ಸಾರಾಂಶ
ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ಆರೆಸ್ಸೆಸ್ ಜನ್ಮ ಶತಾಬ್ದಿ ಸಂಭ್ರಮದ ಪಥ ಸಂಚಲನ ಶಾಂತಿಯುತವಾಗಿ ನಡೆಯಿತು. ಹೈಕೋರ್ಟ್ ಷರತ್ತಿನಂತೆ 300 ಗಣವೇಷಧಾರಿ ಸ್ವಯಂಸೇವಕರು, 50 ಮಂದಿ ಬ್ಯಾಂಡ್ ವಾದಕರ ವೃಂದದವರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
ಕಲಬುರಗಿ : ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ಆರೆಸ್ಸೆಸ್ ಜನ್ಮ ಶತಾಬ್ದಿ ಸಂಭ್ರಮದ ಪಥ ಸಂಚಲನ ಶಾಂತಿಯುತವಾಗಿ ನಡೆಯಿತು. ಹೈಕೋರ್ಟ್ ಷರತ್ತಿನಂತೆ 300 ಗಣವೇಷಧಾರಿ ಸ್ವಯಂಸೇವಕರು, 50 ಮಂದಿ ಬ್ಯಾಂಡ್ ವಾದಕರ ವೃಂದದವರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
ಪಟ್ಟಣದಲ್ಲಿರುವ ಬಜಾಜ್ ಕಲ್ಯಾಣ ಮಂಟಪದ ಬಳಿ ಸರಿಯಾಗಿ 3 ಗಂಟೆಗೆ ಆರಂಭವಾದ ಪಥ ಸಂಚಲನ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕಾಶಿ ಗಲ್ಲಿ ಮಾರ್ಗವಾಗಿ ಸಾಗಿ 45 ನಿಮಿಷದೊಳಗೇ ಮತ್ತೆ ಬಜಾಜ್ ಕಲ್ಯಾಣ ಮಂಟಪದಲ್ಲೇ ಸಮಾಪನಗೊಂಡಿತು.
ಪಥ ಸಂಚಲನದ ನಂತರ ಇದೇ ಕಲ್ಯಾಣ ಮಂಟಪದಲ್ಲಿ ಬೌದ್ಧಿಕ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಕಲಬುರಗಿ ಆರೆಸ್ಸೆಸ್ ಬೌದ್ಧಿಕ ಪ್ರಮುಖ ಕೃಷ್ಣಾ ಜೋಶಿ ಮಾತನಾಡಿದರು. ಪಥ ಸಂಚಲನ ಹಾಗೂ ಬೌದ್ದಿಕ ಸಮಾರಂಭ ಎರಡನ್ನೂ ಸೇರಿಸಿ ಹೈಕೋರ್ಟ್ ಷರತ್ತಿನಂತೆ ಮಧ್ಯಾಹ್ನ 3 ಗಂಟೆಯಿಂದ 5.30 ರೊಳಗೇ ತನ್ನೆಲ್ಲ ಕಾರ್ಯಕ್ರಮಗಳನ್ನು ಆರ್ಎಸ್ಎಸ್ ಪೂರೈಸಿತು.
ಚಿತ್ತಾಪುರವಿಡೀ ಕೇಸರಿಮಯ:
ಆರೆಸ್ಸೆಸ್ ಪಥ ಸಂಚಲನದ ನಿಮಿತ್ತವಾಗಿ ಇಡೀ ಪಟ್ಟಣದಾದ್ಯಂತ ಕೇಸರಿ ಬಾವುಟಗಳು, ಭಗವಾಧ್ವಜಗಳು ರಾರಾಜಿಸಿದವು. ಪಟ್ಟಣದ ಪ್ರಮುಖ ವೃತ್ತ, ರಸ್ತೆಗಳಲ್ಲೆಲ್ಲಾ ಸಂಘದವರು ಸ್ವಾಗತ ಕಮಾನು ಅಳವಡಿಸಿ ಸಾರ್ವಜನಿಕರ ಗಮನ ಸೆಳೆದಿದ್ದರು.
