ಚನ್ನರಾಯಪಟ್ಟಣ: ಶೈಕ್ಷಣಿಕ ಹಂತದಲ್ಲಿ ಶಿಸ್ತು, ಶ್ರದ್ಧೆ ಹಾಗೂ ಭಕ್ತಿಯಿಂದ ವಿದ್ಯೆಯನ್ನು ದೀಕ್ಷೆಯಾಗಿ ಸ್ವೀಕರಿಸಬೇಕು ಎಂದು ಶೃಂಗೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಂ. ವರಲಕ್ಷ್ಮೀ ಹೇಳಿದರು.

ತಾಲೂಕು ಜಿನ್ನೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ೨೦೦೦-೨೦೦೩ನೇ ಸಾಲಿನ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಕಷ್ಟಪಟ್ಟು ಶಿಕ್ಷಣ ಪಡೆಯುವ ಬದಲು ಇಷ್ಟದಿಂದ ಸ್ವೀಕರಿಸಿದರೆ ನಂತರದ ಬದುಕು ಸುಂದರವಾಗಿರುತ್ತದೆ ಎಂದರು. ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳ ಉನ್ನತ ಹುದ್ದೆಗಳನ್ನು ಅರಸಿ ಶಿಕ್ಷಣವನ್ನು ಪಡೆಯಬಾರದು. ಜ್ಞಾನಾರ್ಜನೆಗಾಗಿ ಓದುವುದು ಮುಖ್ಯ. ಪ್ರಜ್ಞಾವಂತರು ಹೆಚ್ಚಿದಂತೆಲ್ಲ ಸಮಾಜವು ಪ್ರಗತಿಯತ್ತ ಸಾಗಲಿದೆ. ಸಮಾಜ ಬದಲಾವಣೆ ಹೊಂದಿದರೆ ದೇಶ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಕಾಣುವ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಶಿಕ್ಷಣ, ಸಾಹಿತ್ಯ, ಕ್ರೀಡೆ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬಹುತೇಕ ಮಹನೀಯರು ಸರ್ಕಾರಿ ಶಾಲೆಗಳಲ್ಲಿಯೇ ಓದಿರುವವರು ಎಂಬುದು ಹೆಗ್ಗಳಿಕೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಗೆ ಆಗಮಿಸಿದ ಗುರುಗಳಿಗೆ ಪಾದಪೂಜೆ ಮಾಡಿ ಪುಷ್ಪಾರ್ಚನೆಯೊಂದಿಗೆ ಸ್ವಾಗತಿಸುವ ಮೂಲಕ ವಿದ್ಯಾರ್ಥಿಗಳು ಸಂಭ್ರಮಿಸಿದರು. ಎಲ್ಲಾ ಹಳೆಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಹಾಗೂ ಪಡೆದಿರುವ ಹುದ್ದೆಗಳ ಬಗ್ಗೆ ಗುರುಗಳೊಂದಿಗೆ ಪರಿಚಯಿಸಿಕೊಂಡರು. ನಿವೃತ್ತ ಶಿಕ್ಷಕರಾದ ಎನ್.ಎನ್. ಪುಟ್ಟಸ್ವಾಮಿ, ಎಸ್. ಎಲ್. ವೇಣುಗೋಪಾಲ್, ಉಪನ್ಯಾಸಕರಾದ ಜೆ.ಎಚ್. ರೇಖಾ ಸಿಂಗ್, ಮೋಹಿನುದ್ದೀನ್ ಅಹಮದ್, ಯೋಗ ಶಿಕ್ಷಕಿ ಶಾರದಮ್ಮ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿಗಲಿಂಗಯ್ಯ ಇವರಿಗೆ ಗುರುವಂದನೆ ಸಲ್ಲಿಸಿದರು. ೨೦೦೦-೨೦೦೩ನೇ ಸಾಲಿನ ವಿದ್ಯಾರ್ಥಿಗಳಾದ ಎಚ್. ಜಿ. ಮಂಜೇಗೌಡ, ಎಚ್. ಎಂ. ಪರಮೇಶ್, ಮಂಜುನಾಥ್, ಪ್ರತೀಪ್ ರಾವ್, ಕೆ.ಎಸ್.ಧನಂಜಯ, ಕಿರಣ್, ತಮ್ಮಣ್ಣ ಗೌಡ, ಜೆ. ಟಿ. ಮಂಜುನಾಥ್, ಚೈತ್ರ, ಎಂ. ವಿ. ಶೃತಿ ಮುಂತಾದವರು ಇದ್ದರು.