ಸಾರಾಂಶ
‘ನಾನು ಹೈಸ್ಕೂಲ್ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಅದ್ದರಿಂದ ಶೇ.98 ಅಂಕ ಪಡೆದು ಪಾಸಾಗಿದ್ದಕ್ಕೆ ಫಸ್ಟ್ಬೆಂಚಲ್ಲಿ ಕೂರಿಸ್ತಿದ್ದು, ಕ್ಲಾಸ್ ಮಾನಿಟರ್ ಕೂಡಾ ಆಗಿದ್ದೆ ಆಗಿದ್ದೆ.
ಬೆಂಗಳೂರು: ‘ನಾನು ಹೈಸ್ಕೂಲ್ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಅದ್ದರಿಂದ ಶೇ.98 ಅಂಕ ಪಡೆದು ಪಾಸಾಗಿದ್ದಕ್ಕೆ ಫಸ್ಟ್ಬೆಂಚಲ್ಲಿ ಕೂರಿಸ್ತಿದ್ದು, ಕ್ಲಾಸ್ ಮಾನಿಟರ್ ಕೂಡಾ ಆಗಿದ್ದೆ ಆಗಿದ್ದೆ. ಆದರೆ ಚೆನ್ನಾಗಿ ಓದುತ್ತಿದ್ದಿಯಾ ಎಂದು ಕನ್ನಡ ಮಾಧ್ಯಮದಿಂದ ತೆಗೆದು ಇಂಗ್ಲಿಷ್ ಮಾಧ್ಯಮಕ್ಕೆಹಾಕಿದರು. ಬಳಿಕ ನನ್ನ ಅಂಕ ಇಳಿಕೆಯಾಗಿ ಲಾಸ್ಟ್ ಬೆಂಚರ್ ಆಗಿಬಿಟ್ಟೆ’ ಎಂದು ನಟ ರಜನೀಕಾಂತ್ ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿದ್ದಾರೆ.
ಬೆಂಗಳೂರಿನ ಎಪಿಎಸ್ ಶಾಲೆಯ ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ವಿಡಿಯೋ ಸಂದೇಶ ಕಳುಹಿಸಿದ ನಟ, ತಮ್ಮ ಬಾಲ್ಯದ ಶಿಕ್ಷಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
‘ನಾನು ಮಿಡಲ್ ಸ್ಕೂಲ್ವರೆಗೆ ಬೆಂಗಳೂರಿನ ಗವಿಪುರದ ಗಂಗಾಧರೇಶ್ವರ ದೇಗುಲ ಸಮೀಪದ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದೆ. ನನಗೆ ಕನ್ನಡ ಸೇರಿ ಎಲ್ಲಾ ವಿಷಯದಲ್ಲಿಯೂ ಶೇ.98 ಅಂಕ ಬಂದಿತ್ತು. ಬಳಿಕ ನನ್ನ ಅಣ್ಣ ಎಪಿಎಸ್ ಶಾಲೆಯಲ್ಲಿ ಹೈಸ್ಕೂಲ್ಗೆ ಸೇರಿಸಿದ. ಅಲ್ಲಿ ಸಂಪೂರ್ಣ ಇಂಗ್ಲಿಷ್ ಮಾಧ್ಯಮ ಇತ್ತು. ಇದರಿಂದ ತರಗತಿಗೆ ಟಾಪರ್ ಆಗಿದ್ದ ನಾನು ಒಮ್ಮೆಲೆ ಕಳಪೆ ವಿದ್ಯಾರ್ಥಿ ಆಗಿಬಿಟ್ಟೆ. ಆದರೆ ಅಲ್ಲಿನ ಶಿಕ್ಷಕರು ನನ್ನನ್ನು ಹುರಿದುಂಬಿಸಿ, ಸರಿಯಾಗಿ ಮಾರ್ಗದರ್ಶನ ಮಾಡಿ 8 ಮತ್ತು 9 ಕ್ಲಾಸ್ ಪಾಸ್ ಮಾಡಿಸಿದರು. ಆದರೆ 10ನೇ ಕ್ಲಾಸ್ನ ಬೋರ್ಡ್ ಪರೀಕ್ಷೆಯಲ್ಲಿ ಪಿಸಿಎಂ (ವಿಜ್ಞಾನ)ದಲ್ಲಿ ಮೊದಲ ಬಾರಿಗೆ ಫೇಲ್ ಆದೆ. ಮತ್ತೆ ಎರಡನೇ ಬಾರಿ ಕಟ್ಟಿ ಪಾಸ್ ಮಾಡಿದೆ’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.
ಜೊತೆಗೆ ಶಾಲೆಯಲ್ಲಿನ ಅಂತರ್ ತರಗತಿ ನಾಟಕ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದನ್ನು ರಜನಿ ಸ್ಮರಿಸಿದರು.