ಸಾರಾಂಶ
- ಡಾ.ವೆಂಕಟೇಶ ಮೂರ್ತಿ ನುಡಿನಮನ ಕಾರ್ಯಕ್ರಮದಲ್ಲಿ ಬಿ.ವಾಮದೇವಪ್ಪ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಎಚ್ಎಸ್ವಿ ಎಂದೇ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿದ್ದ ಡಾ.ಹೊದಿಗೆರೆ ಶಾನಭೋಗ್ ವೆಂಕಟೇಶಮೂರ್ತಿ ಸುಮಾರು ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಕೃಷಿ, ಅಧ್ಯಯನ, ಅಧ್ಯಾಪನಗಳಲ್ಲಿ ತೊಡಗಿಸಿಕೊಂಡು ಕನ್ನಡ ನಾಡಿನ ಮೇರುಸಾಹಿತಿಗಳ ಪಂಕ್ತಿಯಲ್ಲಿ ಇದ್ದವರು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ನುಡಿನಮನ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಎಚ್ಎಸ್ವಿ ಅವರು ''''ಬುದ್ಧ ಚರಣ''''ವೆಂಬ ಮಹಾಕಾವ್ಯ ಒಳಗೊಂಡಂತೆ ಸಾಹಿತ್ಯದ ಬಹುತೇಕ ಎಲ್ಲ ಪ್ರಕಾರಗಳಲ್ಲಿ ಹಲವು ಮೌಲಿಕ ಹಾಗೂ ಚಿರಕಾಲ ಬಾಳುವಂತಹ ಕೃತಿಗಳನ್ನು ರಚಿಸಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸುಗಮ ಸಂಗೀತ, ಕಿರುತೆರೆ ಮತ್ತು ಚಲನಚಿತ್ರ ರಂಗದಲ್ಲೂ ಇವರ ಸಾಹಿತ್ಯ ಗುರುತಿಸಲ್ಪಟ್ಟಿದೆ. ಕನ್ನಡ ನಾಡಿನಾದ್ಯಂತ ಹೆಸರು ಮಾಡಿರುವ ವೆಂಕಟೇಶಮೂರ್ತಿ ಅವರು ನಮ್ಮ ದಾವಣಗೆರೆ ಜಿಲ್ಲೆಯವರು ಎನ್ನುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ಯಕ್ಷಗಾನ ಕಲಾವಿದ ಹಾಗೂ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕ.ರಾಘವೇಂದ್ರ ನಾಯರಿ, ರೈತ ಹೋರಾಟಗಾರ ತೇಜಸ್ವಿ ಪಟೇಲ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್ ಹಾಗೂ ಭೈರವೇಶ್ವರ, ಪರಮೇಶ್ವರಪ್ಪ ದಾಗಿನಕಟ್ಟೆ, ಜಿ.ಆರ್.ರೇವಣಸಿದ್ದಪ್ಪ, ಬಿ.ಆರ್.ಸುಬ್ರಹ್ಮಣ್ಯ, ನಾಗೇಶ್ವರಿ ಆರ್.ನಾಯರಿ, ಶ್ರೀನಿವಾಸ್, ಡಾ.ಎನ್.ಕರಿಬಸಪ್ಪ, ಜಿ.ಕೆ.ಕುಲಕರ್ಣಿ, ವೀಣಾ ಕೃಷ್ಣಮೂರ್ತಿ, ಸುನೀತಾ ಪ್ರಕಾಶ್, ಎಸ್.ಎಂ.ಮಲ್ಲಮ್ಮ, ಎಚ್.ಎನ್.ಶಿವಕುಮಾರ್, ಎಸ್.ಎಸ್.ಸಿದ್ಧರಾಜು, ಉಷಾ, ಲೇಖಕಿ ಟಿ.ಶೈಲಜ, ಸತ್ಯಭಾಮ ಮಂಜುನಾಥ್, ಸಿರಿಗೆರೆ ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.
ಸಿ.ಕೆ.ರುದ್ರಾಕ್ಷಿ ಬಾಯಿ, ಗಿರಿಜಮ್ಮ, ಉಮಾದೇವಿ ಮತ್ತಿತರರು ಎಚ್ಎಸ್ವಿ ರಚಿಸಿದ ಕವಿತೆಗಳನ್ನು ಗಾಯನ ಮಾಡಿ ಗೌರವ ಸಲ್ಲಿಸಿದರು.- - -
-30ಕೆಡಿವಿಜಿ40: ದಾವಣಗೆರೆಯಲ್ಲಿ ಕಸಾಪದಿಂದ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಅವರಿಗೆ ನುಡಿನಮನ ಸಲ್ಲಿಸಲಾಯಿತು.