ಸಾರಾಂಶ
ಮಾ.22ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಕನ್ನಡ ಚಿತ್ರರಂಗ ಬೆಂಬಲ ಘೋಷಿಸಿದೆ. ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನವರೆಗೂ ಸಿನಿಮಾ ಪ್ರದರ್ಶನ ರದ್ದುಗೊಳಿಸಿದೆ.
ಬೆಂಗಳೂರು : ಮಾ.22ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಕನ್ನಡ ಚಿತ್ರರಂಗ ಬೆಂಬಲ ಘೋಷಿಸಿದೆ. ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನವರೆಗೂ ಸಿನಿಮಾ ಪ್ರದರ್ಶನ ರದ್ದುಗೊಳಿಸಿದೆ.
ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಮಾತನಾಡಿ, ‘ಕನ್ನಡಪರ ಕೆಲಸಗಳಿಗೆ ಮೊದಲಿನಿಂದಲೂ ಚಿತ್ರರಂಗದ ಬೆಂಬಲ ಇದೆ. ಬೆಳಗಾವಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಕನ್ನಡಪರ ಸಂಘಟನೆಗಳು ಬಂದ್ಗೆ ಕರೆ ನೀಡಿವೆ. ನೆಲ, ಜಲ ವಿಚಾರವಾಗಿ ನಾವು ರಾಜ್ಯದ ಪರ ಇರುತ್ತೇವೆ. ಈ ನಿಟ್ಟಿನಲ್ಲಿ ಮಾ.22ರಂದು ನಡೆಯಲಿರುವ ಕರ್ನಾಟಕ ಬಂದ್ಗೆ ನಮ್ಮ ಬೆಂಬಲ ಇದೆ’ ಎಂದರು.
‘ಕರ್ನಾಟಕ ಬಂದ್ಗೆ ಬೆಂಬಲ ನೀಡುವಂತೆ ತಡವಾಗಿ ನಮಗೆ ಕನ್ನಡ ಸಂಘಟನೆಗಳು ಮನವಿ ಮಾಡಿದವು. ಇದ್ದಕ್ಕಿದ್ದಂತೆ ಬಂದ ಈ ಮನವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೆಳಗ್ಗಿನಿಂದ ಮಧ್ಯಾಹ್ನವರೆಗೂ ಸಿನಿಮಾ ಪ್ರದರ್ಶನ ನಿಲ್ಲಿಸಲಿದ್ದೇವೆ. ಚಿತ್ರೀಕರಣಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ವಾಣಿಜ್ಯ ಮಂಡಳಿ ಈ ನಿರ್ಧಾರಕ್ಕೆ ಚಿತ್ರೋದ್ಯಮದ ಎಲ್ಲಾ ಸಂಸ್ಥೆಗಳು ಬೆಂಬಲಿಸಿವೆ’ ಎಂದು ನರಸಿಂಹಲು ತಿಳಿಸಿದರು.
ಸಿನಿಮಾ ಪ್ರದರ್ಶಕರ ಸಂಘದ ಕಾರ್ಯದರ್ಶಿ ಕುಶಾಲ್ ಚಂದ್ರಶೇಖರ್ ಮಾತನಾಡಿ, ‘ಅಂದು ಮಧ್ಯಾಹ್ನ ನಂತರ ಸಿನಿಮಾ ಪ್ರದರ್ಶನ ಇರುತ್ತದೆ. ಏಕಾಏಕಿ ಇಡೀ ದಿನ ಸಿನಿಮಾ ಪ್ರದರ್ಶನ ನಿಲ್ಲಿಸಿದರೆ ನಿರ್ಮಾಪಕರಿಗೆ ತೊಂದರೆ ಆಗುತ್ತದೆ. ಹೀಗಾಗಿ ಒಂದು ಶೋ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದೇವೆ’ ಎಂದರು.