ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಂದು ರಾಜಕೀಯದ ಲಾಭಕ್ಕಾಗಿ ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕಾರ್ಯ ಮಾಡಲಾಗುತ್ತಿದೆ. ಇಂತಹವರ ಬಗ್ಗೆ ಸಮಾಜ ಬಾಂಧವರು ಎಚ್ಚರದಿಂದಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಸೋಮವಾರ ರಾತ್ರಿ ತಾಲೂಕಿನ ಪಾಳೆ ಬಳಿಯ ಹಜರತ್ ಬಾದಶಾ ಪೀರ್ ದರ್ಗಾದ ಆವರಣದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮಾತನಾಡಿದರು.
ರಾಜಕಾರಣ ಮಾಡುವ ಉದ್ದೇಶದಿಂದ ಜಾತಿ, ಧರ್ಮದ ನಡುವ ಸಂಘರ್ಷ ತರುತ್ತಾರೆ. ಇದರಿಂದ ತಾತ್ಕಾಲಿಕ ಜಯ ಸಿಗಬಹುದು. ಆದರೆ, ಅದು ಶಾಶ್ವತವಲ್ಲ. ಬಸವಾದಿ ಶರಣರು, ಬುದ್ಧ ಹಾಗೂ ಮೊಹಮ್ಮದ್ ಪೈಗಂಬರ ಅವರು ಜಾತಿ, ವರ್ಗ ರಹಿತ ಸಮಾಜದ ಕನಸನ್ನು ಕಂಡವರು. ಅವರ ತತ್ವವನ್ನು ನಾವೆಲ್ಲ ಮುಂದುವರಿಸಬೇಕು ಎಂದರು.ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಎಲ್ಲ ಧರ್ಮದವರು ಸಹೋದರರಂತೆ ಜೀವನ ನಡೆಸುತ್ತಿದ್ದೇವೆ. ನಮ್ಮದು ವೈವಿಧ್ಯತೆಯಲ್ಲಿ ಏಕತೆ ಕಾಣುವ ನಾಡು. ಯಾರೇ ಆಗಲಿ ಹುಟ್ಟುವಾಗ ಇದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಹುಟ್ಟಿದ ಮೇಲೆ ಅವರದೇ ಆದ ಧರ್ಮದ ಅಡಿ ಇನ್ನೊಬ್ಬರಿಗೆ ತೊಂದರೆ ನೀಡದೇ ಸಹೋದರತ್ವದಡಿ ಬಾಳಬೇಕು. ಅಂದಾಗ ಮಾತ್ರ ಮಾನವ ಜನ್ಮ ಸಾರ್ಥಕತೆ ಪಡೆದುಕೊಳ್ಳುವುದು ಎಂದರು.
ಮುಸ್ಲಿಂರ ರಕ್ಷಣೆಗೆ ಬದ್ಧ:ಮುಸ್ಲಿಂ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ. ನಿಮ್ಮ ರಕ್ಷಣೆಗೆ ನಮ್ಮ ಸರ್ಕಾರವಿದೆ. ನಮ್ಮ ಸರ್ಕಾರದಲ್ಲಿ ಮೇಲು-ಕೀಳು ಎಂಬ ಭೇದವಿಲ್ಲ. ನಾವು ಅಧಿಕಾರದಲ್ಲಿ ಇರುವ ವರೆಗೆ ಸಮಾಜದಲ್ಲಿ ಸೌಹಾರ್ದ ಉಂಟು ಮಾಡುವ ಕೆಲಸ ಮಾಡುತ್ತೇವೆ ಎಂದರು.
ಸಮಾಜದಲ್ಲಿ ಸಾಮರಸ್ಯ, ಸೌಹಾರ್ದ ಉಂಟುವಾಡುವ ಉದ್ದೇಶದಿಂದ ಈ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸುಮಾರು 200ಕ್ಕೂ ಹೆಚ್ಚು ಧರ್ಮ ಗುರುಗಳು ಭಾಗವಹಿಸಿದ್ದಾರೆ. ಬಹುತ್ವದ ದೇಶ ಭಾರತದಲ್ಲಿ ಅನೇಕ ಧರ್ಮ, ಜಾತಿ, ಭಾಷೆಗಳಿವೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರು ಕೊಟ್ಟ ಸಂವಿಧಾನದಲ್ಲಿ ಧರ್ಮ ಪಾಲನೆ ಸ್ವತಂತ್ರ ಎಂದು ತಿಳಿಸಿದ್ದಾರೆ.ಎಲ್ಲ ಧರ್ಮಗಳೂ ಮನುಷತ್ವವನ್ನೇ ಬೋಧಿಸುತ್ತವೆ. ನಮ್ಮ ಸಮಾಜದಲ್ಲಿ ವೈವಿಧ್ಯತೆ ಇದೆ. ಆದರೆ, ಏಕತೆ ಕಾಣುವ ಅವಶ್ಯಕತೆ ಇದೆ ಎಂದರು.
