ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಬೇಳೂರು ಬಾಣೆ ಸಮೀಪದಲ್ಲಿರುವ ಬೇಳೂರು ಕ್ಲಬ್ ನವರು ೨೩.೧೨ ಏಕರೆ ತಮ್ಮದಲ್ಲದ ಜಾಗಕ್ಕೆ ಬೇಲಿ ನಿರ್ಮಾಣ ಮಾಡಿ, ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ತಡೆಯೊಡ್ಡಿ ಬೆದರಿಸುತ್ತಿರುವ ಬಗ್ಗೆ ಬೇಳೂರು ಬಾಣೆ ರಕ್ಷಣಾ ಹೋರಾಟ ಸಮಿತಿ ಸಭೆ ಸಮಿತಿ ಸಭೆ ನಡೆಸಿತು. ಸಮಿತಿ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಅಧ್ಯಕ್ಷತೆಯಲ್ಲಿ ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸಲಾಯಿತು.ಬೇಳೂರು ಕ್ಲಬ್ ಅವರು ಅನಧಿಕೃತವಾಗಿ, ೭.೧೨ಏಕರೆ, ಮುರುಘರಾಜೇಂದ್ರ ಮಠಕ್ಕೆ ಸೇರಿದ ೧೧ ಏಕರೆ, ೫ ಏಕರೆ ಪೈಸಾರಿ ಹಾಗೂ ಊರುಡುವೆಗೆ ಸೇರಿದ ಜಾಗಕ್ಕೆ ಅನಧಿಕೃತವಾಗಿ ಚೈನ್ ಲಿಂಕ್ ಮೆಶ್ ಬೇಲಿಯನ್ನು ನಿರ್ಮಾಣ ಮಾಡಿ, ಸ್ಥಳಿಯರು ಮತ್ತು ಪ್ರವಾಸಿಗರಿಗೆ ತಡೆಯುಡ್ಡಿ ಬೆದರಿಸುತ್ತಿರುವ ಬಗ್ಗೆ ವಿಷಯ ಮಂಡಿಸಿದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಮಾತನಾಡಿ, ಸಾಕಷ್ಟು ಪ್ರವಾಸಿಗರು ಭೇಟಿ ನೀಡುವ ಸ್ಥಳಕ್ಕೆ ಕ್ಲಬ್ ಅವರು ಬೇಲಿ ನಿರ್ಮಿಸಿರುವುದು ತಪ್ಪು, ತಕ್ಷಣ ಬೇಳೂರು ಬಾಣೆ ರಕ್ಷಣಾ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿ ಕಾನೂನಾತ್ಮಕವಾಗಿ ಹೋರಾಡುವ ವ್ಯವಸ್ಥೆಯಾಗಬೇಕು. ಸರ್ಕಾರಕ್ಕೆ ನಿವೇಶನ ರಹಿತರಿಗೆ ನಿವೇಶನ ನೀಡಲು ಸ್ಥಳ ಇಲ್ಲ. ಒತ್ತುವರಿಗೆ ಅವಕಾಶ ಮಾಡಿಕೊಡುತ್ತಾರೆ. ಹೋರಾಟಕ್ಕೆ ದಿನ ನಿಗದಿಗೊಳಿಸಿ ಹೋರಾಡುವ. ಮುಂದಿನ ಎಲ್ಲ ಹೋರಾಟಕ್ಕೆ ಕರವೇ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಆಟೋ ಚಾಲಕ ರವೀಶ್ ಮಾತನಾಡಿ, ಬಾಣೆಗೆ ಹಾಕಿರುವ ಬೇಲಿಯ ಕುರಿತು ಈಗಾಗಲೇ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದರೂ, ಯಾವುದೇ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಸರ್ಕಾರಿ ಭೂಮಿಯನ್ನೇ ಒತ್ತುವರಿ ಮಾಡಿದರೂ, ಇಲಾಖೆ ಕೈಕಟ್ಟಿ ಕುಳಿತಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು. ಉದ್ಯಮಿ ಮಿಥುನ್ ಹಾನಗಲ್ಲು ಮಾತಾನಾಡಿ, ಬೇಲಿ ಹಾಕಿ ಒಂದು ವರ್ಷ ಕಳೆದಿದೆ. ಇದಕ್ಕೆ ರಾಜ್ಯದ ಒಬ್ಬರು ಸಚಿವರ ಕುಮ್ಮಕ್ಕಿನಿಂದ ಅಧಿಕಾರಿಗಳು ಬೇಲಿ ತೆರವುಗೊಳಿಸಲು ಮುಂದಾಗುತ್ತಿಲ್ಲ. ನೂರಾರು ಜನರಿಗೆ ನೆಮ್ಮದಿ ನೀಡುತೀರಿವ ಸ್ಥಳ. ಅದಕ್ಕೆ ಕಡಿವಾಣ ಹಾಕಲಾಗಿದೆ. ಬೇಳೂರು ಮತ್ತು ಆ ಭಾಗದ ಜನರು ಹೋರಾಟಕ್ಕೆ ರೂಪು ರೇಷೆ ಮಾಡಬೇಕಿದೆ. ಪ್ರವಾಸಿಗರ ಹೆಸರಿನಲ್ಲಿ ಸ್ಥಳದಲ್ಲಿ ಪುಂಡುಪೋಕರಿಗಳ ಹಾವಳಿ ಆರೋಪ ಇದ್ದು, ಅದಕ್ಕೆ ಕಡಿವಾಣ ಹಾಕುವ ಕೆಲಸ ಸಮಿತಿ ಮಾಡಬೇಕಿದೆ ಎಂದು ತಿಳಿಸಿದರು. ಬೇಳೂರು ಗ್ರಾಮಸ್ಥ ರಾಜಣ್ಣ ಮಾತನಾಡಿ, ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರಿಗೆ ಬೇಲಿ ಹಾಕಲು ಪ್ರಾರಂಭಿಸಿದ ತಕ್ಷಣ ದೂರು ನೀಡಲಾಗಿತ್ತು. ಆದರೆ ಯಾವುದೇ ಕ್ರಮವಹಿಸಿಲ್ಲ. ಈ ಸ್ಥಳದಲ್ಲಿ ಅಂಗನವಾಡಿ ಮತ್ತು ಕೆಲವರಿಗೆ ಇಲ್ಲಿಯೇ ಸ್ಥಳ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸರ್ವೆ ನಂಬರ್ ೧೪೩/೧೨ರಲ್ಲಿ ಬೇಳೂರು ಕ್ಲಬ್ಗೆ ಬೇಲಿ ನಿರ್ಮಿಸಲು ಯಾವುದೇ ಇಲಾಖೆ ಅನುಮತಿ ನೀಡಿಲ್ಲ. ಸಾರ್ವಜನಿಕರಿಗೆ ಬಾಣೆಗೆ ಪ್ರವೇಶಿಸಬಹುದು ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಬೇಲಿ ತೆಗೆಸಲು ತಹಸೀಲ್ದಾರ್ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡಲು ಸಭೆ ತೀರ್ಮಾನಿಸಿತು. ೭ ದಿನಗಳ ಸಮಯ ನೀಡಿ, ಬೇಲಿ ತೆಗೆಸಲು ವಿಫಲರಾದಲ್ಲಿ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದು ಸಭೆ ತೀರ್ಮಾನಿಸಿತು.