ಅಂತರ್ ಬೆಳೆ ಪದ್ಧತಿಯಿಂದ ಕೃಷಿಯಲ್ಲಿ ಲಾಭ: ಡಾ. ಸಿದ್ದಲಿಂಗಮ್ಮ

| Published : May 07 2025, 12:53 AM IST

ಸಾರಾಂಶ

ನಮ್ಮ ಕೃಷಿ ಭೂಮಿಯನ್ನು ನಾಳಿನ ಪೀಳಿಗೆಗಾಗಿಯೂ ಉಳಿಸಬೇಕಾಗಿದೆ. ಭೂಮಿ ಫಲವತ್ತತೆ ಹಾಳಾಗದಂತೆ ಕಾಳಜಿ ವಹಿಸಬೇಕಾಗಿದೆ.

ಹಾನಗಲ್ಲ: ರೈತರು ಅಂತರ್ ಬೆಳೆ ಪದ್ಧತಿ ಅನುಸರಿಸಿ ಸಮಗ್ರ ಪೋಷಕಾಂಶ ಬಳಸಿ ಕೃಷಿಗೆ ಮುಂದಾದರೆ ನಷ್ಟರಹಿತ ಕೃಷಿ ಸಾಧ್ಯ ಎಂದು ಹನುಮನಮಟ್ಟಿ ಕೃಷಿ ಕೇಂದ್ರದ ಕೃಷಿ ತಜ್ಞೆ ಡಾ. ಸಿದ್ದಗಂಗಮ್ಮ ತಿಳಿಸಿದರು.ಮಂಗಳವಾರ ಇಲ್ಲಿನ ಗುರುಭವನದಲ್ಲಿ ಕೃಷಿ ಇಲಾಖೆ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ತಾಂತ್ರಿಕ ಮಾಹಿತಿ ನೀಡಿದ ಅವರು, ಸಾವಯವ ಹಾಗೂ ರಾಸಾಯನಿಕಗಳೆರಳನ್ನೂ ಸೂಕ್ತ ಪ್ರಮಾಣದಲ್ಲಿ ಬಳಸಿದರೆ ತಪ್ಪಿಲ್ಲ. ನಮ್ಮ ಕೃಷಿ ಭೂಮಿಯನ್ನು ನಾಳಿನ ಪೀಳಿಗೆಗಾಗಿಯೂ ಉಳಿಸಬೇಕಾಗಿದೆ. ಭೂಮಿ ಫಲವತ್ತತೆ ಹಾಳಾಗದಂತೆ ಕಾಳಜಿ ವಹಿಸಬೇಕಾಗಿದೆ. ರೈತರು ಅಂತರ್ ಬೆಳೆ ಪದ್ಧತಿಯನ್ನು ಅನುಸರಿಸುವುದರಿಂದ ಬೆಳೆ ನಷ್ಟದ ಪರಿಣಾಮ ಕಡಿಮೆ. ಬಿತ್ತನೆ ಬೀಜಗಳನ್ನು ಬಳಸುವಾಗ ಎಚ್ಚರಿಕೆ ಬೇಕು ಎಂದರು.ಕೃಷಿಕ ಸಮಾಜದ ಅಧ್ಯಕ್ಷ ಕೆ.ಟಿ. ಕಲಗೌಡರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಕರನ್ನು ನಿರ್ಲಕ್ಷಿಸುವ ಸಂದರ್ಭಗಳು ರೈತರನ್ನು ಕೆರಳಿಸುತ್ತವೆ. ಹಾನಗಲ್ಲಿನಲ್ಲಿ ರೈತ ವೃತ್ತ ಉದ್ಘಾಟಿಸುವಾಗ ರೈತ ಮುಖಂಡರನ್ನು ಹಾಗೂ ಕೃಷಿಕ ಸಮಾಜವನ್ನು ನಿರ್ಲಕ್ಷಿಸಿದರು. ಆಮಂತ್ರಣ ಪತ್ರಿಕೆಯಲ್ಲಿಯೂ ರೈತ ಮುಖಂಡರು, ಕೃಷಿಕ ಸಮಾಜದ ಪದಾಧಿಕಾರಿಗಳ ಹೆಸರನ್ನು ಹಾಕಲಿಲ್ಲ ಎಂದು ವಿಷಾದಿಸಿದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹೇಶ ಬಣಕಾರ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಎಚ್ಚರಿಕೆಯಿಂದ ವ್ಯಾಪಾರ ವಹಿವಾಟು ಮಾಡಬೇಕಾಗಿದೆ. ತಾಲೂಕಿನಲ್ಲಿ 114 ಕೃಷಿ ಪರಿಕರ ಮಾರಾಟ ಮಾಡುವವರಿದ್ದಾರೆ. ಸಭೆಗಳನ್ನು ಕರೆದಾಗ ಎಲ್ಲರೂ ಹಾಜರಾಗುವುದಿಲ್ಲ. ಸರ್ಕಾರ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಸಮಸ್ಯೆ ಸಿಕ್ಕಿಕೊಂಡು ಪರದಾಡುತ್ತಿದ್ದಾರೆ. ಮಾರಾಟಗಾರರ ತಪ್ಪಿನಿಂದ ಸ್ಥಳೀಯ ಕೃಷಿ ಅಧಿಕಾರಿಗಳು ಸಮಸ್ಯೆ ಎದುರಿಸುವಂತಾಗುತ್ತದೆ ಎಂದರು.ಸಹಾಯಕ ಕೃಷಿ ಆಧಿಕಾರಿ ಮಾರುತಿ ಅಂಗರಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ರಾಜಕುಮಾರ ಜೋಗಪ್ಪನವರ, ರಾಜೇಶ ಚಹ್ವಾಣ, ಮಹಮ್ಮದ್‌ಹನೀಫ ಬಂಕಾಪುರ, ಕೃಷಿಕ ಸಮಾಜದ ತಾಲೂಕು ಉಪಾಧ್ಯಕ್ಷ ಸಣ್ಣಿಂಗಪ್ಪ ಕೊಪ್ಪ, ಜಿಲ್ಲಾ ಪ್ರತಿನಿಧಿ ಅಡವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ವರಪ್ಪನವರ, ಸುರೇಶಗೌಡ ಪಾಟೀಲ, ಪಿ.ಕೆ. ಪಾಟೀಲ, ನಾಗಣ್ಣ ಒಡೆಯರ, ಸಂಕನಗೌಡ ದೇವಿಕೊಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ, ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ಎಂಎಫ್‌ಸಿ ಮ್ಯಾನೇಜರ್ ದೇವರಾಜ ಕುರಿ, ಪ್ರಶಾಂತ ಬಿರಾದಾರ ಮೊದಲಾದವರು ಅತಿಥಿಗಳಾಗಿದ್ದರು.ಭಗೀರಥ ಜಯಂತಿ ಆಚರಣೆ

ಹಿರೇಕೆರೂರು: ಭಗೀರಥರ ಸಂದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರ ಜಯಂತಿ ಅಚರಣೆಗೆ ಸಾರ್ಥಕತೆ ತರಬೇಕು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ಸೋಮವಾರ ನಡೆದ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜಕ್ಕೆ ಸರ್ಕಾರದಿಂದ ಬರುವ ಅನುದಾನದ ಸೌಲಭ್ಯಗಳನ್ನು ಒದಗಿಸಲಾಗುವುದು. ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.ಈ ವೇಳೆ ತಹಸೀಲ್ದಾರ್ ಎಚ್. ಪ್ರಭಾಕರ್ ಗೌಡ, ಕೇತ್ರ ಶಿಕ್ಷಣಾಧಿಕಾರಿ ಎನ್‌. ಶ್ರೀಧರ್, ಭಗೀರಥ ಸಮಾಜದ ತಾಲೂಕು ಅಧ್ಯಕ್ಷೆ ರುದ್ರೇಶ್ ಕನ್ನಣ್ಣನವರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷೆ ಗಿರೀಶ್ ಬಾರ್ಕಿ, ಲಕ್ಷ್ಮಪ್ಪ ತುಮರಿಕೊಪ್ಪ, ವೆಂಕಟೇಶ್ ಉಪಾರ, ಗಣೇಶ ಕರ್ನಲ್ಲಿ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ನಾಗರಾಜ ಕಟ್ಟಿಮನಿ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.