ಆಶ್ರಯ ನಿವೇಶನದ ಹಕ್ಕಪತ್ರ ನೀಡಿ 8 ವರ್ಷ ಕಳೆದರೂ ಸಂಪರ್ಕ ರಸ್ತೆಯಿಲ್ಲ, ಮೂಲಭೂತ ಸೌಲಭ್ಯ ಮರೀಚಿಕೆಯಾಗಿವೆ. ಪುರಸಭೆ ನಿವೇಶನ ಜಾಗ ತೋರಿಸುವ ಕೆಲಸವನ್ನೂ ಮಾಡಿಲ್ಲ ಎಂದು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ ಆರೋಪಿಸಿದರು.

ಲಕ್ಷ್ಮೇಶ್ವರ: ಆಶ್ರಯ ನಿವೇಶನದ ಹಕ್ಕಪತ್ರ ನೀಡಿ 8 ವರ್ಷ ಕಳೆದರೂ ಸಂಪರ್ಕ ರಸ್ತೆಯಿಲ್ಲ, ಮೂಲಭೂತ ಸೌಲಭ್ಯ ಮರೀಚಿಕೆಯಾಗಿವೆ. ಪುರಸಭೆ ನಿವೇಶನ ಜಾಗ ತೋರಿಸುವ ಕೆಲಸವನ್ನೂ ಮಾಡಿಲ್ಲ ಎಂದು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ ಆರೋಪಿಸಿದರು.

ಪಟ್ಟಣದ ಪುರಸಭೆ ಎದುರು ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಆಶ್ರಯ ಫಲಾನುಭವಿಗಳೊಂದಿಗೆ ನಡೆದ ಅಹೋರಾತ್ರಿ ಧರಣಿ ಪ್ರತಿಭಟನೆ ವೇಳೆ ಮಾತನಾಡಿದರು.

ಪಟ್ಟಣದ ಪುರಸಭೆಯು ಕಳೆದ 2018ರಲ್ಲಿ ತಮ್ಮಾ ತಿಮ್ಮಿ ಗುಡ್ಡದಲ್ಲಿನ ಆಶ್ರಯ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಿದ್ದರು. ಆದರೆ, ಇದುವರೆಗೂ ಯಾವುದೇ ಮೂಲಭೂತ ಸೌಲಭ್ಯ ಒದಗಿಸಿಲ್ಲ, ಹಕ್ಕುಪತ್ರ ಕೊಡುವ ವೇಳೆ ಪ್ರತಿ ಫಲಾನುಭವಿಗಳಿಂದ ಸ್ಥಳದ ಅಭಿವೃದ್ಧಿ ಮಾಡುತ್ತೇವೆ ಎಂದು ₹2000 ತೆಗೆದುಕೊಂಡಿದ್ದಾರೆ. ಅದು ಅಂದಾಜು ₹9 ಲಕ್ಷ ಆಗುತ್ತದೆ. ಆ ಹಣ ಯಾವ ಅಭಿವೃದ್ಧಿಗೆ ಬಳಿಸಿಕೊಂಡಿದ್ದೀರಿ? ಅಲ್ಲದೆ, ಇದೇ ಜಾಗದ ಅಭಿವೃದ್ಧಿಗೆ ₹9 ಲಕ್ಷ ಬಿಲ್ ಬಿಡುಗಡೆ ಆಗಿದೆ ಎಂದು ಹೇಳುತ್ತೀರಿ. ಅಧಿಕಾರಿಗಳು ಅಲ್ಲಿ ಹೋಗಿ ಪರಿಶೀಲನೆ ಮಾಡಬೇಕು. ಫಲಾನುಭವಿಗಳ ಕಡೆ ತೆಗೆದುಕೊಂಡು ಹಣ ಎಲ್ಲಿ ಹೋಯಿತು? ಪುರಸಭೆಯು ಕೇವಲ ಹಕ್ಕುಪತ್ರ ಕೊಟ್ಟು ಕೈತೊಳೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,

