ಸಾರಾಂಶ
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿ ದುರಂತ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರು ಸೇರಿ ಪೊಲೀಸರ ಅಮಾನತು ನಿರ್ಧಾರ ಖಂಡಿಸಿ ಇಂಡಿಯನ್ ಪೊಲೀಸ್ ಫೌಂಡೇಷನ್(ಐಪಿಎಫ್)ನ 30 ನಿವೃತ್ತ ಐಪಿಎಸ್ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿ ದುರಂತ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರು ಸೇರಿ ಪೊಲೀಸರ ಅಮಾನತು ನಿರ್ಧಾರ ಖಂಡಿಸಿ ಇಂಡಿಯನ್ ಪೊಲೀಸ್ ಫೌಂಡೇಷನ್(ಐಪಿಎಫ್)ನ 30 ನಿವೃತ್ತ ಐಪಿಎಸ್ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆ ನೋವು ತಂದಿದೆ. ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಭಾವಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇವೆ. ಅದೇ ರೀತಿ ಈ ಘಟನೆ ಕುರಿತು ನಿಷ್ಷಕ್ಷಪಾತ ತನಿಖೆಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರದ ಕ್ರಮ ಸೂಕ್ತವಾಗಿದೆ ಎಂದು ನಿವೃತ್ತ ಅಧಿಕಾರಿಗಳು ತಾವು ಬರೆದ ಎರಡು ಪುಟಗಳ ಪತ್ರದಲ್ಲಿ ಹೇಳಿದ್ದಾರೆ.
ಕಾಲ್ತುಳಿತ ದುರಂತ ಸಂಬಂಧ ಪ್ರಾಥಮಿಕ ಹಂತದ ತನಿಖೆ ನಡೆಸದೆ ಬೆಂಗಳೂರು ಆಯುಕ್ತರು ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ದೇಶವ್ಯಾಪಿ ವೃತ್ತಿಪರ ಪೊಲೀಸ್ ಸಮುದಾಯದ ಕುರಿತು ಕಳವಳ ಮೂಡಿಸಿದೆ. ತನಿಖೆ ನಡೆಸದೆ ಒಬ್ಬ ಅಧಿಕಾರಿಯನ್ನು ಹೊಣೆಗಾರನ್ನಾಗಿ ಮಾಡುವುದು ಪೊಲೀಸ್ ಪಡೆ ನೈತಿಕತೆ ಕುಸಿಯಲು ಕಾರಣವಾಗುತ್ತದೆ. ಅಲ್ಲದೆ, ಅಧಿಕಾರಿ ಹರಕೆ ಕುರಿ ಮಾಡಿರುವುದು ಗೊತ್ತಾಗಲಿದೆ ಎಂದು ದೂರಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಪೊಲೀಸರ ಅಮಾನತು ಆದೇಶ ಹಿಂಪಡೆದು ಮತ್ತೆ ಅವರನ್ನು ಕರ್ತವ್ಯಕ್ಕೆ ನಿಯೋಜಿಸಬೇಕು. ಈ ದುರಂತ ಪ್ರಕರಣದ ತನಿಖೆ ವರದಿ ಸಲ್ಲಿಕೆ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ನಿವೃತ್ತ ಅಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಪತ್ರಕ್ಕೆ ಕರ್ನಾಟಕ ರಾಜ್ಯದ ನಿವೃತ್ತ ಡಿಜಿಪಿ ಬಿ.ಎಸ್.ಸೈಲ್, ಬಿಎಸ್ಎಫ್ ನಿವೃತ್ತ ಡಿಜಿಪಿ ಪ್ರಕಾಶ್ ಸಿಂಗ್, ಸಿಬಿಐ ನಿವೃತ್ತ ನಿರ್ದೇಶಕ ಡಿ.ಆರ್.ಕಾರ್ತಿಕೇಯನ್, ಹಿಮಾಚಲ ಪ್ರದೇಶದ ನಿವೃತ್ತ ಡಿಜಿಪಿ ಸೌಮೇಶ್ ಗೋಯಲ್, ತಮಿಳುನಾಡು ನಿವೃತ್ತ ಡಿಜಿಪಿ ಕೆ.ಪಿ.ಜೈನ್, ಕೇಂದ್ರ ಸರ್ಕಾರದ ನಿವೃತ್ತ ಸಂಪುಟ ಕಾರ್ಯದರ್ಶಿ ಜಿಬಿಎಸ್ ಸಿದ್ದು, ಎನ್ಟಿಆರ್ಓ ಮಾಜಿ ಅಧ್ಯಕ್ಷ ಸತೀಶ್ ಚಂದ್ರ ಜಾ, ಆರ್ಪಿಎಫ್ನ ನಿವೃತ್ತ ಡಿಜಿ ಅರುಣ್ ಕುಮಾರ್, ದೆಹಲಿ ಮಾಜಿ ಆಯುಕ್ತ ಡಾ। ಕೆ.ಕೆ.ಪೌಲ್ ಹಾಗೂ ತ್ರಿಪುರಾ ನಿವೃತ್ತ ಡಿಜಿಪಿ ಸಂಜಯ್ ಸಿನ್ಹಾ ಸೇರಿದಂತೆ 30 ಅಧಿಕಾರಿಗಳು ಸಹಿ ಮಾಡಿದ್ದಾರೆ.