ನೆರಳಿಳಿದ ಹಾದಿಯಲಿ ಬಂಡಿಯು ಕುಲುಕದೇ ಸಾಗಲಿ...

| N/A | Published : May 31 2025, 04:51 AM IST

HS Venkateshamurthy

ಸಾರಾಂಶ

‘ಎಚ್‌ಎಸ್‌ವಿ’ ಎಂದೇ ಚಿರಪರಿಚಿತರಾಗಿದ್ದ ಹಿರಿಯ ಕವಿ, ಭಾವಗೀತೆಗಳ ಸರದಾರ, ನಾಟಕ ರಚನೆಕಾರ ಡಾ.ಎಚ್‌.ಎಸ್. ವೆಂಕಟೇಶ ಮೂರ್ತಿ (80) ಶುಕ್ರವಾರ ನಿಧನರಾದರು.

ಬೆಂಗಳೂರು: ‘ಎಚ್‌ಎಸ್‌ವಿ’ ಎಂದೇ ಚಿರಪರಿಚಿತರಾಗಿದ್ದ ಹಿರಿಯ ಕವಿ, ಭಾವಗೀತೆಗಳ ಸರದಾರ, ನಾಟಕ ರಚನೆಕಾರ ಡಾ.ಎಚ್‌.ಎಸ್. ವೆಂಕಟೇಶ ಮೂರ್ತಿ (80) ಶುಕ್ರವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ವಾರದ ಹಿಂದಷ್ಟೇ ಕೆಂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

 ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ 7 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 9 ಗಂಟೆಗೆ ಚಾಮರಾಜಪೇಟೆಯ ಟಿ.ಆರ್‌.ಮಿಲ್‌ನ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಮೃತರು ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕಳನ್ನು ಅಗಲಿದ್ದಾರೆ.

ಜೋಗಿ

ಸುಮಾರು ಮೂರು ವರ್ಷಗಳ ಯಾತನೆಯ ಪಂಜರದಿಂದ ಮೃದು ಮನಸ್ಸಿನ ಕವಿ ಎಚ್‌.ಎಸ್. ವೆಂಕಟೇಶಮೂರ್ತಿ ಹೊರಬಿದ್ದಿದ್ದಾರೆ. ಅನಾತ್ಮಕಥನ ಬರೆದ ಕವಿಯ ಆತ್ಮ ಪಂಚಭೂತಗಳಲ್ಲಿ ಲೀನಗೊಂಡಿದೆ. ಸಿಂದಾಬಾದನ ಆತ್ಮಕತೆಯ ಕೊನೆಯ ಅಧ್ಯಾಯ ಮುಗಿದಿದೆ. ಅವರೇ ಹೇಳುತ್ತಿದ್ದ ಹಾಗೆ ಮಣ್ಣಿನ ಋಣದಿಂದ ಮುಕ್ತರಾಗಿದ್ದಾರೆ. ಇಷ್ಟು ಕಾಲ ಒಟ್ಟಿಗಿದ್ದವರು ದೂರ ಸರಿದಿದ್ದಾರೆ.

ಎಚ್ಎಸ್‌ವಿ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪದೇ ಪದೇ ಚಿಕಿತ್ಸೆ ಪಡೆಯುತ್ತಾ, ಬದುಕಿನತ್ತ ಭರವಸೆಯಿಂದ ಮರಳುತ್ತಿದ್ದ ಅವರು, ಅಂಥ ನೋವಿನ ನಡುವೆಯೂ ಸಾಹಿತ್ಯದ ಪ್ರೀತಿ ಕಳೆದುಕೊಂಡಿರಲಿಲ್ಲ. ಅವರು ನಿರ್ಗಮಿಸುವ ಹಿಂದಿನ ದಿನ ಆಸ್ಪತ್ರೆಯಲ್ಲಿದ್ದ ಅವರನ್ನು ನೋಡಲು ಟಿ.ಎನ್. ಸೀತಾರಾಮ್ ಅವರ ಜತೆಗೆ ಹೋಗಿದ್ದಾಗ ಎಚ್‌ಎಸ್‌ವಿ ತಮ್ಮ ಬುದ್ಧಚರಣ ಪುಸ್ತಕದ ಐದನೇ ಮುದ್ರಣದ ಮುಖಪುಟವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದರು. ಸೋತ ಕಣ್ಣುಗಳು, ದೀರ್ಘ ಉಸಿರಾಟ, ಅಸಾಧ್ಯ ಕೆಮ್ಮು ಬಾಧಿಸುತ್ತಿದ್ದರೂ, ತಮ್ಮ ಪುಸ್ತಕ ಐದನೇ ಮುದ್ರಣ ಆಗುತ್ತಿರುವುದನ್ನು ಹೇಳಲು ಅವರು ಕಾತರಿಸುತ್ತಿದ್ದಂತೆ ಕಂಡರು.

