ಭಾವಗೀತೆಗಳ ಸರದಾರ ಎಚ್ಎಸ್‌ವಿ ಇನ್ನಿಲ್ಲ

| N/A | Published : May 31 2025, 05:07 AM IST

Hs Venkateshamurthy

ಸಾರಾಂಶ

‘ಎಚ್‌ಎಸ್‌ವಿ’ ಎಂದೇ ಚಿರಪರಿಚಿತರಾಗಿದ್ದ ಹಿರಿಯ ಕವಿ, ಭಾವಗೀತೆಗಳ ಸರದಾರ, ನಾಟಕ ರಚನೆಕಾರ ಡಾ.ಎಚ್‌.ಎಸ್. ವೆಂಕಟೇಶ ಮೂರ್ತಿ (80) ಶುಕ್ರವಾರ ನಿಧನರಾದರು.

 ಬೆಂಗಳೂರು : ‘ಎಚ್‌ಎಸ್‌ವಿ’ ಎಂದೇ ಚಿರಪರಿಚಿತರಾಗಿದ್ದ ಹಿರಿಯ ಕವಿ, ಭಾವಗೀತೆಗಳ ಸರದಾರ, ನಾಟಕ ರಚನೆಕಾರ ಡಾ.ಎಚ್‌.ಎಸ್. ವೆಂಕಟೇಶ ಮೂರ್ತಿ (80) ಶುಕ್ರವಾರ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ವಾರದ ಹಿಂದಷ್ಟೇ ಕೆಂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ 7 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 9 ಗಂಟೆಗೆ ಚಾಮರಾಜಪೇಟೆಯ ಟಿ.ಆರ್‌.ಮಿಲ್‌ನ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಮೃತರು ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕಳನ್ನು ಅಗಲಿದ್ದಾರೆ.

ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.45ರವರೆಗೆ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬಂಧುಗಳು, ಅಭಿಮಾನಿಗಳು ಮತ್ತು ಸಾರ್ವಜನಿಕರು ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಸರದಿ ಸಾಲಿನಲ್ಲಿ ನಿಂತು ತಮ್ಮನ್ನು ಅಗಲಿದ ಕವಿ ಎಚ್‌ಎಸ್‌ವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್‌, ನಿರ್ದೇಶಕಿ ಕೆ.ಎಂ.ಗಾಯಿತ್ರಿ ಉಪಸ್ಥಿತರಿದ್ದರು. ಇದಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವು ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಂಬನಿ ಮಿಡಿದ ಗಣ್ಯರು:

ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಹಿರಿಯ ನಟ ಶ್ರೀಧರ್‌, ಪ್ರೊ.ಬರಗೂರು ರಾಮಚಂದ್ರಪ್ಪ, ನಿರ್ದೇಶಕರಾದ ಟಿ.ಎಸ್‌.ನಾಗಾಭರಣ, ಟಿ.ಎನ್‌.ಸೀತಾರಾಮ್‌, ಹಿರಿಯ ರಂಗ ನಿರ್ದೇಶಕ ಶ್ರೀನಿವಾಸ್‌ ಜಿ.ಕಪ್ಪಣ್ಣ, ವೈ.ಕೆ.ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ವಸುಂಧರಾ ಭೂಪತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ, ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ್‌, ಕಸಾಪ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಸೇರಿದಂತೆ ಹಲವರು ಎಚ್‌ಎಸ್‌ವ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಗೀತ ನಮನ:

ಎಚ್‌ಎಸ್‌ವಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಿದ್ದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಹಿರಿಯ ಗಾಯಕರಾದ ಸಂಗೀತ ಕಟ್ಟಿ, ಕಿಕ್ಕೇರಿ ಕೃಷ್ಣಮೂರ್ತಿ, ವೈ.ಕೆ.ಮುದ್ದುಕೃಷ್ಣ, ನಾಗಚಂದ್ರಿಕಾ ಭಟ್‌, ಜೋಗಿ ಸುನೀತಾ, ಅಪರ್ಣ ನರೇಂದ್ರ, ಮಂಗಳ ರವಿ ಸೇರಿದಂತೆ ಹಲವು ಗಾಯಕರು ಭಾವಗೀತೆಗಳ ಸರದಾರ ಎಚ್‌ಎಸ್‌ವಿ ಅವರಿಗೆ ಗೀತ ನಮನ ಸಲ್ಲಿಸಿದರು.

