ಆ.15ರ ನಸುಕಿನ ಜಾವ ಎನ್ಕೌಂಟರ್ ನಡೆಸಿ ಮೂವರು ಬೇಟೆಗಾರರನ್ನು ಅರಣ್ಯ ಸಿಬ್ಬಂದಿ ಕೊಂದ ಬಳಿಕ ಉದ್ರಿಕ್ತ ಜನರು 9 ಕಳ್ಳಬೇಟೆ ಶಿಬಿರಗಳನ್ನು ಜಿಲೆಟಿನ್ ಕಡ್ಡಿ, ಡೈನಮೈಟ್ ಬಳಸಿ ಧ್ವಂಸಗೊಳಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಹನೂರು : ಆ.15ರ ನಸುಕಿನ ಜಾವ ಎನ್ಕೌಂಟರ್ ನಡೆಸಿ ಮೂವರು ಬೇಟೆಗಾರರನ್ನು ಅರಣ್ಯ ಸಿಬ್ಬಂದಿ ಕೊಂದ ಬಳಿಕ ಉದ್ರಿಕ್ತ ಜನರು 9 ಕಳ್ಳಬೇಟೆ ಶಿಬಿರಗಳನ್ನು ಜಿಲೆಟಿನ್ ಕಡ್ಡಿ, ಡೈನಮೈಟ್ ಬಳಸಿ ಧ್ವಂಸಗೊಳಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಅರಣ್ಯಾಧಿಕಾರಿ, ಬೇಟೆಗಾರರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಘಟನೆ ನಡೆದ ಬಳಿಕ ಉದ್ರಿಕ್ತರು 28 ಕಳ್ಳಬೇಟೆ ತಡೆ ಶಿಬಿರಗಳ ಪೈಕಿ 8 ಶಿಬಿರಗಳನ್ನು ಜಿಲೆಟಿನ್ ಕಡ್ಡಿ, ಸ್ಫೋಟಕಗಳನ್ನು ಬಳಸಿ ಧ್ವಂಸ ಮಾಡಿದ್ದರು ಎಂದು ಎಸಿಎಫ್ ಮರಿಸ್ವಾಮಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾವೇರಿ ವನ್ಯಜೀವಿಧಾಮದ ಎಸಿಎಫ್ ಮರಿಸ್ವಾಮಿ ಅವರು, ಹನೂರು ತಾಲೂಕಿನ ಶಾಗ್ಯ ಶಾಖೆಯ 28 ಕಳ್ಳಬೇಟೆ ತಡೆ ಶಿಬಿರಗಳ ಪೈಕಿ 9ರ ಮೇಲೆ ದುಷ್ಕರ್ಮಿಗಳು ಜಿಲೆಟಿನ್ ಕಡ್ಡಿ, ಡೈನಮೈಟ್ ಬಳಸಿ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.
ಕೊತ್ತನೂರು ವಲಯದ ಮಿಂಚಿನಾರೆಹಳ್ಳ ಮತ್ತು ನಾಲಾ ಬೋಳಿ, ಬೇಟೆಗಾರನಗುಡ್ಡ, ಬೂದಿಕೆರೆ, ಕಳ್ಳದೊಡ್ಡಿ, ಹೊಳೆಮುರಿದಟ್ಟಿ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ಡೈನಮೈಟ್ ಮತ್ತು ಜಿಲೆಟಿನ್ ಕಡ್ಡಿಗಳನ್ನು ಬಳಸಿ ದುಷ್ಕರ್ಮಿಗಳು ಸ್ಫೋಟಿಸಿದ್ದಾರೆ. ಸ್ಫೋಟದ ತೀವ್ರತೆಗೆ ಗೋಡೆಗಳು, ಪೀಠೋಪಕರಣ ಧ್ವಂಸವಾಗಿವೆ. ದಟ್ಟನೆಯ ಹೊಗೆ ಕುರುಹು ಇಡೀ ಕಟ್ಟಡದಲ್ಲಿದೆ. ತೀವ್ರತೆಗೆ ಗೋಡೆಗಳು ಶಿಥಿಲಗೊಂಡಿದ್ದು, ಒಳಗಿನ ವಸ್ತುಗಳು ಸುಟ್ಟು ಕರಕಲಾಗಿವೆ.
ಹೊಳೆಮುರಿದಟ್ಟಿ ಕಳ್ಳಬೇಟೆ ತಡೆ ಶಿಬಿರದಲ್ಲಿ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿದ್ದು, ಅದೃಷ್ಟವಶಾತ್ ಸಿಬ್ಬಂದಿ ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಸಂಬಂಧ ಎಸ್ಪಿ ಎಂ. ಮುತ್ತುರಾಜು ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
12 ಅರಣ್ಯ ಸಿಬ್ಬಂದಿ ವಿಚಾರಣೆ
ಹೊಳೆಮುರಿದಟ್ಟಿಯಲ್ಲಿ ನಡೆದ ಎನ್ಕೌಂಟರ್ಗೆ 12 ಸಿಬ್ಬಂದಿಯ 2 ಪ್ರತ್ಯೇಕ ತಂಡ ಕಾರ್ಯಾಚರಣೆಗಿಳಿದಿತ್ತು. ಎಲ್ಲ ಸಿಬ್ಬಂದಿಯನ್ನು ಅರಣ್ಯಾಧಿಕಾರಿಗಳು, ವಿಚಾರಣೆಗೆ ಒಳಪಡಿಸಿದ್ದಾರೆ. ಆತ್ಮರಕ್ಷಣೆಗಾಗಿ ಸಿಬ್ಬಂದಿ ಪ್ರತಿದಾಳಿ ಮಾಡಿದ್ದರು ಎಂದು ಎಸಿಎಫ್ ಮರಿಸ್ವಾಮಿ ತಿಳಿಸಿದ್ದಾರೆ.
ವಸತಿ ಗೃಹಗಳನ್ನೂ ನಾಶ ಮಾಡಿದ್ದಾರೆ
ಹನೂರು ಅರಣ್ಯ ವ್ಯಾಪ್ತಿಯಲ್ಲಿ ಶೂಟೌಟ್ ಘಟನೆ ಬಳಿಕ ಕೆಲ ದುಷ್ಕರ್ಮಿಗಳು ಇಲಾಖೆಯ ವಿವಿಧ ಬೇಟೆ ತಡೆ ಶಿಬಿರ, ವಸತಿ ಗೃಹಗಳನ್ನು ಬಹುತೇಕ ಧ್ವಂಸಗೊಳಿಸಿದ್ದಾರೆ. ಈ ಕೃತ್ಯಕ್ಕೆ ಜಿಲೆಟಿನ್ ಕಡ್ಡಿಗಳನ್ನು ಬಳಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಈ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದೆ.