ಕಾಶಿ ಗಲ್ಲಿಯಲ್ಲಂತೂ ಅಲ್ಲಿನ ನಿವಾಸಿಗಳು ತಳಿರು ತೋರಣ ಕಟ್ಟಿ, ಮನೆಯಂಗಳದಲ್ಲಿ ರಂಗವಲ್ಲಿ ಹಾಕಿ, ರಸ್ತೆಯುದ್ದಕ್ಕೂ ಶೃಂಗಾರ ಮಾಡಿದ್ದರು. ಗಣವೇಷಧಾರಿಗಳು ಬರುತ್ತಿದ್ದಂತೆಯೇ ಕಲಶ ಸ್ವಾಗತ ಕೋರಿ ಪುಷ್ಪವೃಷ್ಟಿಗರೆದರು. ಸಂಘದ ನಮಸ್ತೆ ಸದಾ ವತ್ಸಲೇ ಗೀತೆಗಳು, ಭಾರತ್ ಮಾತಾಕಿ ಜೈ ಜಯಘೋಷಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು.
ಪೊಲೀಸ್ ಸರ್ಪಗಾವಲು:
ಪಥ ಸಂಚಲನ ನಿಮಿತ್ತ ಚಿತ್ತಾಪುರ ಪೋಲಿಸ್ಮಯವಾಗಿತ್ತು. 1000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇದಲ್ಲದೆ, ಡ್ರೋನ್ ಕ್ಯಾಮೆರಾಗಳು, ಸಿಸಿಟಿವಿಗಳನ್ನು ಅಳವಡಿಸಿ ಇಡೀ ಪಥ ಸಂಚಲನ, ಬೌದ್ದಿಕ ಸಮಾರಂಭಗಳ ಚಟುವಟಿಕೆಗಳನ್ನೆಲ್ಲ ಪೊಲೀಸರು ಚಿತ್ರೀಕರಿಸಿಕೊಂಡರು.
ಬಿಜೆಪಿ ಮುಖಂಡ ಮಣಿಕಂಠಗೆ ನಿರ್ಬಂಧ:
ಆರೆಸ್ಸೆಸ್ ಪಥ ಸಂಚಲನ ಹಿನ್ನೆಲೆಯಲ್ಲಿ ಚಿತ್ತಾಪುರ ಪ್ರವೇಶಿಸದಂತೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡಗೆ ತಹಶೀಲ್ದಾರ್ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡುವ ರಾಠೋಡ್, ಈ ಸಂದರ್ಭದಲ್ಲಿ ಚಿತ್ತಾಪುರಕ್ಕೆ ಬಂದರೆ ಖರ್ಗೆ ಅಭಿಮಾನಿಗಳು ಕೆರಳಿ, ಗಲಾಟೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಚಿತ್ತಾಪುರ ಪಥ ಸಂಚಲನ ಹೊಸ ಅನುಭವ: ಕೃಷ್ಣಾ ಜೋಷಿ:
ಚಿತ್ತಾಪುರದಲ್ಲಿನ ಪಥ ಸಂಚಲನ, ಸುತ್ತಲಿನ ಬೆಳವಣಿಗೆಗಳು ಸಂಘಕ್ಕೆ ಹೊಸ ಅನುಭವವೆಂದು ಆರೆಸ್ಸೆಸ್ ಬೌದ್ಧಿಕ ಪ್ರಮುಖ ಕೃಷ್ಣಾ ಜೋಷಿ ಹೇಳಿದರು. ಚಿತ್ತಾಪುರ ಪಥಸಂಚಲನ ವಿಚಾರದಲ್ಲಿ ಕೆಲವು ಹೊಸ ಅನುಭವಗಳು ನಮಗಾಗಿವೆ. ಆದರೆ ಇವು ಯಾವುವು ಆರ್ಎಸ್ಎಸ್ಗೆ ಹೊಸದೇನು ಅಲ್ಲ, ನಮ್ಮ ಸಂಘಟನೆಯ ಧ್ಯೇಯದಂತೆ ನಾವು ಶಾಂತಿಯುತವಾಗಿ ಪಥಸಂಚಲನ ಪೂರ್ಣಗೊಳಿಸುತ್ತೇವೆ. ಯಾರು ಏನು ಗಳಿಸಿದರೋ ಅವರನ್ನೇ ಕೇಳಬೇಕು. ಆದರೆ, ನಾವಂತೂ ಪಥ ಸಂಚಲನ ನಡೆಸುವ ನಮ್ಮ ಹಕ್ಕು ಉಳಿಸಿಕೊಂಡಿದ್ದೇವೆಂದು ಕೃಷ್ಣಾ ಜೋಷಿ ಹೇಳಿದರು.