ನೋವಾದಾಗ ಕವಿತೆ ಬರೆಯುತ್ತಿದ್ದರು

ಎಚ್ಎಸ್‌ವಿ ಇದ್ದದ್ದೇ ಹಾಗೆ. ಬದುಕಿನ ಎಲ್ಲ ನೋವುಗಳನ್ನೂ ತಾನು ಬರೆಯುವ ಕವಿತೆಗಳ ಮೂಲಕ ಸೋಸಿ, ನಿರಾಳವಾಗುತ್ತೇನೆ ಎಂದು ನಂಬಿದ್ದರು. ಯಾರಾದರೂ ತುಂಬಾ ನೋಯಿಸಿದರೆ, ಆ ರಾತ್ರಿಯಿಡೀ ಒಂದು ಒಂದು ಕವಿತೆ ಬರೆಯುತ್ತಿದ್ದರು. ತನ್ನ ಪ್ರತಿರೋಧವನ್ನೂ ಪ್ರತಿಕ್ರಿಯೆಯನ್ನೂ ಪ್ರೀತಿಯನ್ನೂ ಔದಾರ್ಯವನ್ನೂ ಕವಿತೆಯ ಮುಖಾಂತರ ತೋರುತ್ತಿದ್ದರು.

ಎಚ್‌ಎಸ್‌ವಿ ಅವರ ಮನೆ ಇರುವುದು ಬೆಂಗಳೂರಿನ ಹೊಸಕೆರೆಹಳ್ಳಿಯ ಪುಷ್ಪಗಿರಿ ನಗರದ ಕಣಿವೆಯಲ್ಲಿ. ಅವರ ಮನೆಯ ಅಂಗಳದಲ್ಲಿ ನಿಂತು ನೋಡಿದರೆ ಸುತ್ತಲೂ ಎದ್ದುನಿಂತ ಗುಡ್ಡ ಕಾಣಿಸುತ್ತದೆ. ಅವರ ಮನೆಯಿಂದ ನಾಲ್ಕು ಹೆಜ್ಜೆ ಬಂದು ಬಲಕ್ಕೆ ತಿರುಗಿದರೆ ಎಚ್.ಎಸ್. ವೆಂಕಟೇಶಮೂರ್ತಿ ಹೆಸರಿನ ರಸ್ತೆಯೂ ಆ ರಸ್ತೆಯ ಮೂಲೆಯಲ್ಲಿ ಸಿಹಿಯಾದ ಹೋಳಿಗೆ ತಯಾರಿಸುವ ಅಂಗಡಿಯೂ ಎದುರಾಗುತ್ತದೆ. ಎಚ್ಎಸ್‌ವಿ ಕೂಡ ಅಕ್ಷರದ ಹೋಳಿಗೆ ಮಾಡಿ ಹಂಚುತ್ತಿದ್ದವರು.

ಅವರ ಜೀವನಪ್ರೀತಿ ಅನನ್ಯವಾದದ್ದು. ದಿನವೂ ಕಣ್ಣಂಚು ಒದ್ದೆಯಾಗುವುದಕ್ಕೆ ಎಚ್ಎಸ್‌ವಿ ಅವರಿಗೆ ಅಸಂಖ್ಯ ಕಾರಣಗಳಿದ್ದವು. ಪತ್ನಿ ರಾಜಲಕ್ಷ್ಮಿಯನ್ನು ಕಳಕೊಂಡ ದಿನ ಅವರು ಏಕಕಾಲಕ್ಕೆ ಮುಕ್ತಿಯನ್ನೂ ಅನಾಥಪ್ರಜ್ಞೆಯನ್ನೂ ಎದುರಿಸಿದ್ದನ್ನು ಆತ್ಮೀಯರ ಮುಂದೆ ಕಂಬನಿಯನ್ನು ಕಾಪಿಟ್ಟು ಹೇಳಿಕೊಂಡಿದ್ದರು. ಅದಾಗಿ ಕೆಲವು ತಿಂಗಳುಗಳಲ್ಲೇ ಉತ್ತರಾಯಣ ಎಂಬ ಪದ್ಯವನ್ನು ಬರೆದು ತನ್ನ ಪ್ರೀತಿ ಮತ್ತು ಅಸಹಾಯಕತೆಯನ್ನು ಕಾವ್ಯದ ಮೂಲಕವೇ ತೆರೆದಿಟ್ಟಿದ್ದರು.

ದ್ವೇಷ ಕಾರಿದವರಿಗೂ ಬೆನ್ನು ತಟ್ಟುತ್ತಿದ್ದರು

ಎಚ್‌ಎಸ್‌ವಿ ಆರಂಭದಿಂದಲೂ ಬಡತನದ ಬೇಗೆಯನ್ನು ಉಂಡು ಬದುಕಿದವರು. ಅವರ ಪುಟ್ಟ ಮನೆ, ಮನೆ ತುಂಬಾ ಜನ, ಅವರ ಸಣ್ಣ ಸಂಬಳದ ಕೆಲಸ, ಅವರು ಅಕ್ಕರೆಯಿಂದ ಸಲಹುತ್ತಿದ್ದ ಶಿಷ್ಯಂದಿರು, ಬಡತನವನ್ನು ಧಿಕ್ಕರಿಸಲಿಕ್ಕೆ ಅವರು ನೆಚ್ಚುತ್ತಿದ್ದ ಕನ್ನಡ ಕವಿತೆಗಳು- ಹೀಗೆ ಅವರು ಬೆಳೆದು ಬಂದ ಪರಿ ಅನನ್ಯ. ಎಚ್‌ಎಸ್‌ವಿ ಅವರು ಯಾರನ್ನೂ ದ್ವೇಷಿಸಲಿಲ್ಲ. ಅವರಿಗೆ ಪ್ರಶಸ್ತಿಗಳು ಬಂದಾಗ, ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ, ಅವರಿಗೆ ಮನ್ನಣೆ ದೊರಕಿದಾಗ ಅವರನ್ನು ಇನ್ನಿಲ್ಲದಂತೆ ಟೀಕಿಸಿದವರನ್ನೂ ಅವರು ಕರೆದು ಪ್ರಶಸ್ತಿ ಕೊಟ್ಟಿದ್ದಾರೆ. ಅವರಿಗೆ ಪ್ರಶಸ್ತಿ ಬರದಂತೆ ತಪ್ಪಿಸಿದವರು ಎದುರಾದಾಗ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ತರುಣ ಕವಿಗಳನ್ನು ಕವಯತ್ರಿಯರನ್ನೂ ಮನೆಗೆ ಕರೆದು ಅಭ್ಯಾಸ ಎಂಬ ಹೆಸರಿನಲ್ಲಿ ಕನ್ನಡ ಸಾಹಿತ್ಯದ ಪಾಠ ಹೇಳಿದ್ದಾರೆ.

