ಸಾರಾಂಶ
ಅನಂತಕುಮಾರ್
ಕನ್ನಡಪ್ರಭ ವಾರ್ತೆ ಭದ್ರಾವತಿನಗರದ ಕಡದಕಟ್ಟೆ ಬಳಿ ಪ್ರಗತಿಯಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಸುಮಾರು 2 ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ. ಇದರಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಇನ್ನೂ 1 ವರ್ಷ ಕಳೆದರೂ ಕಾಮಗಾರಿ ಮುಕ್ತಾಯಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ.
ಒಂದೆಡೆ ನಗರ ಪ್ರದೇಶದ ಹೊರಭಾಗದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ನಗರದ ಹೃದಯ ಭಾಗದಲ್ಲೂ ರಸ್ತೆ ಕಾಮಗಾರಿಗಳು ಮುಕ್ತಾಯಗೊಳ್ಳುವ ಹಂತಕ್ಕೆ ತಲುಪಿವೆ. ಈ ನಡುವೆ ಕಡದಕಟ್ಟೆ ಬಿ.ಎಚ್. ರಸ್ತೆಯಲ್ಲಿ ಸೌತ್ ವೆಸ್ಟರನ್ ರೈಲ್ವೆ, ಮೈಸೂರು ವ್ಯಾಪ್ತಿಗೆ ಒಳಪಡುವ ಎಲ್.ಸಿ ನಂ.34ರಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕಳೆದ 2 ವರ್ಷಗಳಿಂದ ನಡೆಯುತ್ತಿರುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ.ಶಿವಮೊಗ್ಗ- ಭದ್ರಾವತಿ ನಡುವೆ ಪ್ರಯಾಣಿಸುವವರು ಮುಖ್ಯ ಬಸ್ ನಿಲ್ದಾಣಕ್ಕೆ ನಗರದ ಹೊರವಲಯವನ್ನು ಸುತ್ತಿಕೊಂಡು ಬರಬೇಕಾಗಿದೆ. ಇದರಿಂದಾಗಿ ಸಮಯ ವ್ಯರ್ಥವಾಗುವ ಜೊತೆಗೆ ಸರ್ಕಾರಿ ಬಸ್ಗಳು ಹೆಚ್ಚುವರಿಯಾಗಿ ಇಂಧನ ವ್ಯಯಿಸುವಂತಾಗಿದೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ನಗರಸಭೆ ವ್ಯಾಪ್ತಿಯ ಭಂಡಾರಹಳ್ಳಿ, ಹೆಬ್ಬಂಡಿ, ಕವಲಗುಂದಿ ಪ್ರದೇಶದ ನಿವಾಸಿಗಳು ಕಳೆದ 2 ವರ್ಷಗಳಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ರಸ್ತೆಯಲ್ಲಿನ ಅಂಗಡಿ -ಮುಂಗಟ್ಟುಗಳ ವ್ಯಾಪಾರಸ್ಥರು, ವರ್ತಕರ ಸ್ಥಿತಿ ಹೇಳತೀರದು. ವ್ಯಾಪಾರ ವಹಿವಾಟು ಇಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ಸಮೀಪದಲ್ಲಿನ ನಿವಾಸಿಗಳು ಸಹ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಈ ವ್ಯಾಪ್ತಿ ಸದಾ ಧೂಳಿನಿಂದ ಕೂಡಿದ್ದು, ಮನೆಗಳ ಒಳಗೆ ಧೂಳು ಪ್ರವೇಶಿಸುತ್ತಿದೆ. ಇದರಿಂದಾಗಿ ಸಾಕಷ್ಟು ನಿವಾಸಿಗಳು ಉಸಿರಾಟದ ತೊಂದರೆಗಳಿಗೆ ಒಳಗಾಗುವಂತಾಗಿದೆ. ಈ ವ್ಯಾಪ್ತಿಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ರೈತರ ವ್ಯಯಸಾಯೋತ್ಪನ್ನ ಸಹಕಾರ ಸಂಘ, ಕಲ್ಯಾಣ ಮಂಟಪ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿದ್ದು, ಸಂಚಾರ ವ್ಯವಸ್ಥೆ ಕಡಿತಗೊಂಡಿರುವುದರಿಂದ ವಿದ್ಯಾರ್ಥಿಗಳು ಸಹ ಸಂಕಷ್ಟಕ್ಕೆ ಒಳಗಾಗಿದ್ದಾರೆ.ರೈಲ್ವೆ ನಿಲ್ದಾಣದಲ್ಲಿ ಹಲವು ಕಾಮಗಾರಿಗಳು ಬಾಕಿ: ನಗರದ ರೈಲ್ವೆ ನಿಲ್ದಾಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಬಾಕಿ ಉಳಿದಿವೆ. ರೈಲು ನಿಲುಗಡೆ ಸ್ಥಳದಲ್ಲಿ ಸಂಪೂರ್ಣವಾಗಿ ಮೇಲ್ಛಾವಣಿ ನಿರ್ಮಾಣ, ಲಿಫ್ಟ್ ಅಳವಡಿಕೆ, ನಿಲ್ದಾಣದ ಹೊರಭಾಗದಲ್ಲಿ ವಾಹನಗಳ ನಿಲುಗಡೆ ಸ್ಥಳ ಅಭಿವೃದ್ಧಿ. ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವುದು. ಭವಿಷ್ಯದ ಅಭಿವೃದ್ಧಿಗೆ ಪೂರಕವಾಗುಂತೆ ನಿಲ್ದಾಣವನ್ನು ರೂಪುಗೊಳಿಸಬೇಕಾಗಿದೆ.
- - - ಬಾಕ್ಸ್-1 ಹೈದರಾಬಾದ್ ಕಂಪನಿಯಿಂದ ಕಾಮಗಾರಿರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಮೆ. ಎಸ್ಆರ್ಸಿ ಕಂಪನಿ ಇನ್ಫ್ರಾ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್ ಕಳೆದ 2 ವರ್ಷಗಳಿಂದ ಕೈಗೊಳ್ಳುತ್ತಿದೆ. ಆರಂಭದಲ್ಲಿ ಚುರುಕುಗೊಂಡ ಕಾಮಗಾರಿ ನಂತರ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಹಿಂದೆ ನಗರದ ತರೀಕೆರೆ ರಸ್ತೆಯಲ್ಲಿ ನಿರ್ಮಿಸಲಾಗಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬಗೊಳ್ಳುವ ಜೊತೆಗೆ ಕಳಪೆಯಿಂದ ಕೂಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
- - - ಬಾಕ್ಸ್-2ಸಂಸದರಿಂದ ಎರಡ್ಮೂರು ಬಾರಿ ಪರಿಶೀಲನೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಲವು ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಅವರು ರೈಲ್ವೆ ಇಲಾಖೆ ಎಂಜಿನಿಯರ್, ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಎರಡ್ಮೂರು ಬಾರಿ ಖುದ್ದಾಗಿ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಪ್ರತಿ ಬಾರಿ ಸಹ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೇ, ಯಾರಿಗೂ ತೊಂದರೆ ಆಗದಂತೆ ಎಚ್ಚರ ವಹಿಸುವ ಮೂಲಕ ತ್ವರಿತಗತಿಯಲ್ಲಿ ಮುಕ್ತಾಯಗೊಳಿಸುವಂತೆ ಕೋರಿದ್ದಾರೆ.- - - ಕೋಟ್ ರೈಲ್ವೆ ಕಾಮಗಾರಿ ಆರಂಭ ಆದಾಗಿನಿಂದಲೂ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಕುಸಿದಿದೆ. ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಕಾಮಗಾರಿ ತುಂಬಾ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಯಾವಾಗ ಮುಕ್ತಾಯ ಆಗುತ್ತದೆಯೋ ಗೊತ್ತಿಲ್ಲ. ಈಗಾಗಲೇ ನಗರದ ಬೇರೆ ಸ್ಥಳಕ್ಕೆ ವ್ಯಾಪಾರ ವಹಿವಾಟು ಸ್ಥಳಾಂತರಿಸಿಕೊಂಡು ಜೀವನ ನಿರ್ವಹಿಸಲಾಗುತ್ತಿದೆ. ನಗರಕ್ಕೆ ತೆರಳಲು ಸುಮಾರು 1ರಿಂದ. 1.5 ಕಿ.ಮೀ ದೂರು ನಡೆದುಕೊಂಡು ಹೋಗಬೇಕಾಗಿದೆ. ಕಾಮಗಾರಿ ವಿಳಂಬ ಕುರಿತು ಪ್ರಶ್ನಿಸುವವರು ಯಾರು ಇಲ್ಲದಂತಾಗಿದೆ
- ಉಮೇಶ್, ವ್ಯಾಪಾರಸ್ಥ, ಕಡದಕಟ್ಟೆ, ಭದ್ರಾವತಿ- - - -ಡಿ12ಬಿಡಿವಿಟಿ2, 2(ಎ):
ಭದ್ರಾವತಿ ಕಡದಕಟ್ಟೆ ಬಳಿ ಪ್ರಗತಿಯಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ.