ಬ್ಯಾಡಗಿ: ವೈಯಕ್ತಿಕವಾದ ಆರ್ಥಿಕ ಮಹತ್ವಾಕಾಂಕ್ಷೆಯಿಲ್ಲದೆ ಮಕ್ಕಳಿಗೆ ಲಾಭ ರಹಿತವಾಗಿ ಶೈಕ್ಷಣಿಕ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಸ್ಥಾಪಿತವಾದ ಬಿಇಎಸ್ ಶಿಕ್ಷಣ ಸಂಸ್ಥೆಯ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಇನ್ನಿತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಬಣ್ಣಿಸಿದರು.
ಪಟ್ಟಣದ ಬಿಇಎಸ್ ಶಿಕ್ಷಣ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಕಟ್ಟಡ ಹಾಗೂ ಕಾಲೇಜು ಆವರಣದಲ್ಲಿ ಪುನರ ನಿರ್ಮಿಸಲಾಗಿರುವ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದೆಲ್ಲೆಡೆ ಸ್ವಾರ್ಥದ ಲಾಭಕ್ಕಾಗಿಯೇ ಶಿಕ್ಷಣ ಸಂಸ್ಥೆಗಳು ನಿರ್ಮಿಸಿಕೊಂಡವರೇ ಹೆಚ್ಚು. ಅಂತಹುದರಲ್ಲಿ ಮಕ್ಕಳ ಮೇಲೆ ಉದ್ದೇಶಪೂರ್ವಕವಾಗಿ ಆರ್ಥಿಕ ಹೊರೆಯನ್ನು ಹಾಕಲಾಗುತ್ತಿದೆ ಎಂದರು.ಶೈಕ್ಷಣಿಕ ಸ್ಪರ್ಧೆಯ ಲಾಭ: ಉತ್ತಮ ಶಿಕ್ಷಣ ಕೊಡಿಸುವ ಭರದಲ್ಲಿ ಕೇಳಿದಷ್ಟು ಹಣ ವ್ಯಯಿಸಿ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಸೇರಿಸುತ್ತಿದ್ದಾರೆ. ಇದರಿಂದ ಸಹಜವಾಗಿ ದೇಶದೆಲ್ಲೆಡೆ ಶೈಕ್ಷಣಿಕ ಸ್ಪರ್ಧೆ ಏರ್ಪಟ್ಟಿದೆ. ಇಂತಹ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿರುವ ಕೆಲ ಶಿಕ್ಷಣ ಸಂಸ್ಥೆಗಳು ಮಕ್ಕಳಿಂದ ಯಥೇಚ್ಛವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ ಬ್ಯಾಡಗಿಯ ವರ್ತಕರೆಲ್ಲರೂ ಸೇರಿ ಕಷ್ಟದಲ್ಲಿಯೇ ಹಣ ಸಂಗ್ರಹಿಸಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದಲ್ಲದೇ ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಅತೀ ಹೆಚ್ಚು ಉತ್ತುಂಗಕ್ಕೇರಿದ್ದು ಇದರ ಫಲವಾಗಿ ಇಂದು ಸಾವಿರಾರು ಮಕ್ಕಳು ನೂರಾರು ಶಿಕ್ಷಕರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾಗಿ ತಿಳಿಸಿದರು.ಸೌಲಭ್ಯಗಳನ್ನು ನೀಡುತ್ತಿದ್ದೇವೆ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಬ್ಯಾಡಗಿ ಪಟ್ಟಣವು ಅಕ್ಷರಶಃ ವ್ಯಾಪಾರೀ ಕೇಂದ್ರ ಆದರೆ ಜೊತೆಗೆ ಶೈಕ್ಷಣಿಕ ಸೌಲಭ್ಯಗಳಲ್ಲಿಯೂ ಉತ್ತಮ ಹೆಸರನ್ನು ಪಡೆದುಕೊಳ್ಳಬೇಕೆಂಬುದು ನಮ್ಮೆಲ್ಲರ ಆಶಯವಾಗಿತ್ತು, ಹೀಗಾಗಿಯೇ 1982ರಲ್ಲಿ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಆರಂಭಿಸಿದ್ದು ಸರ್ಕಾರದ ಯಾವುದೇ ಅನುದಾನ ಪಡೆಯದೇ ಸಂಸ್ಥೆಯನ್ನು ಬಹಳಷ್ಟು ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಬಂದಿದ್ದೇವೆ ಇದಕ್ಕೆ ಸಹಕರಿಸಿದ ನಮ್ಮೆಲ್ಲ ವ್ಯಾಪಾರೀ ಬಂಧುಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ಎನ್. ನಿಡಗುಂದಿ ಆಡಳಿತ ಮಂಡಳಿ ಸದಸ್ಯರಾದ ಜಿ.ಎಸ್, ಪಾಟೀಲ, ರಾಜು ಮೋರಿಗೇರಿ, ಸಿದ್ದನಗೌಡ ಪಾಟೀಲ, ಆನಂದ ಜೈನ್, ವಿ.ವಿ. ಹಿರೇಮಠ, ಬಾಲಚಂದ್ರ ಪಾಟೀಲ, ಭೀಮನಗೌಡ ಪಾಟೀಲ, ರಾಮಣ್ಣ ಕೋಡಿಹಳ್ಳಿ, ಮುನಾಫ್ ಎರೇಶೀಮಿ, ಬಸವರಾಜ ಸವಣೂರ, ಪ್ರಾಚಾರ್ಯ ಡಾ.ಎನ್.ಎಸ್. ಪ್ರಶಾಂತ, ಸಿಬ್ಬಂದಿಗಳಾದ ಡಾ. ಸುರೇಶಕುಮಾರ ಪಾಂಗಿ, ಪ್ರಭು ದೊಡ್ಮನಿ, ನಿವೃತ್ತ ಉಪನ್ಯಾಸಕ ಡಾ. ಪ್ರೇಮಾನಂದ ಲಕ್ಕಣ್ಣನವರ, ಎಂ.ಎಸ್, ಕಟಗಿಹಳ್ಳಿ, ಪಿ.ಎಂ. ರಾಮಗಿರಿ, ಕೆ.ಜಿ. ಖಂಡೇಬಾಗೂರ, ಎಸ್.ಎಲ್. ತೆಂಬದ, ಚನ್ನಮ್ಮ ಕೋರಿಶೆಟ್ಟರ ಸೇರಿದಂತೆ ಇನ್ನಿತರಿದ್ದರು..