ಸಾರಾಂಶ
ಸಂಸದ ತೇಜಸ್ವಿ ಸೂರ್ಯ ಅವರ ಕಾರ್ಯದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ತೇಜಸ್ವಿ ಅವರನ್ನು ‘ಮೆಟ್ರೋ ಮಿತ್ರ’ ಎಂದು ಕರೆದು ಪ್ರಶಂಸಿಸಿದ್ದಾರೆ.
ಬೆಂಗಳೂರು : ಸಂಸದ ತೇಜಸ್ವಿ ಸೂರ್ಯ ಅವರ ಕಾರ್ಯದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ತೇಜಸ್ವಿ ಅವರನ್ನು ‘ಮೆಟ್ರೋ ಮಿತ್ರ’ ಎಂದು ಕರೆದು ಪ್ರಶಂಸಿಸಿದ್ದಾರೆ.
ಕೋಲ್ಕತ್ತಾದ ಟೀಟಾಘರ್ನಲ್ಲಿ ನಡೆದ ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಪ್ರಥಮ ಬೋಗಿಗಳ ಚಾಲನಾ ಸಮಾರಂಭದಲ್ಲಿ ವಿಡಿಯೋ ಸಂವಾದ ಮೂಲಕ ಮಾತನಾಡಿದ ಅವರು, ತೇಜಸ್ವಿ ಸೂರ್ಯ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದರು. ಬೆಂಗಳೂರು ಮಹಾನಗರದ ಮೆಟ್ರೋ ಅಗತ್ಯತೆಗಳಿಗೆ ತಕ್ಕಂತೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಿರುವುದು ಅಭಿನಂದನಾರ್ಹ ಎಂದರು.
ಒಂದು ವ್ಯವಸ್ಥಿತ ತಂಡವಾಗಿ ಕಾರ್ಯನಿರ್ವಹಿಸುವುದು ಪ್ರಗತಿಯ ಸಂಕೇತ, ಯುವ ನಾಯಕರಾಗಿ ತೇಜಸ್ವಿಸೂರ್ಯ ಅವರು ಈ ತಂಡದಲ್ಲಿ ಇರುವುದರಿಂದ ಅವರ ಪ್ರಯತ್ನದ ಫಲವಾಗಿ ವೇಗದ ಗತಿಯಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ. ತೇಜಸ್ವಿ ಸೂರ್ಯ ಅವರು ಯಾವುದೇ ಕಾರ್ಯ ಕೈಗೆತ್ತಿಕೊಂಡರೆ, ಅದನ್ನು ಪೂರ್ಣಗೊಳ್ಳುವವರೆಗೂ ಅವಿರತವಾಗಿ ಶ್ರಮಿಸುವುದು ಅವರ ಕಾರ್ಯವೈಖರಿಗೆ ಸಾಕ್ಷಿ. ಮೆಟ್ರೋ ಕಾರ್ಯಗಳಿಗೆ ಸಂಬಂಧಿಸಿದಂತೆ ಹಲವಾರು ಬಾರಿ ನನ್ನನ್ನು ಭೇಟಿಯಾಗಿ ಬೆಂಗಳೂರು ಮೆಟ್ರೋ ಶೀಘ್ರ ಗತಿಯ ಕಾರ್ಯಾಚರಣೆ ಕುರಿತಂತೆ ಒತ್ತಾಯಪಡಿಸಿದರು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನಗರಾಭಿವೃದ್ಧಿಗೆ ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದಾರೆ. ಪ್ರತೀ ನಗರದಿಂದಲೂ ತೇಜಸ್ವಿ ಸೂರ್ಯ ಅವರಂತಹ ಜನಪ್ರತಿನಿಧಿಗಳು ಆಯ್ಕೆಯಾಗಿ ಬಂದರೆ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕಲು ಯಾವುದೇ ಅಡೆತಡೆಗಳು ಇರುವುದಿಲ್ಲ. ಬೆಂಗಳೂರು ಅಭಿವೃದ್ಧಿಗೆ, ವಿಶ್ವದರ್ಜೆಯ ನಗರವನ್ನಾಗಿಸಲು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಹಳದಿ ಮೆಟ್ರೋದಿಂದ ಸಂಚಾರ ದಟ್ಟಣೆಗೆ ತಡೆ: ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ನಗರದ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಲಿರುವ ಹಳದಿ ಮಾರ್ಗದ ಮೊದಲ ಮೆಟ್ರೋ ಬೋಗಿಗಳಿಗೆ ಕೋಲ್ಕತ್ತಾದ ಟೀಟಾಘರ್ನಲ್ಲಿ ಚಾಲನೆ ನೀಡಲಾಗಿದೆ. ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು ಬೋಗಿಗೆ ಟಿಟಾನಗರದಿಂದ ಹಸಿರು ನಿಶಾನೆ ಸಿಕ್ಕಿದ್ದು, ಶೀಘ್ರದಲ್ಲಿಯೇ ಬೆಂಗಳೂರಿಗೆ ತಲುಪಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲು ಬೋಗಿ ಬರಲಿದೆ. ಮಾರ್ಚ್, ಏಪ್ರಿಲ್ ನಂತರ ಪ್ರತಿ ತಿಂಗಳು ಬೆಂಗಳೂರಿಗೆ ಎರಡು ರೈಲು ಬೋಗಿ ಬರಲಿದೆ. ಆದಷ್ಟು ಬೇಗ ಆರ್.ವಿ.ರಸ್ತೆನಿಂದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಮೆಟ್ರೋ ರೈಲು ಆರಂಭ ಮಾಡಲಾಗುವುದು. ಇದು ಬೆಂಗಳೂರು ಸಂಚಾರದಟ್ಟಣೆಗೆ ನಿವಾರಣೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಮೆಟ್ರೊ ಮಾರ್ಗದ ಆರಂಭಕ್ಕೆ ಇದ್ದ ಅಡೆತಡೆಗಳನ್ನು ನಿವಾರಿಸಲು ಹಲವಾರು ಪ್ರಯತ್ನಗಳನ್ನು ಮಾಡಿದ್ದು, ಈ ಕಾರ್ಯಕ್ಕೆ ಸಂಬಂಧಿಸಿದಂತೆ ಎಲ್ಲರನ್ನು ಒಂದೇ ವೇದಿಕೆಗೆ ತಂದು ಅಧಿಕಾರಿಗಳ ಮತ್ತು ಸಚಿವರ ಮಟ್ಟದಲ್ಲಿ ಇದ್ದ ತೊಂದರೆಗಳನ್ನು ಬಗೆಹರಿಸಲು ಅವಿರತವಾಗಿ ಶ್ರಮ ವಹಿಸಲಾಗಿದೆ. 1.2 ಕೋಟಿ ವಾಹನಗಳು ರಸ್ತೆಗಿಳಿಯುವ ಬೆಂಗಳೂರು ನಗರದಲ್ಲಿ , ಈ ಮಾರ್ಗ ಆರಂಭವಾಗುವುದರಿಂದ ಪ್ರತಿನಿತ್ಯ 2.5 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಐಟಿ-ಬಿಟಿ, ಕೈಗಾರಿಕಾ ಕಾರಿಡಾರ್ಗಳಲ್ಲಿ ಸಂಚರಿಸಲು ಅನುಕೂಲವಾಗಲಿದೆ ಎಂದರು.