ಬೆಳ್ತಂಗಡಿ: ನದಿಗೆ ತ್ಯಾಜ್ಯ ಎಸೆದು ನೀರು ಮಲಿನಗೊಳಿಸುವವರ ಪತ್ತೆಗೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಪಂ ಉಪಾಯ ಕಂಡುಕೊಂಡಿದೆ. ತ್ಯಾಜ್ಯ ಎಸೆದವರಿಗೆ 5,000 ರೂ. ದಂಡ, ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿದರೆ 1,000 ರೂ. ಬಹುಮಾನ ನೀಡುವ ಬಗ್ಗೆ ನದಿ ಬಳಿ ಅಳವಡಿಸಿರುವ ಸೂಚನಾ ಫಲಕ ಗಮನ ಸೆಳೆಯುತ್ತಿದೆ.

ಬಳಕೆಯಾದ ಪ್ಲಾಸ್ಟಿಕ್, ಹಾಳೆ ತಟ್ಟೆಗಳು, ಪ್ಲಾಸ್ಟಿಕ್ ಚೀಲಗಳು, ಬಾಟಲಿ, ಲೋಟ, ಮದ್ಯದ ಬಾಟಲಿ, ಪ್ಯಾಂಪರ್ಸ್‌ ಸಹಿತ ಸೆಲೂನ್‌ಗಳಲ್ಲಿನ ತಲೆಕೂದಲು ಇತ್ಯಾದಿ ತ್ಯಾಜ್ಯಗಳನ್ನು ಗೋಣಿಚೀಲದಲ್ಲಿ ತುಂಬಿ ಕೈಕಂಬ ಸೇತುವೆ ಕೆಳಗೆ ನದಿಗೆ ಸುರಿಯಲಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿ ಗಮನಕ್ಕೂ ತಂದಿದ್ದರು. ಇದೀಗ ಎಚ್ಚೆತ್ತ ನಾವೂರು ಗ್ರಾಪಂ ಕೈಕಂಬ ಸೇತುವೆ ಬಳಿ ಸೂಚನಾ ಫಲಕ ಅಳವಡಿಸಿ, ಸಾರ್ವಜನಿಕ ಪ್ರಕಟನೆ ಹೊರಡಿಸಿದೆ.

ನಾವೂರು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಿ ದಾಖಲೆ ಸಹಿತ ಗ್ರಾಪಂಗೆ ತಿಳಿಸಿದರೆ ಗ್ರಾಪಂನಿಂದ 1 ಸಾವಿರ ರು. ಬಹುಮಾನ ನೀಡುವುದಾಗಿ ಘೋಷಿಸಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಟ್ಟು ತ್ಯಾಜ್ಯ ಸುರಿದವರಿಗೆ 5 ಸಾವಿರ ರು. ದಂಡ ವಿಧಿಸುವ ಎಚ್ಚರಿಕೆಯನ್ನು ಫಲಕದಲ್ಲಿ ನೀಡಲಾಗಿದೆ.

ಹೆಚ್ಚಾಗಿ ರಾತ್ರಿ ಸಮಯದಲ್ಲಿ ತ್ಯಾಜ್ಯ ಎಸೆಯಲಾಗುತ್ತಿದ್ದು, ಇಂತಹ ಸಂದರ್ಭ ತ್ಯಾಜ್ಯ ಎಸೆದವರನ್ನು ಗುರುತಿಸುವುದು ಕಷ್ಟ. ಆದ್ದರಿಂದ ತ್ಯಾಜ್ಯ ಎಸೆಯುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳಡಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆ.