ಸಾರಾಂಶ
ಪದವಿ ಪೂರೈಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷರೆಂದು ಪರಿಗಣಿಸಿ ಮುಂದಿನ ಅವರ ಸೇವಾ ಬಡ್ತಿಗೆ ಪರಿಗಣಿಸಬೇಕು. ಅದೇ ರೀತಿ 2017ರ ಹೊಸ ನಿಯಮ ಜಾರಿಯಿಂದ 1ರಿಂದ 7ನೇ ತರಗತಿವರೆಗಿನ ಬೋಧನೆಗೆಂದು ನೇಮಕಾತಿ ಮಾಡಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 1ರಿಂದ 5ನೇ ತರಗತಿ ಬೋಧನೆಗೆ ಮಾತ್ರ ಸೀಮಿತ ಎಂದು ಹಿಂಬಡ್ತಿ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಪದವಿ ಮುಗಿಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಘೋಷಿಸಿಬೇಕು. 2017ರ ಹೊಸ ವೃಂದ ಮತ್ತು ನೇಮಕಾತಿಗಳನ್ನು 2016ರ ಮೊದಲು ನೇಮಕಗೊಂಡವರಿಗೆ ಪೂರ್ವಾನ್ವಯಗೊಳಿಸಬಾರದು ಎಂಬುದು ಸೇರಿದಂತೆ ತಮ್ಮ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆ.12ಕ್ಕೆ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಮಟ್ಟದ ಬ್ರಹತ್ ಪ್ರತಿಭಟನೆ ನಡೆಸಲು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಿಳಾ ಪ್ರತಿನಿಧಿ ನಾಗರತ್ನ ಬಳೂರ್ಗಿ ಹೇಳಿದರು.ಅವರು ತಾಲೂಕಿನ ಗೊಬ್ಬುರ( ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರು ಚಲೊ ಕಾರ್ಯಕ್ರಮ ಕುರಿತು ಸಮಾಲೋಚನೆ ಸಭೆ ಹಾಗೂ ಭಿತ್ತಿ ಪತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳೊಂದಿಗೆ ನಡೆಸಿರುವ ಶಿಕ್ಷಣ ಇಲಾಖೆಯ ಸಂಧಾನ ಸಭೆ ವಿಫಲವಾಗಿದೆ ಅದಕ್ಕಾಗಿ ಆ.12ರಂದು ಬೆಂಗಳೂರಿನಲ್ಲಿ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಯಲಿದೆ ಎಂದರು.
ಸಂಘದ ಪ್ರತಿನಿಧಿಗಳಾದ ಭೀಮಾಶಂಕರ ಮೇಳಕುಂದಿ ಪರಮಾನಂದ ಸರಸಂಬಾ ಶಿವಲಿಂಗಪ್ಪ ಹಡಪದ ಮಾತನಾಡಿ, ಪದವಿ ಪೂರೈಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷರೆಂದು ಪರಿಗಣಿಸಿ ಮುಂದಿನ ಅವರ ಸೇವಾ ಬಡ್ತಿಗೆ ಪರಿಗಣಿಸಬೇಕು. ಅದೇ ರೀತಿ 2017ರ ಹೊಸ ನಿಯಮ ಜಾರಿಯಿಂದ 1ರಿಂದ 7ನೇ ತರಗತಿವರೆಗಿನ ಬೋಧನೆಗೆಂದು ನೇಮಕಾತಿ ಮಾಡಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 1ರಿಂದ 5ನೇ ತರಗತಿ ಬೋಧನೆಗೆ ಮಾತ್ರ ಸೀಮಿತ ಎಂದು ಹಿಂಬಡ್ತಿ ನೀಡಲಾಗಿದೆ. ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ಸಾಕಷ್ಟು ಅನ್ಯಾ ಯವಾಗುತ್ತಿದೆ. ಈ ಎಲ್ಲದರ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿ ಅನ್ಯಾಯ ಸರಿಪಡಿಸಲು ಬೇಡಿಕೆ ಇಟ್ಟರೂ ಪ್ರಯೋಜನವಾಗಿಲ್ಲ. ಹೀಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.2016ಕ್ಕಿಂತ ಮೊದಲು ನೇಮಕಾತಿಯಾದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಅವಧಿ ಮುಗಿಯುವವೆಗೂ ಮೊದಲಿನಂತೆ 1ರಿಂದ 8ನೇ ತರಗತಿ ವರೆಗೆ ಬೋಧನೆಗೆ ಅವಕಾಶ ನೀಡಬೇಕು. ಸೇವಾ ಜೇಷ್ಠತೆ ಮೇಲೆ ಅವರಿಗೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು. ಪದವೀಧರ ಶಿಕ್ಷಕರಿಗೆ ಪ್ರೌಢ ಶಾಲಾ ಬಡ್ತಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ವಿಭಾಗ ಮಟ್ಟದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಹಕ್ಕಿನ ರಜೆಯನ್ನು ಬಳಸಿಕೊಂಡು ಆ. 12ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಶಿಕ್ಷಕ ವಿವಿಧ ಬೇಡಿಕೆಗಳ ಹೋರಾಟದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಭಾಗೀಯ ಉಪಾಧ್ಯಕ್ಷ ಶಿವಾನಂದ ಪೂಜಾರಿ ತಿಳಿಸಿದ್ದಾರೆ.