ಸಾರಾಂಶ
ಸೇಲಂನ ಉಕ್ಕು ಉತ್ಪಾದನಾ ಸ್ಥಾವರಕ್ಕೆ ಭೇಟಿ ನೀಡಿದ್ದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸ್ಥಾವರದ ಕಾರ್ಯಾಚರಣೆ ಪರಿಶೀಲಿಸಿದರು.
ಬೆಂಗಳೂರು : ಸೇಲಂನ ಉಕ್ಕು ಉತ್ಪಾದನಾ ಸ್ಥಾವರಕ್ಕೆ ಭೇಟಿ ನೀಡಿದ್ದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸ್ಥಾವರದ ಕಾರ್ಯಾಚರಣೆ ಪರಿಶೀಲಿಸಿದರು.
ಉಕ್ಕು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ಉಕ್ಕು ಸ್ಥಾವರಕ್ಕೆ ಶುಕ್ರವಾರ ಉನ್ನತ ಅಧಿಕಾರಿಗಳ ಜತೆ ಭೇಟಿ ನೀಡಿದ ಸಚಿವರು, ಮೊದಲು ಇಡೀ ಉಕ್ಕು ಸ್ಥಾವರವನ್ನು ವೀಕ್ಷಿಸಿ ಉತ್ಪಾದನೆ, ಮಾನವ ಸಂಪನ್ಮೂಲ, ಅದಿರು ಪೂರೈಕೆ, ವಿವಿಧ ವಿಭಾಗಗಳ ಕಾರ್ಯಕ್ಷಮತೆ ಸೇರಿದಂತೆ ಅನೇಕ ಅಗತ್ಯ ಅಂಶಗಳ ಬಗ್ಗೆ ಮಾಹಿತಿ ಪಡೆದರು. ಮರುಬಳಕೆಯ ಅದರಲ್ಲಿಯೂ ಕಚ್ಛಾ ಹಳೇ ಉಕ್ಕನ್ನು ಕರಗಿಸಿ ತಯಾರು ಮಾಡಲಾಗುತ್ತಿರುವ ಗ್ರೀನ್ ಸ್ಟೀಲ್ ಉತ್ಪಾದನೆ ಪ್ರಕ್ರಿಯೆಯನ್ನು ಖದ್ದು ವೀಕ್ಷಿಸಿದರು. ಬಳಿಕ ಸ್ಥಾವರದ ಉತ್ಪಾದನೆ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಸಭೆಗಳನ್ನು ನಡೆಸಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನಾನು ಇಲ್ಲಿ ವೀಕ್ಷಿಸಿದ ತಾಂತ್ರಿಕ ಅತ್ಯಾಧುನಿಕತೆ ಮತ್ತು ಉತ್ಪಾದನೆಯ ಕ್ಷಮತೆಯ ಮಟ್ಟವು ಶ್ಲಾಘನೀಯ. ಈ ಸ್ಥಾವರವು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗಳ ಅಡಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಉಕ್ಕು ಸ್ಥಾವರವು ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ ಆಧಾರಿತ ಮಾರ್ಗವು ಭಾರತದ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಬದ್ಧತೆಗೆ ಅನುಗುಣವಾಗಿ ಸ್ವಚ್ಛ, ಸುಸ್ಥಿರ ಉಕ್ಕಿನ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2030ರ ವೇಳೆಗೆ ಭಾರತವು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ ನಿಗದಿ ಮಾಡಿದ್ದಾರೆ. ಈ ಮೈಲುಗಲ್ಲು ಮುಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.