ಸಾರಾಂಶ
ದೇವನಹಳ್ಳಿಯ ಜಮೀನು ಸ್ವಾಧೀನ ವಿರೋಧಿಸಿ ರೈತರ ಹೋರಾಟ ತೀವ್ರಗೊಂಡ ಬೆನ್ನಲ್ಲೇ ಇದೇ ಭಾಗದ ಕೆಲ ರೈತರು ಎಕರೆಗೆ 3.5 ಕೋಟಿ ರು. ಪರಿಹಾರ ನೀಡಿ ಜಮೀನು ಸ್ವಾಧೀನಪಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ನೀಡಿದ್ದಾರೆ.
ಬೆಂಗಳೂರು : ದೇವನಹಳ್ಳಿಯ ಜಮೀನು ಸ್ವಾಧೀನ ವಿರೋಧಿಸಿ ರೈತರ ಹೋರಾಟ ತೀವ್ರಗೊಂಡ ಬೆನ್ನಲ್ಲೇ ಇದೇ ಭಾಗದ ಕೆಲ ರೈತರು ಎಕರೆಗೆ 3.5 ಕೋಟಿ ರು. ಪರಿಹಾರ ನೀಡಿ ಜಮೀನು ಸ್ವಾಧೀನಪಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ನೀಡಿದ್ದಾರೆ.
ಕೆಐಎಡಿಬಿಗೆ 13 ಗ್ರಾಮಗಳ 1,777 ಎಕರೆ ಜಮೀನು ನೀಡಲು ನಾವು ಸಿದ್ಧವಿದ್ದೇವೆ. ಸರ್ಕಾರ ಒಳ್ಳೆಯ ದರ ನಿಗದಿ ಮಾಡಿ ಖರೀದಿ ಮಾಡಬೇಕು. ಪ್ರತಿ ಎಕರೆಗೆ 3.50 ಕೋಟಿ ರು. ಪರಿಹಾರ ಹಾಗೂ ರೈತರ ಮಕ್ಕಳಿಗೆ ಉದ್ಯೋಗ ಅವಕಾಶ ನೀಡಬೇಕು.
ಜತೆಗೆ ಗ್ರಾಮಗಳ ಅಕ್ಕ ಪಕ್ಕ ಉಳಿದ ಜಮೀನುಗಳನ್ನು ಹಳದಿ ಹಾಗೂ ವಾಣಿಜ್ಯ ವಲಯಗಳನ್ನಾಗಿ ಪರಿವರ್ತಿಸಬೇಕು. ಯಾವುದೇ ಕಾರಣಕ್ಕೂ ಈ ಭಾಗದ ಭೂಮಿಗಳನ್ನು ಹಸಿರು ವಲಯವಾಗಿ ಪರಿವರ್ತಿಸಬಾರದು ಎಂದು ಕೋರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭೂಸ್ವಾಧೀನ ಪ್ರಕ್ರಿಯೆ ಮುಂದುವರೆಸಬೇಕೆ ಅಥವಾ ಕೈಬಿಡಬೇಕೆ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಸ್ವೀಕರಿಸುವ ಹೊತ್ತಿನಲ್ಲೇ ಕೆಲ ರೈತ ಮುಖಂಡರು ಸಲ್ಲಿಸಿರುವ ಈ ಮನವಿ ಪತ್ರ ಕುತೂಹಲ ಮೂಡಿಸಿದೆ.
24 ಮಂದಿಯ ಸಹಿ:
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರ ನೇತೃತ್ವದಲ್ಲಿ ಒಟ್ಟು 24 ಮಂದಿ ರೈತರ ಸಹಿಯುಳ್ಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ರೈತರು ಭೂಮಿಯನ್ನು ಕೆಐಎಡಿಬಿ ಸ್ವಾಧೀನಕ್ಕೆ ನೀಡುವುದಿಲ್ಲ ಎಂದು ಕಳೆದ ಮೂರು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ. ಇದೀಗ ಬೆಂಗಳೂರಿಗೆ ವಿಸ್ತರಿಸಿರುವ ಹೋರಾಟಕ್ಕೆ ಕಿಸಾನ್ ಮೋರ್ಚಾದ ರಾಕೇಶ್ ಟಿಕಾಯತ್, ಮೇಧಾ ಪಾಟ್ಕರ್, ಪ್ರಕಾಶ್ ರಾಜ್ ಅಂತಹವರು ಬೆಂಬಲ ನೀಡಿ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಇದರ ನಡುವೆ ರೈತರೇ ಈ ಮನವಿ ಪತ್ರ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.