ಕನ್ನಡಪ್ರಭ ಜೊತೆ ಮಾತನಾಡಿ, ಶಾಂತಿಯುತವಾಗಿ, ಶಿಸ್ತುಬದ್ಧವಾಗಿ, ಯಾವುದೇ ರೀತಿಯ ಅಶಾಂತಿಗೆ ಅವಕಾಶ ಕೊಡದಂತೆ ಕಾರ್ಯಕ್ರಮ ನಡೆಸುವುದೇ ನಮ್ಮ ಧ್ಯೇಯವಾಗಿತ್ತು. ಹಾಗೇ ಚಿತ್ತಾಪುರದಲ್ಲಿ ಪಥ ಸಂಚಲನ ನಡೆದಿದೆ. ನಮ್ಮ ಪಥ ಸಂಚಲನ ಯಾರ ವಿರುದ್ಧವೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪಥ ಸಂಚಲನ ಮಾಡ್ಬೇಡಿ ಅಂದಿಲ್ಲ; ಪ್ರಿಯಾಂಕ್ ಖರ್ಗೆ:
‘ಆರ್ಎಸ್ಎಸ್ನವರಿಗೆ ನಾವು ಚಿತ್ತಾಪುರದಲ್ಲಿ ಪಥ ಸಂಚಲನ ಮಾಡ್ಬೇಡಿ ಅಂತ ಎಲ್ಲಿ ಹೇಳಿದ್ವಿ?, ಅನುಮತಿ ಕೇಳ್ರಪ್ಪ ಅಂತ ಹೇಳಿದ್ವಿ, ಆದ್ರೆ ಅವರು ಮಾಹಿತಿಗಾಗಿ ಅಂತ ಅರ್ಜಿ ಕೊಟ್ಟರು, ತಾಲೂಕು ಆಡಳಿತ ಅನುಮತಿ ನಿರಾಕರಿಸಿತು. ಕೋರ್ಟ್ಗೆ ಹೋಗಿದ್ದು ಅವರೆ ತಾನೆ, ಅನುಮತಿ ಕೋರಿ ಹೊಸ ಅರ್ಜಿ ಹಾಕಿದ್ರು, ಅನುಮತಿ ಕೊಟ್ವಿ, ಹೈಕೋರ್ಟ್ ಷರತ್ತು ಹಾಕಿದೆ. ಇದರಲ್ಲಿ ಗೊಂದಲ ಏನಿಲ್ಲ’ ಎಂದು ಆರ್ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಆರೆಸ್ಸೆಸ್ ಪಥ ಸಂಚಲನ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾವು ಹೇಳಿದ ಪ್ರಕಾರವೇ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥ ಸಂಚಲನ ನಡೀತಿದೆ ಎಂದರು.
ಆರೆಸ್ಸೆಸ್ ಜೊತೆಗಿನ ಸಂಘರ್ಷ ಇದೀಗ ಆರಂಭವಾಗಿದೆ. ಇದು ಆರಂಭ ಮಾತ್ರ. ಇನ್ನೂ ಸ್ವಲ್ಪ ದಿನ ತಡೀರಿ, ಆದಾಯದ ವಿಚಾರದಲ್ಲಿ ಆರೆಸ್ಸೆಸ್ ಹೇಗೆ ಸುರಕ್ಷಿತವಾಗಿದೆ ಎಂಬುದನ್ನು ಬಯಲು ಮಾಡುವೆ ಎಂದರು.
ಸಂಘಟನೆಯ ನೋಂದಣಿ ವಿಚಾರದಲ್ಲಿ ಸರಸಂಘ ಸಂಚಾಲಕ ಮೋಹನ ಭಾಗವತ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬೆಂಗಳೂರು ಕ್ಲಬ್ ಕೂಡಾ ಕೆಲವರ ಸಂಘವಾದರೂ ಅದು ನೋಂದಣಿಯಾಗಿದೆ. ಇವರಿಗ್ಯಾಕೆ ನೋಂದಣಿ ಕಾನೂನು ಅನ್ವಯಿಸೋದಿಲ್ಲ. ಇವರು ಹೇಳಿದ್ದೇ ಸಂವಿಧಾನನಾ?. ಸಂವಿಧಾನದಲ್ಲಿದ್ದಂತೆ ಇವರು ಪಾಲಿಸಬೇಕಾ? ಎಂದು ಖಾರವಾಗಿ ಪ್ರಶ್ನಿಸಿದರು.
