ಬ್ಯಾಟರಾಯನಪುರ: ಮಧುಮೇಹ(ಟೈಪ್-1) ಚಿಕಿತ್ಸೆಯು ವೈದ್ಯಕೀಯ ತಂತ್ರಜ್ಞಾನದಲ್ಲಿ ಮಹತ್ತರ ಪ್ರಗತಿ ಸಾಧಿಸಿದ್ದರೂ, ಎಲ್ಲಾ ವರ್ಗದ ಜನರಿಗೆ ಈ ಸೇವೆಗಳು ಸಮಾನವಾಗಿ ಲಭ್ಯವಾಗುವಂತೆ ಮಾಡುವುದು ಒಂದು ದೊಡ್ಡ ಸವಾಲಾಗಿದೆ ಎಂದು ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟದ ದಕ್ಷಿಣ-ಪೂರ್ವ ಏಷ್ಯಾ ಅಧ್ಯಕ್ಷ ಡಾ.ಬಂಸಿ ಸಬೂ ಕಳವಳ ವ್ಯಕ್ತಪಡಿಸಿದರು.
ಹೃದಯ ಮತ್ತು ಚಯಾಪಚಯ ಕುರಿತ ರಾಷ್ಟ್ರೀಯ ವೈದ್ಯಕೀಯ ಸಮಾವೇಶ
ಬ್ಯಾಟರಾಯನಪುರ ಕ್ಷೇತ್ರದ ಸಹಕಾರ ನಗರದಲ್ಲಿ ಆಯೋಜಿಸಿದ್ದ ಹೃದಯ ಮತ್ತು ಚಯಾಪಚಯ ಕುರಿತ ರಾಷ್ಟ್ರೀಯ ವೈದ್ಯಕೀಯ ಸಮಾವೇಶ ʼಐಲೆಟ್-2026ʼ ಉದ್ಘಾಟಿಸಿ ಮಾತನಾಡಿದ ಅವರು ನವೀನ ಆವಿಷ್ಕಾರಗಳನ್ನು ಕೇವಲ ಅಭಿವೃದ್ಧಿಪಡಿಸಿದರಷ್ಟೇ ಸಾಕಾಗುವುದಿಲ್ಲ. ಅವುಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿ, ಪ್ರತಿಯೊಬ್ಬ ರೋಗಿಗೂ ಗುಣಮಟ್ಟದ ಆರೋಗ್ಯಸೇವೆ ಹಾಗೂ ಆರೈಕೆ ಒದಗಿಸುವ ಅಗತ್ಯವಿದೆ ಎಂದರು.
ಮುಂಬೈನ ಲೀಲಾವತಿ ಆಸ್ಪತ್ರೆ ಹಿರಿಯ ಎಂಡೋಕ್ರಿನಾಲಜಿಸ್ಟ್ ಡಾ.ಶಶಾಂಕ್.ಆರ್.ಜೋಶಿ ಮಾತನಾಡಿ ಭಾರತದಲ್ಲಿ ಮೆಟಾಬಾಲಿಕ್ ರೋಗಗಳ ಪ್ರಮಾಣ ಹೆಚ್ಚುತ್ತಿರುವುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದ್ದು, ಟೈಪ್-2 ಮಧುಮೇಹದ ನಿರ್ವಹಣೆಯಲ್ಲಿ ಹೊಸ ಔಷಧಿಗಳು ಮಹತ್ವ ಪಡೆದುಕೊಳ್ಳುತ್ತಿವೆ. ಜಿಎಲ್ಪಿ-1 ರಿಸೆಪ್ಟರ್ ಆಗೊನಿಸ್ಟ್ ವರ್ಗದ ಸೆಮಾಗ್ಲುಟೈಡ್ ಔಷಧಿ ಗ್ಲೈಸೆಮಿಕ್, ನಿಯಂತ್ರಣ ಸುಧಾರಿಸುವುದರ ಜೊತೆಗೆ ತೂಕ ಇಳಿಕೆ, ಹೃದಯ ಹಾಗೂ ಮೂತ್ರಪಿಂಡ ರೋಗಗಳ ಅಪಾಯ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ ಎಂದರು.
ಸಹಕಾರ ನಗರದ ಲೈಫ್ಕೇರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಎಲ್. ಶ್ರೀನಿವಾಸಮೂರ್ತಿ ಮಾತನಾಡಿ ''ಇನ್ಫ್ಲೂಯೆನ್ಜಾ ಸೋಂಕು, ಹೃದಯ ಹಾಗೂ ಮಧುಮೇಹ ರೋಗಿಗಳಲ್ಲಿ ಗಂಭೀರ ಪರಿಣಾಮಗಳನ್ನು ಉಂಟು ಮಾಡುವ ಅಪಾಯ ಹೆಚ್ಚಿದೆ. ಇದರಿಂದ ಹೃದಯಾಘಾತ ಹಾಗೂ ಸ್ಟ್ರೋಕ್ 3 ರಿಂದ 5 ಪಟ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಇಂತಹ ಅಪಾಯವನ್ನು ಕಡಿಮೆಗೊಳಿಸಲು ವಾರ್ಷಿಕ ಲಸಿಕೆ ಪಡೆಯುವುದು ಅವಶ್ಯಕ ಎಂದು ತಿಳಿಸಿದರು.
650ಕ್ಕೂ ಹೆಚ್ಚು ವೈದ್ಯಕೀಯ ಪ್ರತಿನಿಧಿಗಳು
ಸಮಾವೇಶದಲ್ಲಿ ವಿವಿಧ ದೇಶ ಹಾಗೂ ರಾಜ್ಯಗಳ 650ಕ್ಕೂ ಹೆಚ್ಚು ವೈದ್ಯಕೀಯ ಪ್ರತಿನಿಧಿಗಳು ಮತ್ತು 155ಕ್ಕೂ ಹೆಚ್ಚು ತಜ್ಞ ವೈದ್ಯರು ಹಾಗೂ ಅಧ್ಯಾಪಕರು ಪಾಲ್ಗೊಂಡು, ಹೃದಯ ಹಾಗೂ ಮಧುಮೇಹ ಸಂಬಂಧಿತ ರೋಗಗಳ ತೀವ್ರತೆ, ತಡೆಗಟ್ಟುವಿಕೆ ಮತ್ತು ಆಧುನಿಕ ಚಿಕಿತ್ಸೆಗಳ ಕುರಿತು ಸಂವಾದ ನಡೆಸಿದರು.
ಸಮಾವೇಶದಲ್ಲಿ ''ಸುನಿಲ್ಸ್ ಮಧುಮೇಹ ಆರೈಕೆ ಮತ್ತು ಸಂಶೋಧನಾ ಕೇಂದ್ರದ''(ನಾಗ್ಪುರ) ವ್ಯವಸ್ಥಾಪಕ ನಿರ್ದೇಶಕ ಡಾ.ಸುನಿಲ್ ಗುಪ್ತಾ, ತಿರುಪೂರ್ನ ಎ.ಜಿ.ಆಸ್ಪತ್ರೆಯ ಸಾಮಾನ್ಯ ವೈದ್ಯಕೀಯ ನಿರ್ದೇಶಕ ಡಾ. ಮುರುಗನಾಥನ್, ಭಾರತೀಯ ಮಧುಮೇಹ ಸಂಸ್ಥೆಯ(ತ್ರಿವೆಂಡ್ರಮ್) ಮಾಜಿ ನಿರ್ದೇಶಕ ಪ್ರೊ.ಎ.ಕೆ.ದಾಸ್ ಮತ್ತಿತರರು ಉಪಸ್ಥಿತರಿದ್ದರು.
