ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆ ನಿರ್ಧಾರವಾಗಿಲ್ಲ : ಸಂತೋಷ್‌ ಲಾಡ್‌

| N/A | Published : Jun 21 2025, 08:53 AM IST

Santhosh Lad

ಸಾರಾಂಶ

ಕಾರ್ಮಿಕರ ಕೆಲಸದ ಅವಧಿ ಹೆಚ್ಚಳಕ್ಕೆ ಸಂಬಂಧಿಸಿ ಪ್ರಸ್ತಾವನೆ ಹಿಂದಿನಿಂದಲೂ ಇದೆ. ಅದನ್ನು ಅನುಷ್ಠಾನಗೊಳಿಸುವ ಕುರಿತು ಕೈಗಾರಿಕೆಗಳಿಗೆ ಯಾವುದೇ ಅನುಮತಿ ಈವರೆಗೆ ನೀಡಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸ್ಪಷ್ಟಪಡಿಸಿದರು.

 ಬೆಂಗಳೂರು :  ಕಾರ್ಮಿಕರ ಕೆಲಸದ ಅವಧಿ ಹೆಚ್ಚಳಕ್ಕೆ ಸಂಬಂಧಿಸಿ ಪ್ರಸ್ತಾವನೆ ಹಿಂದಿನಿಂದಲೂ ಇದೆ. ಅದನ್ನು ಅನುಷ್ಠಾನಗೊಳಿಸುವ ಕುರಿತು ಕೈಗಾರಿಕೆಗಳಿಗೆ ಯಾವುದೇ ಅನುಮತಿ ಈವರೆಗೆ ನೀಡಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸ್ಪಷ್ಟಪಡಿಸಿದರು.

ವಿಕಾಸಸೌಧದಲ್ಲಿ ಶುಕ್ರವಾ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲಸದ ಅವಧಿ ಹೆಚ್ಚಳ ವಿಚಾರದಲ್ಲಿ ನಮಗೆ ಸ್ಪಷ್ಟತೆಯಿದೆ. ಹೀಗಾಗಿ ಹಲವು ದಿನಗಳಿಂದ ಕೈಗಾರಿಕೆಗಳ ಬೇಡಿಕೆಯಿದ್ದರೂ ಅದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಜತೆಗೆ ಕೆಲಸದ ಅವಧಿ ಹೆಚ್ಚಳಕ್ಕೆ ಕೈಗಾರಿಕೆಗಳಿಗೆ ಅನುಮತಿಸಿಲ್ಲ ಎಂದರು.

ಐಟಿ ಕಂಪನಿಗಳು ಸೇರಿ ಆಯ್ದ ಕೆಲ ಔದ್ಯೋಗಿಕ ಕ್ಷೇತ್ರಗಳಲ್ಲಿ ಕೆಲಸ ಅವಧಿಯನ್ನು ಗರಿಷ್ಠ 9ರಿಂದ 10 ಗಂಟೆಯವರೆಗೆ ವಿಸ್ತರಿಸಲು ಹಾಗೂ ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗಳಿಗೆ ವಿಸ್ತರಿಸುವ ಪ್ರಸ್ತಾವನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ಅದಕ್ಕೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತವಾಗುತ್ತಿದೆ. ಜತೆಗೆ ಐಟಿ ಸೇರಿ ಕೈಗಾರಿಕಾ ಉದ್ಯೋಗಿಗಳು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸರ್ಕಾರ ಅದಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರವನ್ನೂ ಕೈಗೊಂಡಿಲ್ಲ. ಅದು ಇನ್ನೂ ಚರ್ಚಾ ಹಂತದಲ್ಲಿದೆ ಎಂದು ಹೇಳಿದರು.

ಪ್ರಸ್ತುತ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ರ 7 ಪ್ರಕಾರ ಕೆಲಸದ ಅವಧಿ ದಿನಕ್ಕೆ ಒಂಬತ್ತು ಗಂಟೆ ಮೀರುವಂತಿಲ್ಲ. ಗರಿಷ್ಠ ಹೆಚ್ಚುವರಿ ಅವಧಿ (ಒಟಿ) 10 ಗಂಟೆ ಮೀರಬಾರದು. ಅದಕ್ಕೆ ತಕ್ಕಂತೆ ಕೆಲಸದ ಅವಧಿ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

Read more Articles on