ಟ್ರಪತಿಗಳು ಬರುವುದಾದರೆ, ಜಿಲ್ಲಾಡಳಿತದಿಂದಲೆ ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಬಹುದು ಎಂದು ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.|