ಸಾರಾಂಶ
ರಾಜ್ಯದಲ್ಲಿ ಪ್ರತಿ ತಿಂಗಳು ಸುಮಾರು 40 ಸಾವಿರ ನಾಯಿ ಕಡಿತದ ಪ್ರಕಣಗಳು ವರದಿಯಾಗುತ್ತಿದ್ದು, ನಾಯಿ ಕಡಿತದಿಂದ ಜೀವ ಉಳಿಸುವ ಆ್ಯಂಟಿ ರೇಬೀಸ್ ಲಸಿಕೆ (ಎಆರ್ವಿ) ಮತ್ತು ರೇಬಿಸ್ ಇಮ್ಯುನೊಗ್ಲೋಬುಲಿನ್ ಔಷಧ ಸಾಕಷ್ಟು ಲಭ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರು : ರಾಜ್ಯದಲ್ಲಿ ಪ್ರತಿ ತಿಂಗಳು ಸುಮಾರು 40 ಸಾವಿರ ನಾಯಿ ಕಡಿತದ ಪ್ರಕಣಗಳು ವರದಿಯಾಗುತ್ತಿದ್ದು, ನಾಯಿ ಕಡಿತದಿಂದ ಜೀವ ಉಳಿಸುವ ಆ್ಯಂಟಿ ರೇಬೀಸ್ ಲಸಿಕೆ (ಎಆರ್ವಿ) ಮತ್ತು ರೇಬಿಸ್ ಇಮ್ಯುನೊಗ್ಲೋಬುಲಿನ್ ಔಷಧ ಸಾಕಷ್ಟು ಲಭ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಆರೋಗ್ಯ ಇಲಾಖೆ, ನಾಯಿ ಕಡಿತವನ್ನು ನೋಟೇಬಲ್ ಡಿಸೀಸ್ ಎಂದು ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಎಲ್ಲೇ ನಾಯಿ ಕಡಿತ ವರದಿಯಾದರೂ ಸಂಬಂಧಪಟ್ಟ ಆಸ್ಪತ್ರೆಗಳು ಆರೋಗ್ಯ ಇಲಾಖೆಗೆ ವರದಿ ನೀಡಬೇಕು ಎಂದು ಹೇಳಿದೆ.
ರಾಜ್ಯದ ’ಔಷಧ’ ತಂತ್ರಾಂಶದ ಮಾಹಿತಿಯ ಪ್ರಕಾರ, ಪ್ರಸ್ತುತ ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ 1,45,684 ವೈಲ್ಸ್ ಎಆರ್ವಿ ಲಭ್ಯವಿದೆ ಮತ್ತು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್ಎಂಎಸಿಎಲ್) ಸಂಸ್ಥೆಯು ಮುಂದಿನ ಎರಡು ವಾರಗಳಲ್ಲಿ 89,386 ವೈಲ್ಸ್ ರೇಬೀಸ್ ಇಮ್ಯುನೊಗ್ಲೋಬುಲಿನ್ ಪೂರೈಕೆಗಾಗಿ ಅಧಿಕೃತ ಆದೇಶ ಹೊರಡಿಸಿದೆ. ಆದ್ದರಿಂದ ಈ ಎರಡೂ ಔಷಗಳು ರಾಜ್ಯದ ಆಸ್ಪತ್ರೆಗಳಲ್ಲಿ ಮುಂದಿನ ಮೂರು ತಿಂಗಳವರೆಗೆ ಯಾವುದೇ ಕೊರತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಆ್ಯಂಟಿ ರೇಬಿಸ್ ಲಸಿಕೆ ಮತ್ತು ಇಮ್ಯುನೊಗ್ಲೋಬುಲಿನ್ನ ಗರಿಷ್ಠ ಬಳಕೆ ಮತ್ತು ನಿರಂತರ ಪೂರೈಕೆ ಬಗ್ಗೆ, ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ನಿಯಮಿತವಾಗಿ ಜ್ಞಾಪನಪತ್ರ ಹೊರಡಿಸಲಾಗಿದೆ. ಈ ಜೀವ ರಕ್ಷಕ ಲಸಿಕೆಗಳ ಸೂಕ್ತ ಬಳಕೆಗಾಗಿ ಹಾಗೂ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಆಸ್ಪತ್ರೆಗಳು ಸ್ಥಳೀಯವಾಗಿಯೇ ಖರೀದಿಸಬಹುದಾಗಿದೆ ಎಂದು ತಿಳಿಸಿದೆ.