ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ರಕ್ತದಾನ ಮಾಡುವುದರಿಂದ ಆರೋಗ್ಯ ಇನ್ನೂ ಹೆಚ್ಚಾಗುತ್ತದೆ, ಇಂದು ರಕ್ತದ ಅಗತ್ಯ ಹೆಚ್ಚಿರುವುದರಿಂದ ಯುವಜನತೆ ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.ಅವರು ಭಾನುವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾಸ್ಪತ್ರೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನದ ವಿಷಯದಲ್ಲಿ ಜನರಲ್ಲಿ ಆತಂಕಗಳಿವೆ. ಆದರೆ ರಕ್ತದಾನದಿಂದ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ. ರಕ್ತದಾನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠ ದಾನವಾಗಿದೆ. ರಕ್ತದಾನದಂತೆಯೇ ನಮ್ಮ ಕಾಲದ ನಂತರ ದೇಹದಾನ, ಕಣ್ಣು ಇತ್ಯಾದಿ ಅಂಗಾಂಗಗಳನ್ನು ದಾನ ಮಾಡುವುದರ ಸಮಾಜಕ್ಕೆ ವಿಶೇಷ ಸೇವೆ ಸಲ್ಲಿಸಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತಮ್ಮ ಹುಟ್ಟುಹಬ್ಬವನ್ನು ರಕ್ತದಾನ ಶಿಬಿರದ ಮೂಲಕ ವಿಶಿಷ್ಟವಾಗಿ ಆಚರಿಸಿರುವುದು ಇತರರಿಗೆ ಮಾದರಿ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ನಾಲ್ಕನೇ ವರ್ಷದ ರಕ್ತದಾನ ಇಂದು ನಡೆಯುತ್ತಿದೆ. ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಹಲವಾರು ಬಡ ರೋಗಿಗಳು ಆಗಮಿಸುತ್ತಿದ್ದು ಅಲ್ಲಿಯೂ ರಕ್ತದ ಕೊರತೆ ಇದ್ದು ಈ ಮೂಲಕ ಸಹಾಯ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ರಕ್ತದಾನ ಕಾರ್ಯಕ್ರಮದಲ್ಲಿ ಸುಮಾರು 148 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್, ನಾಯಕರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಎಂ. ಎ. ಗಫೂರ್, ವೆರೋನಿಕಾ ಕರ್ನೆಲಿಯೋ, ಜ್ಯೋತಿ ಹೆಬ್ಬಾರ್, ಚಂದ್ರಿಕಾ ಶೆಟ್ಟಿ, ಯತೀಶ್ ಕರ್ಕೆರಾ, ಗಣೇಶ್ ನೆರ್ಗೀ, ಮಹಾಬಲ ಕುಂದರ್, ಕೇಶವ ಕೋಟ್ಯಾನ್, ಫಾ. ವಿಲಿಯಂ ಮಾರ್ಟಿಸ್, ಅಣ್ಣಯ್ಯ ಶೇರಿಗಾರ್, ಭಾಸ್ಕರ್ ರಾವ್ ಕಿದಿಯೂರು, ಕೃಷ್ಣಮೂರ್ತಿ ಆಚಾರ್ಯ, ಕುಶಲ್ ಶೆಟ್ಟಿ ಇಂದ್ರಾಳಿ, ಸಂಧ್ಯಾ ತಿಲಕ್ರಾಜ್ ಹಾಗೂ ಇತರರು ಇದ್ದರು.