ಮೇಕೆದಾಟಿಗೆ ತಮಿಳರು ಅಡ್ಡಿ ಮಾಡದಂತೆ ಮೋದಿಗೆ ದೇವೇಗೌಡ ಮನವಿ

| Published : Apr 22 2024, 08:21 AM IST / Updated: Apr 22 2024, 08:23 AM IST

HDD Modi

ಸಾರಾಂಶ

 ಮೇಕೆದಾಟು ಯೋಜನೆಯ ಅಗತ್ಯವಿದೆ. ಈ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡಿನವರು ಅಡ್ಡಿಪಡಿಸಬಾರದು. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ತಾವು ಮನವಿ ಮಾಡಿದ್ದಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ಹಾಸನ :  ರಾಜ್ಯದಲ್ಲಿ ತೀವ್ರ ನೀರಿನ ಸಮಸ್ಯೆ ಇದೆ. ಹೀಗಾಗಿ, ಕಾವೇರಿ ನೀರಿನ ಹೆಚ್ಚುವರಿ ಬಳಕೆಗೆ ಮೇಕೆದಾಟು ಯೋಜನೆಯ ಅಗತ್ಯವಿದೆ. ಈ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡಿನವರು ಅಡ್ಡಿಪಡಿಸಬಾರದು. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ತಾವು ಮನವಿ ಮಾಡಿದ್ದಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ಹೊಳೆನರಸೀಪುರ ತಾಲೂಕಿನ ನಗರನಹಳ್ಳಿಯಲ್ಲಿ ಮಾತನಾಡಿ, ಮೋದಿಯವರ ರಾಜ್ಯ ಭೇಟಿ ವೇಳೆ ಕಾವೇರಿ ವಿಚಾರವಾಗಿ ಚರ್ಚಿಸಿದ್ದೇನೆ. ಮೋದಿ ಕಾರ್ಯಕ್ರಮದ ವೇದಿಕೆಯಲ್ಲೇ ಈ ಬಗ್ಗೆ ಮಾತನಾಡಿದ್ದೇನೆ. ತಮಗೆ ಕಾವೇರಿ ನೀರಿನ ಸಮಸ್ಯೆ ಅರ್ಥವಾಗಿದೆ. ಈ ಬಗ್ಗೆ ಏನಾದರೂ ಮಾಡುತ್ತೇನೆ ಎಂದು ಮೋದಿಯವರು ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ನಾವು 28ಕ್ಕೆ 28 ಸ್ಥಾನಗಳನ್ನೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದಿದ್ದೇನೆ. ಮೈತ್ರಿಕೂಟದ 28 ಸಂಸದರನ್ನು ಗೆಲ್ಲಿಸಿಕೊಂಡು ಮೋದಿ ಬಳಿ ಹೋಗೋಣ. ಕಾವೇರಿ ಸಮಸ್ಯೆಗೊಂದು ಪರಿಹಾರ ಹುಡುಕೋಣ. ನಾನು ಬದುಕಿರುವಾಗಲೇ ಈ ಯೋಜನೆ ಆಗಬೇಕು ಎಂದರು.

ನಾನು ರಾಜ್ಯದ ಎಲ್ಲಾ ಕಡೆ ಪ್ರಚಾರ ನಡೆಸಿ, ಹೋರಾಟ ಮಾಡುತ್ತಾ ಇದ್ದೇನೆ. ಮೋದಿ ಬಿಟ್ಟರೆ ಪ್ರಧಾನಿ ಆಗಲು ಬೇರೆ ಯಾರಿಗೂ ಈ ದೇಶದಲ್ಲಿ ಯೋಗ್ಯತೆ ಇಲ್ಲ ಎಂದು ಅವರು ಪ್ರತಿಪಾದಿಸಿದರು.