ಸಾರಾಂಶ
ರಾಜ್ಯಾದ್ಯಂತ 20 ದಿನಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚಾರಿಕಾ ಕ್ರಮ ಪಾಲಿಸಬೇಕು
ಬೆಂಗಳೂರು : ರಾಜ್ಯಾದ್ಯಂತ 20 ದಿನಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚಾರಿಕಾ ಕ್ರಮ ಪಾಲಿಸಬೇಕು. ವಿಶೇಷವಾಗಿ ಗರ್ಭಿಣಿಯರು, ಮಕ್ಕಳು ಹಾಗೂ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆ ಉಳ್ಳವರು ಜನದಟ್ಟಣೆ ಪ್ರದೇಶಕ್ಕೆ ತೆರಳುವಾಗ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಈ ಬಗ್ಗೆ ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಪ್ರಸಕ್ತ 35 ಸಕ್ರಿಯ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, 32 ಪ್ರಕರಣ ಬೆಂಗಳೂರಿನಲ್ಲೇ ಇವೆ. ಆದರೂ ಸೋಂಕು ಹತೋಟಿಯಲ್ಲಿದ್ದು ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು, ಮಕ್ಕಳು, ದೀರ್ಘಕಾಲೀನ ಅನಾರೋಗ್ಯ ಸಮಸ್ಯೆ ಉಳ್ಳವರು ಮುನ್ನೆಚ್ಚರಿಕಾ ಕ್ರಮವಾಗಿ ಜನದಟ್ಟಣೆ ಪ್ರದೇಶಕ್ಕೆ ತೆರಳುವಾಗ ಮಾಸ್ಕ್ ಧರಿಸಬೇಕು. ಕೊರೋನಾ ನಿಯಂತ್ರಣ ಕ್ರಮಗಳಾದ ಕೈಗಳ ಸ್ವಚ್ಛತೆ, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲಿಸುವುದು ಮತ್ತಿತರ ನಿಯಮ ಅನುಸರಿಸಲು ಸೂಚನೆ ನೀಡಿದೆ.
ಸಾರಿ, ಐಎಲ್ಐ ಲಕ್ಷಣ ಹೊಂದಿರುವವರು ಆದ್ಯತೆ ಮೇರೆಗೆ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡುವುದು ಸೂಕ್ತ. ಸೋಂಕು ದೃಢಪಟ್ಟರೆ ಸೂಕ್ತ ಚಿಕಿತ್ಸೆ ಪೆಡಯುವುದರಿಂದ ಸೋಂಕು ನಿಯಂತ್ರಿಸಬಹುದು ಎಂದು ಇಲಾಖೆ ಹೇಳಿದೆ.