ಕನ್ನಡಪ್ರಭ ವಾರ್ತೆ ಭದ್ರಾವತಿ
ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ಕೇಂದ್ರ ಸರ್ಕಾರದ ಯೋಜನೆ ವಿಬಿ-ಜಿ ರಾಮ್ ಜಿ ಕುರಿತು ಜಾಗೃತಿ ಸಭೆ ತಾಲೂಕಿನ ಹಿರಿಯೂರು ಮಹಾ ಶಕ್ತಿ ಕೇಂದ್ರದ ಅಂತರಗಂಗೆ ಮತ್ತು ಎರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಎಚ್ ನಗರದಲ್ಲಿ ಆಯೋಜಿಸಲಾಗಿತ್ತು.ಸಭೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ ಹರಿಕೃಷ್ಣ ಮಾತನಾಡಿ, ಗಾಂಧೀಜಿಯವರ ಗ್ರಾಮಾಭ್ಯುದ್ಯಯದ ಕನಸನ್ನು ನನಸು ಮಾಡಲು ಈ ಯೋಜನೆಯು ಸಹಕಾರಿಯಾಗಿದೆ. ಈ ಮೊದಲು ಗ್ರಾಮದ ಕಾಮಗಾರಿಯನ್ನು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿಯಲ್ಲಿ ನಿರ್ಧರಿಸಲಾಗುತ್ತಿತ್ತು. ಆದರೆ ಈಗ ನಮ್ಮೂರಿನ ಕೆಲಸವನ್ನು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ನಾವೇ ಗ್ರಾಮ ಪಂಚಾಯಿತಿಯಲ್ಲಿ ನಿರ್ಧರಿಸುವ ಅಧಿಕಾರವನ್ನು ನೀಡಲಾಗಿದೆ. ಮೊದಲು ೧೦೦ ದಿನ ಇದ್ದಂತಹ ಕೆಲಸ ಈಗ ೧೨೫ ದಿನಗಳಿಗೆ ವಿಸ್ತರಿಸಲಾಗಿದೆ ಎಂದರು.
ಕುಲಕಸುಬಿಗೂ ಈ ಯೋಜನೆಯಡಿ ಅವಕಾಶ ಮಾಡಿಕೊಡಲಾಗಿದೆ. ಅತಿ ಮುಖ್ಯವಾಗಿ ಗ್ರಾಮದ ಪ್ರಗತಿ ಮಾನದಂಡವಾಗಿ ಪರಿಗಣಿಸಲಾಗುವುದು. ಮೂಲಭೂತ ಸೌಕರ್ಯಗಳನ್ನು ಅತ್ಯಂತ ಸುಸಜ್ಜಿತವಾಗಿ ನೀಡುವಲ್ಲಿ ಮಹತ್ವಪೂರ್ಣವಾಗಿದೆ ಎಂದರು.ನ್ಯಾಯವಾದಿ ಕೆ.ಎನ್ ಶ್ರೀಹರ್ಷ ಮಾತನಾಡಿ, ವಿಬಿ-ಜಿ ರಾಮ್ ಜಿ ಶ್ರಮಿಕರಿಗೆ ವೈಯಕ್ತಿಕ ಲಾಭದ ಜೊತೆಗೆ ಅನೇಕ ಸವಲತ್ತುಗಳಿವೆ. ಅದರ ಮೂಲಕ ಗ್ರಾಮಕ್ಕೆ ಕೊಡುಗೆ ನೀಡಬಹುದು, ಇದರಿಂದ ಗ್ರಾಮದ ಅಭಿವೃದ್ಧಿ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಸಮುದಾಯವನ್ನು ಸಬಲೀಕರಣಗೊಳಿಸಬಹುದು. ಈ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ವಹಿಸುತ್ತಿದೆ. ಡಿಜಿಟಲೀಕರಣದಿಂದ ಶ್ರಮಿಕರಿಗೆ ನೇರವಾಗಿ ಖಾತೆಗೆ ಹಣ ದೊರಕುವಂತೆ ಪಾರದರ್ಶಕ ಕ್ರಮವನ್ನು ಕೈಗೊಂಡು ಶ್ರಮಿಕರು ಮೋಸ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ವಿರೋಧಿಸುತ್ತಿದೆ. ಶ್ರಮಿಕರಿಗೆ ಇದರಿಂದ ಯಾವುದೇ ಅನಾನುಕೂಲಗಳು ಇಲ್ಲ ಎಂಬುದಾಗಿ ಮಾಹಿತಿಯನ್ನು ನೀಡಿದರು.
ಸಭೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸರಸ್ವತಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೊಸರಹಳ್ಳಿ ಅಣ್ಣಪ್ಪ ಮತ್ತು ಹನುಮಂತನಾಯ್ಕ, ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಹರೀಶ್, ಹಿರಿಯರಾದ ಶಾಂತಣ್ಣ, ಧೀರೇಂದ್ರ ಗೌಡ್ರು, ದಿವ್ಯದರ್ಶ, ಆರ್. ದೀಪಕ್, ರಾಕೇಶ್, ಜೆ.ಬಿ ರುದ್ರೇಶ್, ಕಾರ್ಯದರ್ಶಿಗಳಾದ ಜೆ. ಮಂಜುನಾಥ ಹಾಗೂ ಸುರೇಂದ್ರನಾಯ್ಕ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ, ಹುತ್ತ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್, ಪ್ರಮುಖರಾದ ತೀರ್ಥಪ್ಪ ತಳ್ಳಿಕಟ್ಟೆ , ಭರತ್, ಧನಂಜಯ, ಧನ್ಯ, ಪ್ರಜ್ವಲ್, ಮಂಜುನಾಥ್, ಜೈಕುಮಾರ್, ಬಾರಂದೂರು ಸೋಮಣ್ಣ, ಮತ್ತು ಮಲ್ಲಿಕಾರ್ಜುನ್, ಮೂರ್ತಿ, ಕುಮಾರ್, ತ್ರಿಮೂರ್ತಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.