ಬೆಂಗಳೂರು : ಪರಿಶಿಷ್ಟ ಜಾತಿಗೆ ಇರುವ ಶೇ.15ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ದಲಿತ ಗುಂಪುಗಳಲ್ಲಿ ಉಂಟಾಗಿರುವ ತಿಕ್ಕಾಟ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ನೇಮಕಾತಿ ವೇಳೆ ಮೂರೂ ಗುಂಪುಗಳಿಗೆ ಸಮಾನ ಅವಕಾಶ ಸಿಗುವಂತೆ ‘ರೋಸ್ಟರ್ ಬಿಂದು’ ಮರುನಿಗದಿಪಡಿಸುವ ಸಲುವಾಗಿ ತಾಂತ್ರಿಕ ಸಮಿತಿ ರಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಸಂಬಂಧ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆಯಾಗಲಿದ್ದು, ಮೂರೂ ವರ್ಗಗಳನ್ನೂ ಸಮಾಧಾನಪಡಿಸಲು ತಾಂತ್ರಿಕ ಸಮಿತಿ ರಚನೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಎಸ್ಸಿ ಮೀಸಲಾತಿಯನ್ನು ಶೇ.15 ರಿಂದ ಶೇ.17 ಹಾಗೂ ಎಸ್ಟಿ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸುವ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಶೇ.15 ರಷ್ಟು ಎಸ್ಸಿ ಮೀಸಲಾತಿ ಅನ್ವಯವೇ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ವೇಳೆ ಶೇ.15 ಮೀಸಲಾತಿಯಲ್ಲೇ ಒಳ ಮೀಸಲಾತಿ ಕಲ್ಪಿಸುವಂತೆ ಎಡಗೈ ಸಮುದಾಯದ ಸಚಿವರು, ಮುಖಂಡರು ಪಟ್ಟು ಹಿಡಿದಿದ್ದಾರೆ.
ಬಲಗೈ ಸಮುದಾಯ ಒತ್ತಡ:
ಆದರೆ, ರೋಸ್ಟರ್ ಗೊಂದಲ, ನ್ಯಾಯಾಲಯದ ಅಡೆತಡೆ ನಿವಾರಣೆ ಆಗುವರೆಗೆ ಒಳ ಮೀಸಲಾತಿ ರಹಿತವಾಗಿ ಶೇ.15 ಮೀಸಲಾತಿ ಜಾರಿಗೊಳಿಸಬೇಕು ಎಂದು ಬಲಗೈ ಸಮುದಾಯ ಒತ್ತಡ ಹೇರಿದೆ.
ಒಳ ಮೀಸಲಾತಿ ಹಂಚಿಕೆ ಮಾಡಿ ಈಗಾಗಲೇ ನಿಗದಿಪಡಿಸಿರುವ ‘ರೋಸ್ಟರ್ ಬಿಂದು’ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆದರೆ ಗ್ರೂಪ್ ‘ಎ’ಗೆ (ಎಡಗೈ ಸಂಬಂಧಿತ ಜಾತಿಗಳು) ಅವಕಾಶ ಹೆಚ್ಚು ಸಿಗುತ್ತಿದೆ. ಗ್ರೂಪ್ ‘ಬಿ’ (ಬಲಗೈ ಸಂಬಂಧಿತ ಜಾತಿಗಳು) ಮತ್ತು ಗ್ರೂಪ್ ‘ಸಿ’ಗೆ (ಸ್ಪಶ್ಯ ಸಂಬಂಧಿತ ಮತ್ತು ಅಲೆಮಾರಿ, ಅರೆ ಅಲೆಮಾರಿ ಜಾತಿಗಳು) ಹುದ್ದೆ ಸಿಗುವ ಅವಕಾಶಗಳು ಕಡಿಮೆ ಎನ್ನುವುದು ಬಲಗೈ ಸಮುದಾಯದ ನಾಯಕರ ಆಕ್ಷೇಪ. ಈ ಬಗ್ಗೆ ಗಾಂಧಿ ಭವನದಲ್ಲಿ ಸಭೆ ನಡೆಸಿ ವಿರೋಧವನ್ನೂ ವ್ಯಕ್ತಪಡಿಸಿವೆ.
ಕಾಂಗ್ರೆಸ್ ನಾಯಕರು, ಸಚಿವರ ನಡುವೆ ತೀವ್ರ ಚರ್ಚೆ
ಈ ಹಿನ್ನೆಲೆಯಲ್ಲಿ ಬುಧವಾರ ಕಾಂಗ್ರೆಸ್ ನಾಯಕರು, ಸಚಿವರ ನಡುವೆ ತೀವ್ರ ಚರ್ಚೆ ನಡೆದಿದ್ದು, ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಈ ವಿಷಯ ಚರ್ಚೆಗೆ ಬರಲಿದೆ.
ಮೂರೂ ಗ್ರೂಪ್ಗಳಿಗೆ ಸಮಾನ ಅವಕಾಶ ಸಿಗುವಂತೆ ‘ರೋಸ್ಟರ್ ಬಿಂದು’ ಮರು ನಿಗದಿಪಡಿಸಲು ತಾಂತ್ರಿಕ ಸಮಿತಿಯನ್ನು ರಚಿಸುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.
