ಸಾರಾಂಶ
ಬೆಂಗಳೂರು ; ರಾಜಸ್ಥಾನದಿಂದ ರೈಲಿನಲ್ಲಿ ನಗರಕ್ಕೆ ಮಾಂಸ ಸಾಗಣೆ ಪ್ರಕರಣ ಸಂಬಂಧ ರಾಜಸ್ಥಾನ ಮತ್ತು ನಗರದ ಮಾಂಸ ವ್ಯಾಪಾರಿಗಳಿಗೆ ನೋಟಿಸ್ ನೀಡಲು ಕಾಟನ್ ಪೇಟೆ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ರಾಜಸ್ಥಾನದಿಂದ ನಗರಕ್ಕೆ ರೈಲಿನಲ್ಲಿ ಮಾಂಸ ಪಾರ್ಸೆಲ್ ಕಳುಹಿಸಿದವರು ಹಾಗೂ ಆ ಮಾಂಸವನ್ನು ನಗರಕ್ಕೆ ತರಿಸಿಕೊಂಡಿರುವ ಮಾಂಸದ ವ್ಯಾಪಾರಿಗಳ ಬಗ್ಗೆ ಪೊಲೀಸರು ರೈಲ್ವೆ ಇಲಾಖೆಯಿಂದ ಮಾಹಿತಿ ಪಡೆಯುತ್ತಿದ್ದಾರೆ. ರೈಲ್ವೆ ಇಲಾಖೆಯಿಂದ ಸೋಮವಾರ ಆ ವ್ಯಕ್ತಿಗಳ ಮಾಹಿತಿ ಲಭ್ಯವಾಗಲಿದ್ದು ಬಳಿಕ ಪೊಲೀಸರು ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಕಳೆದ ಶುಕ್ರವಾರ ರಾಜಸ್ಥಾನದಿಂದ ನಗರದ ಕೆಎಸ್ಆರ್ ರೈಲು ನಿಲ್ದಾಣಕ್ಕೆ 90 ಬಾಕ್ಸ್ಗಳಲ್ಲಿ ಸುಮಾರು 4,500 ಕೆ.ಜಿ.ಮಾಂಸ ಪಾರ್ಸೆಲ್ ಬಂದಿತ್ತು. ಈ ಮಾಂಸ ನಾಯಿ ಮಾಂಸ. ಕಳಪೆ ಗುಣಮಟ್ಟದ ಮಾಂಸ. ತಿನ್ನಲು ಯೋಗ್ಯವಲ್ಲದ ಮಾಂಸ ಎಂದು ರಾಷ್ಟ್ರ ರಕ್ಷಣೆ ಪಡೆ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಹಾಗೂ ಸಹಚರರು ಆರೋಪಿಸಿದ್ದರು. ಮಾಂಸವಿದ್ದ ಬಾಕ್ಸ್ಗಳನ್ನು ತೆರೆದು ಪರಿಶೀಲಿಸುವಂತೆ ರೈಲು ನಿಲ್ದಾಣದಲ್ಲಿ ಗಲಾಟೆ ಮಾಡಿದ್ದರು.
ಈ ಸಂಬಂಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಎರಡು ಹಾಗೂ ರಾಜಸ್ಥಾನದಿಂದ ಮಾಂಸ ಪಾರ್ಸೆಲ್ ಕಳುಹಿಸಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಒಂದು ಸೇರಿ ಒಟ್ಟು ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದವು. ಇದರ ಬೆನ್ನಲ್ಲೇ ಅನುಚಿತ ವರ್ತನೆ, ಹಲ್ಲೆ, ನಿಂದನೆ, ಬೆದರಿಕೆ ಆರೋಪದಡಿ ಪುನೀತ್ ಕೆರೆಹಳ್ಳಿಯನ್ನು ಕಾಟನ್ಪೇಟೆ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.