ಧರಣಿ ನಿರತ ಮಹಿಳೆಯರು ಮಾತನಾಡಿ, ಕಳೆದ 8 ವರ್ಷದಿಂದ ಅಧಿಕಾರಿಗಳ ಕಾಲು ಹಿಡಿದುಕೊಂಡು ಬೇಡಿ ಕೊಂಡರೂ ಜಾಗೆ ತೋರಿಸಿಲ್ಲ, ನಿವೇಶನ ಜಾಗಕ್ಕೆ ಟ್ಯಾಕ್ಸ್ ಕಟ್ಟುತ್ತ ಬಂದಿದ್ದೇವೆ. ಪದೇ ಪದೇ ಪುರಸಭೆಗೆ ಅಲೆದಾಡಿ ಸಾಕಾಗಿದೆ. ಬಾಡಿಗೆ ಮನೆಯಲ್ಲಿದ್ದು ಕಣ್ಣೀರನಲ್ಲಿ ಕೈತೊಳೆದುಕೊಳ್ಳುತ್ತಿದ್ದೇವೆ. ಮನೆಯಿಲ್ಲ ಎಂದು ಜನರು ಅವಮಾನ ಮಾಡುತ್ತಿದ್ದಾರೆ. ಇಷ್ಟಾದರೂ ಯಾವೊಬ್ಬ ರಾಜಕಾರಣಿಗಳು, ಅಧಿಕಾರಿಗಳು ಬಡವರ ರಕ್ಷಣೆಗೆ ಬರುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡರು.

ವಾರದಲ್ಲಿ ರಸ್ತೆಗೆ ಜಾಗ ಖರೀದಿ

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಸಂಪರ್ಕ ರಸ್ತೆ ಖರೀದಿಸಲು ಆಡಳಿತಾಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗಿದೆ. ಈ ವಾರ ಖರೀದಿ ಮಾಡುತ್ತೇವೆ. ರಸ್ತೆ, ವಿದ್ಯುತ್, ಚರಂಡಿ ಸಂಪರ್ಕ, ರಸ್ತೆ ನಿರ್ಮಿಸಲು ಡಿಪಿಆರ್ ಮಾಡಬೇಕಿತ್ತು. ಶಾಸಕ ನೇತೃತ್ವದಲ್ಲಿ ಆಶ್ರಯ ಸಮಿತಿ ಜೊತೆಗೆ ಮೀಟಿಂಗ್ ಆಗಿದ್ದು, ಠರಾವು ಮಾಡಿ ಆಡಳಿತ ಅಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಎರಡು ದಿನದಲ್ಲಿ ಆಶ್ರಯ ನಿಗಮಕ್ಕೆ ಹೋಗಿ ಮುಟ್ಟುತ್ತದೆ. ಈ ವಾರ ಸದ್ಯ ಜಾಗೆ ಗುರುತಿಸಿ ಸಂಪರ್ಕ ರಸ್ತೆ ಖರೀದಿ ಮಾಡಲಾಗುವುದು. ಅದೇ ರೀತಿ ಕೆಇಬಿ 16 ಎಕರೆಗೆ ₹50 ಲಕ್ಷ ವಿದ್ಯುತ್ ಸಲುವಾಗಿ ಎಸ್ಟಿಮೇಟ್ ಮಾಡಿದ್ದು, ಅಲ್ಲಿ ಅಭಿವೃದ್ಧಿಗಾಗಿ ₹5 ಕೋಟಿ ಅಂದಾಜು ಪಟ್ಟಿ ತಯಾರಿಸಿದ್ದೇವೆ. ಧರಣಿ ವಾಪಾಸ್ ತೆಗೆದುಕೊಳ್ಳಿ ಎಂದರು. ಮುಖ್ಯಾಧಿಕಾರಿ ಭರವಸೆಗೆ ಒಪ್ಪಿದ ಹೋರಾಟಗಾರರು ತಮ್ಮ ಹೋರಾಟವನ್ನು ವಾಪಸ್ ಪಡೆದರು.

ಈ ವೇಳೆ ಸುರೇಶ ಹಟ್ಟಿ, ಪ್ರಕಾಶ ಕೊಂಚಿಗೇರಿಮಠ, ಸುರೇಶ ಮಿಸ್ಕಿನ, ಇಲಿಯಾಸಅಲಿ ಮೀರಾನವರ, ಮಂಜಪ್ಪ, ಶಿರಹಟ್ಟಿ, ಮಹಾಂತೇ ಶ ಗುದ್ನಾಳ, ರೇವತಿ ಕಟ್ಟಿಮನಿ, ನಜೀರ ನದಾಫ, ಸೋಮಯ್ಯ ಕಲಕೇರಿಮಠ, ಶಿವಪ್ಪ ಭಗೀರಕಾರ, ಯಾಸ್ಮಿನಬಾನು ಪೀರಜಾದೆ, ಪಾತಿಮಾ ಕಾಗದಗಾರ, ಶೋಭಾ ಕಮತದ, ರೇಣುಕಾ ಮುದಕವಿ ಹಾಗೂ ಅನೇಕ ಮಹಿಳೆಯರು ಇದ್ದರು.