ಕನ್ನಡ ಭಾವಗೀತೆಯ ಪರಂಪರೆಯನ್ನು ಮುಂದುವರಿಸಿದವರಲ್ಲಿ ಎಚ್‌ಎಸ್‌ವಿ ಪ್ರಮುಖರು. ಸಿ. ಅಶ್ವತ್ಥರ ಜತೆಗೆ ನಿಂತು, ಅವರ ಪ್ರತಿಭೆ ಹೊಳೆಯುವಂತೆ ಭಾವಗೀತೆಗಳನ್ನು ಬರೆದುಕೊಟ್ಟು, ಭಾವಗೀತೆಯ ಜಗತ್ತು ಮುಂದುವರಿಯುವಂತೆ ನೋಡಿಕೊಂಡವರು ಅವರು. ತನ್ನನ್ನು ಕ್ಯಾಸೆಟ್ ಕವಿ ಅಂತ ಕರೆದು ನಿಂದಿಸಿದವರ ಎದುರು ಇವತ್ತು ಅವರು ಬರೆದ ಜನಪ್ರಿಯ ಭಾವಗೀತೆಗಳಿವೆ. ಹೊಸ ತಲೆಮಾರಿನ ಹುಡುಗರು ಆ ಭಾವಗೀತೆಗಳನ್ನು ಹಾಡುತ್ತಾ ಬೆಳೆಯುತ್ತಿದ್ದಾರೆ. ಕಾವ್ಯದ ಬಳ್ಳಿ ಭಾವಗೀತೆಗಳಲ್ಲಿ ಕುಡಿಯೊಡೆದು ಹಬ್ಬುತ್ತಿದೆ. ಅದರ ಹಿಂದೆ ಎಚ್‌ಎಸ್‌ವಿ ಅವರ ತಪಸ್ಸು ಇದೆ.

ಯಾರೇ ಬಂದರೂ ಕಾವ್ಯದ್ದೇ ಮಾತುತನ್ನ ವಯಸ್ಸಿನ ಹಮ್ಮು ಇಲ್ಲದೇ, ತಾನು ಶ್ರೇಷ್ಠ ಕವಿ ಎಂಬ ಬಿಗುಮಾನ ಇಲ್ಲದೇ ಎಲ್ಲರೊಂದಿಗೆ ಬೆರೆಯುತ್ತಿದ್ದವರು ಅವರು. ಅವರ ಮನೆಯ ಮಹಡಿಯಲ್ಲಿ ಪುಸ್ತಕಗಳ ಬಿಡುಗಡೆಗೆಂದೇ ಒಂದು ವಿಶಾಲವಾದ ವೇದಿಕೆ ಸೃಷ್ಟಿಯಾಗಿತ್ತು. ಯಾರೇ ಮನೆಗೆ ಹೋದರೂ ಅವರ ಜತೆ ಗಂಟೆಗಟ್ಟಲೆ ಕಾವ್ಯದ ಮಾತಾಡುತ್ತಿದ್ದರು. ಹೊಸ ಕವಿಗಳು ಕೇಳಿದರೆ ಮುನ್ನುಡಿ ಬರೆದುಕೊಟ್ಟು ಹರಸುತ್ತಿದ್ದರು. ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಹೋಗುತ್ತಿದ್ದರು. ವೈದ್ಯರು ಪ್ರಯಾಣ ಮಾಡಕೂಡದು ಎಂದು ಎಚ್ಚರಿಸಿದ ನಂತರವೂ ಎಚ್‌ಎಸ್‌ವಿ ಹಾಸನದ ಸಾಹಿತ್ಯ ಸಂಭ್ರಮಕ್ಕೆ, ಕೊಣ್ಣೂರು ನುಡಿಸಡಗರಕ್ಕೆ ಯಾವ ಭಯವೂ ಇಲ್ಲದೇ ಬರುತ್ತಿದ್ದರು.  ದಣಿವಿರದೇ ಜತೆಯಾಗುತ್ತಿದ್ದರು.

ಎಚ್‌ಎಸ್‌ವಿ ಅವರ ಮೇರುಕೃತಿ ಬುದ್ಧಚರಣ. ಅವರ ಮಹತ್ವಾಕಾಂಕ್ಷೆಯ ಕೃತಿಯೂ ಹೌದು. ಆ ಕೃತಿಗೆ ಮಹತ್ವದ ಮನ್ನಣೆಗಳು ಬರುತ್ತವೆ ಅನ್ನುವ ನಿರೀಕ್ಷೆಯೂ ಅವರಿಗಿತ್ತು. ಅದು ಜನಮನ್ನಣೆ ಪಡೆಯಿತು. ಎಲ್ಲರ ಪ್ರೀತಿಗೂ ಪಾತ್ರವಾಯಿತು. ಕೆಲವೇ ಸಮಯದಲ್ಲಿ ಐದು ಮುದ್ರಣಗಳನ್ನೂ ಕಂಡಿತು.