ಇದೇ ವೇಳೆ ಮುಕ್ತ ಮುಕ್ತ ಧಾರಾವಾಹಿ ನಿರ್ದೇಶಕ ಟಿ.ಎನ್‌.ಸೀತಾರಾಮ್‌ ಸೇರಿದಂತೆ ಸ್ಥಳದಲ್ಲಿದ್ದ ಎಲ್ಲ ಗಾಯಕರು ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ರಚನೆಯ ‘ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ...’ ಹಾಡಿಗೆ ಧ್ವನಿಗೂಡಿಸುವ ಮೂಲಕ ಅಗಲಿದ ಎಚ್‌ಎಸ್‌ವಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಸರ್ಕಾರಿ ಗೌರವ:

ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಕುಶಲ ತೋಪು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರವಾಗಿ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಅವರು ಗೌರವ ವಂದನೆ ಸಲ್ಲಿಸಿದರು.

ಎಚ್‌ಎಸ್‌ವಿ ನಿಧನ- ಗಣ್ಯರ ಸಂತಾಪ

ಎಚ್ಚೆಸ್ವಿ ಸಾವು ನೋವುಂಟು ಮಾಡಿದೆ

ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶ್ ಮೂರ್ತಿಯವರ ನಿಧನ ನೋವುಂಟು ಮಾಡಿದೆ. ಕವಿತೆ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಪ್ರಬಂಧ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡು, ಅಪಾರ ಓದುಗ ಬಳಗ ಹೊಂದಿದ್ದರು. ಅವರ ಅಗಲಿಕೆಯಿಂದ ಸಾರಸ್ವತ ಲೋಕ ಬಡವಾಗಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ನಿಧನ ಸುದ್ದಿ ಕೇಳಿ ದುಃಖವಾಯಿತು

ಭಾವಗೀತೆಗಳ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ ಹಿರಿಯ ಕವಿ ಎಚ್ಚೆಸ್ವಿ ಎಂದೇ ಜನಜನಿತರಾಗಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಕನ್ನಡದ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಎಚ್ಚೆಸ್ವಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದ್ದರು. ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ.

- ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ

ಸಾಹಿತ್ಯ ಲೋಕಕ್ಕೆ ಆಘಾತ

ಕನ್ನಡ ಭಾವಗೀತೆಗಳ ಭವ್ಯ ಪರಂಪರೆಯ ಪ್ರತಿನಿಧಿ ಡಾ.ಎಚ್.ಎಸ್‌.ವೆಂಕಟೇಶಮೂರ್ತಿ ಅವರ ನಿಧನ ಕನ್ನಡ ಕಾವ್ಯ ಲೋಕಕ್ಕೆ ಅತಿದೊಡ್ಡ ಆಘಾತ ತಂದಿದೆ. ಕನ್ನಡ ಸಾಂಸ್ಕೃತಿಕ ಲೋಕ ಮಹತ್ವದ ಚೇತನ ಕಳೆದುಕೊಂಡಿದೆ.

- ಶಿವರಾಜ ಎಸ್‌.ತಂಗಡಗಿ, ಸಚಿವ

ಬಹುದೊಡ್ಡ ನಷ್ಟ

ಕನ್ನಡದ ಸಾರಸ್ವತ ಲೋಕದ ಸುಪ್ರಸಿದ್ಧ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ಗದ್ಯ, ಕಾವ್ಯ, ನಾಟಕ, ಚಿತ್ರಗೀತೆ ಸೇರಿ ಅಕ್ಷರ ಜಗತ್ತಿಗೆ ಅನೇಕ ಆಯಾಮಗಳಲ್ಲಿ ಕನ್ನಡಕ್ಕೆ ಚಿರಸ್ಮರಣೀಯ ಕೊಡುಗೆ ನೀಡಿರುವ ಎಚ್ಎಸ್‌ವಿ ಅವರ ಅಗಲಿಕೆ ಬಹುದೊಡ್ಡ ನಷ್ಟ.

- ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ತುಂಬಲಾರದ ನಷ್ಟ

ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕನ್ನಡದ ಪ್ರಖ್ಯಾತ ಹಿರಿಯ ಕವಿ, ಸಾಹಿತಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ನಿಧನ ಕನ್ನಡ ಸಾಹಿತ್ಯ‌ಲೋಕಕ್ಕೆ ತುಂಬಲಾರದ ನಷ್ಟ. ಅತ್ಯಂತ ನೋವಿನ ಸಂಗತಿ. ಅವರ ಆತ್ಮಕ್ಕೆ‌ ಚಿರಶಾಂತಿ ಲಭಿಸಲಿ.

- ಆರ್‌.ಅಶೋಕ್‌,ವಿಧಾನಸಭೆ ವಿಪಕ್ಷ ನಾಯಕ

ಎಚ್ಚೆಸ್ವಿ ಸಾಹಿತ್ಯ ತಪಸ್ವಿ

ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ತಮ್ಮನ್ನು ತಪಸ್ವಿಯಂತೆ ಸಮರ್ಪಿಸಿಕೊಂಡಿದ್ದ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬ ವರ್ಗದವರು ಹಾಗೂ ಅವರ ಸಾಹಿತ್ಯಾಭಿಮಾನಿಗಳಿಗೆ ಭಗವಂತನು ಕರುಣಿಸಲಿ.

- ಬಿ.ವೈ.ವಿಜಯೇಂದ್ರ, ರಾಜ್ಯಾಧ್ಯಕ್ಷ, ಬಿಜೆಪಿ

ಕವನಗಳ ಮೂಲಕ ಮನೆಮಾತಾಗಿದ್ರು

ಕನ್ನಡದ ಹಿರಿಯ ಕವಿ, ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ನಿಧನದ ಸುದ್ದಿ ಅತ್ಯಂತ ನೋವಿನ ಸಂಗತಿ. ತಮ್ಮ ಅದ್ಭುತ ಬರವಣಿಗೆ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಛಾಪು ಮೂಡಿಸಿದ್ದ ಅವರು, ತಮ್ಮ ಕವನಗಳ ಮೂಲಕ ನಾಡಿನ ಜನಮನದಲ್ಲಿ ನೆಲೆಸಿದ್ದಾರೆ.

- ಡಾ.ಸಿ.ಅಶ್ವತ್‌ನಾರಾಯಣ, ಶಾಸಕ

ಮನಸ್ಸು ಭಾರ

ಎಚ್‌ಎಸ್‌ವಿ ಎಂದೇ ಪ್ರಸಿದ್ಧರಾಗಿದ್ದ ಕನ್ನಡದ ಮೇರು ಸಾಹಿತಿ, ಖ್ಯಾತ ನಾಟಕ ರಚನಾಕಾರರು ಹಾಗೂ ವಿಮರ್ಶಕರಾದ ಎಚ್.ಎಸ್. ವೆಂಕಟೇಶಮೂರ್ತಿಯವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಮನಸ್ಸು ಭಾರವಾಗಿದೆ. ಇವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ.

- ವಿ.ಸೋಮಣ್ಣ, ಕೇಂದ್ರ ಸಚಿವ

ಎಚ್ಚೆಸ್ವಿ ಸಾವು ಆಘಾತಕಾರಿ

ಭಾವಗೀತೆಯ ಕವಿ ಎಂದೇ ಖ್ಯಾತಿಯಾಗಿದ್ದ ಸಾಹಿತಿ ಶ್ರೀ ಎಚ್.ಎಸ್.ವೆಂಕಟೇಶ್ ‌ಮೂರ್ತಿ ಅವರ ನಿಧನದ ಸುದ್ದಿ ಆಘಾತಕಾರಿಯಾಗಿದೆ. ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

- ನಿಖಿಲ್‌ ಕುಮಾರಸ್ವಾಮಿ, ಅಧ್ಯಕ್ಷ, ಜೆಡಿಎಸ್‌ ಯುವ ಘಟಕ

Read more Articles on