ವಿಜಯನಗರ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ತೀವ್ರ ಬರ ಪರಿಸ್ಥಿತಿಗೆ ಒಳಗಾಗಿರುವ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನಿಂದ ಸಾವಿರಾರು ಜನರು ಗುಳೇ ಹೋಗಿ ಬೆಳೆ ಪೂರ್ತಿ ನಾಶವಾದರೂ ಸಹ ಈ ತಾಲೂಕುಗಳು ಬರ ಪೀಡಿತ ಪಟ್ಟಿಯಲ್ಲಿ ಇಲ್ಲ!

 ಸಿ.ಕೆ.ನಾಗರಾಜ

 ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ತೀವ್ರ ಬರ ಪರಿಸ್ಥಿತಿಗೆ ಒಳಗಾಗಿರುವ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನಿಂದ ಸಾವಿರಾರು ಜನರು ಗುಳೇ ಹೋಗಿ ಬೆಳೆ ಪೂರ್ತಿ ನಾಶವಾದರೂ ಸಹ ಈ ತಾಲೂಕುಗಳು ಬರ ಪೀಡಿತ ಪಟ್ಟಿಯಲ್ಲಿ ಇಲ್ಲ!

ಹೌದು, ಇದು ಅಚ್ಚರಿಯಾದರೂ ಸತ್ಯ. ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಿಂದ ರೈತರು, ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಲಾರಿ, ಬಸ್‌ ಮತ್ತಿತರ ವಾಹನಗಳ ಮೂಲಕ ಗುಳೆ ಹೋಗಿದ್ದಾರೆ. ‘ಕನ್ನಡಪ್ರಭ’ ಎರಡು ಬಾರಿ ಚಿತ್ರ ಸಹಿತ ಮುಖ ಪುಟದಲ್ಲಿ ವರದಿ ಮಾಡಿ ಗಮನ ಸೆಳೆದಿತ್ತು.

ರಾಜ್ಯ ಸರ್ಕಾರ ಗುರುವಾರ ಘೋಷಣೆ ಮಾಡಿದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕುಗಳು ನಾಪತ್ತೆಯಾಗಿವೆ. ಸರ್ಕಾರ ಅನ್ಯಾಯ ಮಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂಡವಾಗಿ ಗುಳೆ:

ಕೂಡ್ಲಿಗಿ, ಕೊಟ್ಟೂರು ತಾಲೂಕಿನ ರೈತರು ಹಾಗೂ ಕೂಲಿ ಕಾರ್ಮಿಕರು ತಂಡೋಪ ತಂಡವಾಗಿ ಗುಳೆ ಹೋಗಿದ್ದಾರೆ. ಸಾಲ ಮಾಡಿ ಬಿತ್ತಿದ್ದ ಬೆಳೆ ಬಾರದೇ, ಮಳೆ ಕೈಕೊಟ್ಟ ಕಾರಣ ಮಾಡಿದ ಸಾಲ ತೀರಿಸಲು ರಾತ್ರೋ ರಾತ್ರಿ ದಕ್ಷಿಣ ಕರ್ನಾಟಕಕ್ಕೆ ಲಾರಿ ಮಾಡಿಕೊಂಡು ಗುಳೇ ಹೋಗಿದ್ದಾರೆ.

ಸದಾ ಬರವನ್ನೇ ಹಾಸಿ ಹೊದ್ದ ಮಲಗುವ ಕೂಡ್ಲಿಗಿ ಕೊಟ್ಟೂರು

ಸದಾ ಬರವನ್ನೇ ಹಾಸಿ ಹೊದ್ದ ಮಲಗುವ ಕೂಡ್ಲಿಗಿ, ಕೊಟ್ಟೂರು ತಾಲೂಕಿನಲ್ಲಿ ಸಮರ್ಪಕವಾಗಿ ಮಳೆ ಆಗದೇ, ಲಕ್ಷಗಟ್ಟಲೇ ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೇ ಕಮರಿ ಹೋಗಿದ್ದವು. ಮಾಡಿದ ಸಾಲ ತೀರಿಸಲು ಈ ತಾಲೂಕುಗಳ ಜನರು ಗುಳೇ ಹೋಗುವುದು ಅನಿವಾರ್ಯವಾಗಿತ್ತು. ಇದನೆಲ್ಲವನ್ನೂ ಅರಿತ ಸರ್ಕಾರ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳನ್ನು ಮೊದಲು ಬರ ತಾಲೂಕುಗಳೆಂದು ಘೋಷಿಸಿಬೇಕಿತ್ತು. ಆದರೆ, ಇವೆರಡು ತಾಲೂಕುಗಳು ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿರದಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.