ಸಾರಾಂಶ
ಕನ್ನಡಪ್ರಭ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರಿಗೆ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಆಯೋಜಿಸಿದ್ದ ವಿಶ್ವಮಟ್ಟದ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಮೂರು ಅಂತಾರಾಷ್ಟ್ರೀಯ ಚಿನ್ನದ ಪದಕ, 1 ಕಂಚಿನ ಪದಕ ಹಾಗೂ 3 ಹಾನರೆಬಲ್ ಮೆನ್ಶನ್ ಗೌರವ ಲಭಿಸಿದೆ.
ಮೈಸೂರು : ಕನ್ನಡಪ್ರಭ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರಿಗೆ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಆಯೋಜಿಸಿದ್ದ ವಿಶ್ವಮಟ್ಟದ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಮೂರು ಅಂತಾರಾಷ್ಟ್ರೀಯ ಚಿನ್ನದ ಪದಕ, 1 ಕಂಚಿನ ಪದಕ ಹಾಗೂ 3 ಹಾನರೆಬಲ್ ಮೆನ್ಶನ್ ಗೌರವ ಲಭಿಸಿದೆ.
ಫೋಟೋಗ್ರಫಿಕ್ ಸೊಸೈಟಿ ಆಫ್ ಅಮೆರಿಕ (ಪಿಎಸ್ಎ) ಸಂಸ್ಥೆ ಆಯೋಜಿಸಿದ್ದ ಫೋಟೋಮೇನಿಯಾ ಸರ್ಕ್ಯೂಟ್- 2024 ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರವಾಸ ಛಾಯಾಚಿತ್ರ ವಿಭಾಗದಲ್ಲಿ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಛಾಯಾಚಿತ್ರಕ್ಕೆ ಪಿಎಸ್ಎ ಚಿನ್ನದ ಪದಕ ಲಭಿಸಿದೆ.
ಕೊಲ್ಕತ್ತಾದಲ್ಲಿ ಎಪಿಜೆ ನ್ಯಾಷನಲ್ ಸಲೂನ್ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಫೋಟೋ ಜರ್ನಲಿಸಂ ವಿಭಾಗದಲ್ಲಿ ಕಿಚ್ಚು ಹಾಯಿಸುವ ಚಿತ್ರಕ್ಕೆ ಎಪಿಜೆ ಚಿನ್ನದ ಪದಕ ಲಭಿಸಿದೆ. ದೆಹಲಿಯಲ್ಲಿ ಲೈಟ್ಸ್ ಆಫ್ ನೇಚರ್ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಲಾಠಿ ಚಾರ್ಜ್ ಚಿತ್ರಕ್ಕೆ ಜೆಎಸ್ವಿ ಚಿನ್ನದ ಪದಕ ಲಭಿಸಿದೆ.
ಪಶ್ಚಿಮ ಬಂಗಾಳದಲ್ಲಿ ಪಿಕಾಕ್ ಇಂಟರ್ ನ್ಯಾಷನಲ್ ಸಲೂನ್ ಸಂಸ್ಥೆ ನಡೆಸಿದ ಲೈಟ್ಸ್ ಆಫ್ ನೇಚರ್ 2024 ಸ್ಪರ್ಧೆಯಲ್ಲಿ ಮರಿಯೊಂದಕ್ಕೆ ಆಹಾರ ಉಣಿಸುತ್ತಿರುವ ರಿವರ್ಟನ್ ಪಕ್ಷಿಯ ಚಿತ್ರಕ್ಕೆ ಸರ್ಟಿಫಿಕೆಟ್ ಆಫ್ ಅವಾರ್ಡ್ ಲಭಿಸಿದೆ.
ಅಲ್ಲದೆ, ಹುಲಿಯೊಂದು ಹಂದಿಯನ್ನು ಅಟ್ಟಿಸುತ್ತಿರುವ ಚಿತ್ರಕ್ಕೆ ಎಪಿಜೆ ಕಂಚಿನ ಪದಕ ಬಂದಿದೆ. ಇದು ಮಾತ್ರವಲ್ಲದೆ ವಿವಿಧ ಚಿತ್ರಗಳಿಗೆ ವಿವಿಧ ಸಂಸ್ಥೆಗಳಿಂದ 3 ಹಾನರೆಬಲ್ ಮೆನ್ಶನ್ ಗೌರವವೂ ಸಿಕ್ಕಿದೆ.
ಈ ಸ್ಪರ್ಧೆಗಳಲ್ಲಿ ಅಮೆರಿಕ, ಆಫ್ರಿಕಾ, ಕೆನಡಾ, ಚೀನಾ, ಸ್ಪೇನ್, ಬ್ರೆಜಿಲ್, ಇಂಗ್ಲೆಡ್, ಫ್ರಾನ್ಸ್, ಗ್ರೀಸ್, ಹಾಕಾಂಗ್, ಇಟಲಿ, ಕಜಕಿಸ್ತಾನ್, ಮಲೇಷಿಯಾ, ನಾರ್ವೆ, ರಷ್ಯಾ, ಕೊರಿಯಾ ಸೇರಿ ವಿವಿಧ ದೇಶಗಳ ಛಾಯಾಗ್ರಾಹಕರೂ ಪಾಲ್ಗೊಂಡಿದ್ದರು.