ಆರೆಸ್ಸೆಸ್ ಯಾಕೆ ನೋಂದಣಿಯಾಗಿಲ್ಲವೆಂದರೆ, ನೋಂದಣಿ ಆದ ಮರುಕ್ಷಣವೇ ಐಟಿ ಇತ್ಯಾದಿ ಜಾಲದಡಿ ಬರಬೇಕು. ಗುರುದಕ್ಷಿಣೆ ಕೂಡಾ ಲೆಕ್ಕವಾಗಬೇಕು, ಹೀಗಾಗಿ ಇದರಿಂದ ದೂರವಿರಲು ಇವೆಲ್ಲ ತಂತ್ರಗಾರಿಕೆ ಎಂದು ಖರ್ಗೆ ಆರೋಪಿಸಿದರು.
ದೇವಸ್ಥಾನಗಳ ಹುಂಡಿ ಹಣವನ್ನು ಲೆಕ್ಕ ಮಾಡುತ್ತೇವೆ. ಆದರೆ, ಸಂಘಕ್ಕೆ ಬರೋ ದೇಣಿಗೆ ಲೆಕ್ಕವಾಗಬಾರದಾ?. ಏನಿದು ಕಾನೂನು?. ಅವ್ರು ಹೇಳಿದ್ಹಂಗೆ ಕೇಳಿಕೊಂಡು ಇರಬೇಕಾ?. ಕಲಬುರಗಿ ಭಾಗದಲ್ಲೇ ಕೆಕೆಆರ್ಡಿಬಿ ಹಣ 100 ಕೋಟಿ ರು.ಗಳನ್ನು ಆರೆಸ್ಸೆಸ್ ಮೂಲದವರು ಹೇಗೆ ಲೂಟಿ ಹೊಡೆದರು ಅನ್ನೋದನ್ನು 1 ತಿಂಗಳಲ್ಲಿ ಬಹಿರಂಗ ಮಾಡ್ತೀನಿ. ಆಗ ನಿಮಗೇ ಗೊತ್ತಾಗುತ್ತೆ ಅವರೆಷ್ಟು ದೊಡ್ಡ ದರೋಡೆಕೋರರು ಎಂದು. ಅವರ ಹಗರಣವನ್ನೆಲ್ಲಾ ಬಯಲು ಮಾಡ್ತೀನಿ ಎಂದು ಖರ್ಗೆ ಹೇಳಿದರು.
ಸಂವಿಧಾನದ ಪ್ರಕಾರ ಸಂಘ-ಸಂಸ್ಥೆಗಳವರು ತಮ್ಮ ಪ್ರತಿಭಟನೆ, ಪಥ ಸಂಚಲನ ಮಾಡಲು ಹಕ್ಕಿದೆ. ಅದಕ್ಕೆ ಅನುಮತಿ ಕೋರುವುದಕ್ಕೂ ಪದ್ಧತಿಯಿದೆ. ಹೀಗಾಗಿ ಯಾರೇ ಇರಲಿ, ಈ ನೆಲದ ಕಾನೂನಿನಂತೆಯೇ ನಡೆದುಕೊಳ್ಳಬೇಕು. ಚಿತ್ತಾಪುರದಲ್ಲಿ ಆರೆಸ್ಸೆಸ್ಗೆ ನಾವು ಹೇಳಿದ್ದು ಇದನ್ನೇ ಎಂದು ಸಚಿವ ಖರ್ಗೆ ಹೇಳಿದರು.
3 ಲಕ್ಷ ಜನ ಚಿತ್ತಾಪುರಕ್ಕೆ ಬರ್ತೀನಿ ಅಂದರು. ಈಗ ಎಷ್ಟು ಬರ್ತಿದ್ದಾರೆ, ಕೇವಲ 300 ಮಂದಿ. ಅವ್ರು ಹೇಳಿದ ಹಾಗೆ ಆಗೋದಿಲ್ಲ. ನೆಲದ ಕಾನೂನು ಎಲ್ಲರಿಗೂ ಒಂದೇ. ಬೆಂಗಳೂರು, ಮೈಸೂರು ಬಿಡಿ, ಪಕ್ಕದ ಕಲಬುರಗಿ ಜನರೇ ಚಿತ್ತಾಪುರಕ್ಕೆ ಹೋಗದಂತೆ ಹೈಕೋರ್ಟ್ ಆದೇಶವಿದೆ. ಇದನ್ನೆಲ್ಲ ಈಗಲಾದರೂ ಅವರು ಅರಿಯಬೇಕು ಎಂದು ಹೇಳಿದರು.
;Resize=(690,390))
)
)
;Resize=(128,128))
;Resize=(128,128))
;Resize=(128,128))