ಸೂಫಿ ಸಂತರಾದ ಹಜರತ್ ಬಾದಶಾ ಪೀರಾ ಅವರು ತಮ್ಮ ಜೀವಿತಾವಧಿಯ ವರೆಗೆ ಧರ್ಮ-ಧರ್ಮಗಳ ನಡುವೆ ಸಾಮರಸ್ಯ ಉಂಟುಮಾಡುವ ಕೆಲಸ ಮಾಡಿದ್ದಾರೆ. ಅವರ ನಂತರ ಅವರ ಪುತ್ರರಾದ ಸಯ್ಯದ್ ತಾಜುದ್ದೀನ್ ಖಾದ್ರಿ ಅವರು ಈ ಪರಂಪರೆಯನ್ನು ಮುಂದುವರಿಸಿದ್ದಾರೆ. ಧರ್ಮಕ್ಕೆ ಕಟ್ಟುಬೀಳದೇ ಮನುಷ್ಯತ್ವದಿಂದ ಬಾಳಬೇಕು ಎಂದರು.ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪೀಸ್ ಫಾರ್ ನೇಷನ್ ಧ್ಯೇಯ ವಾಕ್ಯದೊಂದಿಗೆ ಈ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದ ಮಕ್ಕಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವ ಸದುದ್ದೇಶ ಹೊಂದಲಾಗಿದೆ. ಕೋಮುವಾದಿ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೆಲ್ಲ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮದ ವಿಚಾರದಲ್ಲಿ ದೇಶ ಛಿದ್ರವಾಗುತ್ತಿದೆ. ಹೀಗಾಗಿ ದೇಶದಲ್ಲಿ ಶಾಂತಿ, ಸಮಾನತೆ, ಶೈಕ್ಷಣಿಕ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಂತ್ರಿಮಂಡಲದ ಕೆಲ ಸದಸ್ಯರೊಂದಿಗೆ ಹಜರತ್ ಬಾದಶಾ ಪೀರಾ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಶಾಸಕರಾದ ಶ್ರೀನಿವಾಸ ಮಾನೆ, ಎನ್.ಎಚ್. ಕೋನರಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ, ಮಾಜಿ ಸಂಸದ ಐ.ಜಿ. ಸನದಿ, ಎ.ಎಂ. ಹಿಂಡಸಗೇರಿ, ಸ್ಯಯ್ಯದ ತಾಜುದ್ದೀನ್ ಪೀರ್ ಖಾದ್ರಿ, ಕಲಬುರ್ಗಿಯ ಖಾಜಾ ಬಂದೇ ನವಾಜ್ ದರ್ಗಾದ ಡಾ. ಸಯ್ಯದ ಖುಶ್ರುಹುಸೇನಿ ಸಾಹೇಬ ಖಿಬ್ಲಾ ಸೇರಿದಂತೆ 200ಕ್ಕೂ ಹೆಚ್ಚು ಧರ್ಮಗುರುಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಮುಸ್ಲಿಂ ಸಮುದಾಯದಿಂದ ಸಿಎಂಗೆ ಮನವಿ:ಬಾದಶಾ ಪೀರಾ ದರ್ಗಾ ಅಭಿವೃದ್ಧಿಗೆ ಅನುದಾನ ನೀಡುವಂತೆ ಮುಸ್ಲಿಂ ಸಮುದಾಯದ ಮುಖಂಡರು ವೇದಿಕೆಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಮುಂದಿನ ವರ್ಷ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಆಗ ವೇದಿಕೆಯ ಮೇಲೆ ಕುಳಿತಿದ್ದ ಶಾಸಕ ಪ್ರಸಾದ ಅಬ್ಬಯ್ಯ ₹5 ಕೋಟಿ ಅನುದಾನ ನೀಡಿ ಎಂದು ಕೈ ಸನ್ನೆಯ ಮೂಲಕ ತೋರಿಸಿದರು. ಇದಕ್ಕೆ ತಕ್ಷಣ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಐದಲ್ಲಪ್ಪ ಹೆಚ್ಚೇ ಕೊಡ್ತೀನಿ. ಈಗಾಗಲೇ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹4 ಸಾವಿರ ಕೋಟಿ ಮೀಸಲಿಡಲಾಗಿದೆ. ಮುಂಬರುವ ದಿನದಲ್ಲಿ ಅದನ್ನು ₹10 ಸಾವಿರ ಕೋಟಿಗೆ ಏರಿಸುವ ಯೋಜನೆ ಇದೆ ಎಂದರು.