ಕೊನೆಗಾಲದಲ್ಲಿ ಸೊಸೆಯೇ ಮಗಳಾದಳು

ಎಚ್‌ಎಸ್‌ವಿ ಕುಟುಂಬದ ವಿಚಾರದಲ್ಲಿ ಅದೃಷ್ಟವಂತರು. ಅವರ ಮಕ್ಕಳು ಅವರನ್ನು ಅಕ್ಕರೆಯಿಂದ ನೋಡಿಕೊಂಡರು. ಅವರ ಅನಾರೋಗ್ಯದ ದಿನಗಳಲ್ಲಿ ಮಗಳಂತೆ, ತಾಯಿಯಂತೆ ನಿಂತು ಅವರನ್ನು ಪೊರೆದವರು ಅವರ ಸೊಸೆ ಶಾಲಿನಿ ಸುಧೀರ್. ಅವರ ಕೊನೆಯ ದಿನಗಳ ಆಸ್ಪತ್ರೆ ವಾಸದಲ್ಲಿ ಶಾಲಿನಿಯವರು ಕೂಡ ಅಪಘಾತಕ್ಕೀಡಾಗಿ ಕಾಲಿಗೆ ಪೆಟ್ಟು ಮಾಡಿಕೊಂಡು ಕುಂಟುತ್ತಾ ಅವರ ಆರೈಕೆ ಮಾಡುತ್ತಿದ್ದರು.

ಶ್ರೀಸಂಸಾರಿ ಎಂಬುದು ಅವರ ಪ್ರಸಿದ್ಧ ಪದ್ಯ. ಶ್ರೀರಾಮನ ಹೆಗಲಿನಿಂದ ಬಿಲ್ಲನ್ನು ಇಳಿಸಿ, ಅಲ್ಲಿ ಅಳಿಲನ್ನು ಕೂರಿಸಿದ ಕವಿತೆ ಅದು. ಎಚ್‌ಎಸ್‌ವಿ ಹೆಗಲಲ್ಲಿ ಕೂಡ ಬಿಲ್ಲು-ಬಾಣಗಳಿರಲಿಲ್ಲ. ಅಲ್ಲಿದ್ದದ್ದು ಅಕ್ಕರೆಯ ಅಳಿಲುಗಳು ಮತ್ತು ಅವರ ಸ್ವಂತ ಅಳಲುಗಳು ಮಾತ್ರ.

ಇರುಳಾದ ಹಾಗೆಲ್ಲ ಚಿಕ್ಕೆ ಹೊಳಪಾಗುತಿದೆ ಎಂಬ ಸಾಲು ಅವರ ಪದ್ಯದಲ್ಲಿ ಬರುತ್ತದೆ. ಎಚ್‌ಎಸ್‌ವಿ ಅವರ ಬದುಕಿನ ಕತ್ತಲನ್ನು ತಾವೇ ಹೊಳಪಾಗುವ ಮೂಲಕ ಎದುರಿಸಿದರು. ದಾರಿ ಕಂಡುಕೊಂಡರು. ಅವರ ಅಸಂಖ್ಯ ಭಾವಗೀತೆಗಳಲ್ಲಿ ಅವರು ಸ್ಥಿರವಾಗಿದ್ದಾರೆ. ನಮ್ಮೊಂದಿಗೆ ಸದಾ ಇರುತ್ತಾರೆ.

ಅವರ ಪ್ರಸಿದ್ಧ ಕವಿತೆಯೊಂದರಲ್ಲಿ ಅವರು ನೆರಳಿಳಿದ ಹಾದಿಯಲಿ ಬಂಡಿಯು ಕುಲುಕದೇ ಸಾಗಲಿ ಅಂತ ಕೊನೆಯ ಪ್ರಯಾಣದ ಬಗ್ಗೆ ಬರೆಯುತ್ತಾರೆ. ಅವರ ಕೊನೆಯ ಯಾತ್ರೆಯ ಬಂಡಿಯೂ ಕುಲುಕದೇ ಸಾಗಲಿ ಎಂಬುದೇ ಎಲ್ಲರ ಹಾರೈಕೆ.

Read more Articles on