ಕನ್ನಡಪ್ರಭ ವಾರ್ತೆ ತುಮಕೂರು

ಕಬಡ್ಡಿ ಪಂದ್ಯವೊಂದರಲ್ಲಿ ಜಿಲ್ಲಾಧಿಕಾರಿ ಜೊತೆ ಬೆಟ್ಟಿಂಗ್ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದ್ದರೂ ಎಫ್ಐಆರ್ ದಾಖಲಿಸದ ಪೊಲೀಸರ ಕ್ರಮ ಖಂಡಿಸಿ ಮಧುಗಿರಿ ತಾಲೂಕು ಕೊಡಗೇನಹಳ್ಳಿ ಪೊಲೀಸ್ ಠಾಣೆ ಎದುರು ದೂರುದಾರ ಹಂದ್ರಾಳು ನಾಗಭೂಷಣ್ ಧರಣಿ ಕುಳಿತಿದ್ದಾರೆ.

ಕೋರ್ಟ್ ಆದೇಶದ ಪ್ರತಿ ತಂದರೂ ಕೂಡ ಕೊಡಗೇನಹಳ್ಳಿ ಪೊಲೀಸರು ದೂರು ದಾಖಲಿಸಿಕೊಳ್ಳದೇ ಇರುವುದನ್ನು ಖಂಡಿಸಿ ಪೊಲೀಸ್ ಠಾಣೆ ಎದುರು ದೂರುದಾರ ಹಂದ್ರಾಳು ನಾಗಭೂಷಣ್ ಧರಣಿ ಕುಳಿತಿದ್ದಾರೆ. ತಮಗಿನ್ನೂ ಕೋರ್ಟ್ ಆದೇಶದ ಪ್ರತಿ ಸಿಗದ ಕಾರಣ ಎಫ್ಐಆರ್ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ. ಕೋರ್ಟ್ ಆದೇಶದ ಪ್ರತಿ ಸಿಕ್ಕ ಕೂಡಲೇ ದೂರು ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ, ತಮ್ಮ ಬಳಿ ನ್ಯಾಯಾಲಯದ ಆದೇಶದ ಪ್ರತಿ ಇದ್ದು ಈಗಲೇ ಎಫ್ಐಆರ್ ದಾಖಲಿಸುವಂತೆ ಹಂದ್ರಾಳು ನಾಗಭೂಷಣ್ ಪಟ್ಟು ಹಿಡಿದಿದ್ದಾರೆ.

2025ರ ಅಕ್ಟೋಬರ್ 19ರಂದು ತುಮಕೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿ ವೇಳೆ ದಕ್ಷಿಣ ಕನ್ನಡ ಹಾಗೂ ವಿಜಯಪುರ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ದಕ್ಷಿಣ ಕನ್ನಡ ಗೆಲುವು ಸಾಧಿಸಲಿದೆ ಎಂಬುದಾಗಿ ಶುಭಾ ಕಲ್ಯಾಣ್ ಅವರೊಂದಿಗೆ ₹500 ಬೆಟ್ಟಿಂಗ್ ಕಟ್ಟಿದ್ದಾಗಿ ಗೃಹ ಸಚಿವ ಪರಮೇಶ್ವರ ಬಹಿರಂಗ ಹೇಳಿಕೆ ನೀಡಿದ್ದರು. ಈ ಹೇಳಿಕೆ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು. ಬೆಟ್ಟಿಂಗ್ ಆಡುವುದು ಕಾನೂನು ಬಾಹಿರವಾಗಿದ್ದರೂ ಸಚಿವರೇ ಇಂತಹ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆಂದು ಹಂದ್ರಾಳು ನಾಗಭೂಷಣ್ ಅವರು ಕೊಡಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳದ್ದರಿಂದ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈಗ ನ್ಯಾಯಾಲಯ ಎಫ್ಐಆರ್ ದಾಖಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಕೊಡಿಗೇನಹಳ್ಳಿ ಠಾಣೆಗೆ ಬಂದು ದೂರು ದಾಖಲಿಸುವಂತೆ ಧರಣಿ ಕುಳಿತಿದ್ದಾರೆ.