ಭಗವದ್ಗೀತೆ ಸರ್ವ ಕಾಲಕ್ಕೂ ಪ್ರಸ್ತುತ: ಪ್ರಕಾಶ ರಜಪೂತ

| Published : Aug 27 2024, 01:35 AM IST

ಸಾರಾಂಶ

ಕಾರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಪುಷ್ಪಾರ್ಚನೆ ಮಾಡಿದರು.

ಕಾರವಾರ: ಶ್ರೀಕೃಷ್ಣನ ಬೋಧನೆಯ ಭಗವದ್ಗೀತೆಯಲ್ಲಿ ಮಾನವವ ಮನಸ್ಸಿನಲ್ಲಿನ ಹಾಗೂ ಸಮಾಜದಲ್ಲಿನ ಹಲವು ಸಮಸ್ಯೆ ಮತ್ತು ತೊಳಲಾಟಗಳಿಗೆ ಸೂಕ್ತ ಪರಿಹಾರವಿದ್ದು, ಭಗವದ್ಗೀತೆಯ ಸಂದೇಶಗಳು ಇಡೀ ಜಗತ್ತಿಗೆ ಸರ್ವಕಾಲಕ್ಕೂ ಪ್ರಸ್ತುತವಾಗುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.

ಅವರು ಸೋಮವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಮಹಾಭಾರತದ ಸಂದರ್ಭದಲ್ಲಿ ಧರ್ಮ ರಕ್ಷಣೆಯ ಉದ್ದೇಶದಿಂದ, ಧರ್ಮದ ಗೆಲುವಿಗಾಗಿ ಪಾಂಡವರ ಪರವಾಗಿ ನಿಂತ ಶ್ರೀಕೃಷ್ಣ, ಯುದ್ಧಭೂಮಿಯಲ್ಲಿ ಅರ್ಜುನನ ಮನಸ್ಸಿನ ತೊಳಲಾಟವನ್ನು ದೂರ ಮಾಡಲು ಬೋಧಿಸಿದ ಭಗವದ್ಗೀತೆಯು ಮಾನವ ಸಮಾಜ ಮತ್ತು ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಅತ್ಯಂತ ಸಮರ್ಥವಾಗಿ ನೀಡಿದ್ದು, ಆ ಸಂದೇಶಗಳು ಎಲ್ಲ ಕಾಲದಲ್ಲೂ ಎಲ್ಲ ಸಂದರ್ಭದಲ್ಲೂ ಪ್ರಸ್ತುತವಾಗುತ್ತವೆ ಎಂದರು.

ಮಾನವ ಜೀವನದಲ್ಲಿ ದುಃಖ, ಸಂತೋಷಗಳು ದಿನನಿತ್ಯ ಹಾದುಹೋಗುತ್ತವೆ. ಸಮಯವು ಕಳೆದು ಹೋಗುತ್ತದೆ, ಜೀವನದಲ್ಲಿ ಯಾವುದೂ ಶಾಶ್ವತವಲ್ಲವೆಂದು ತಿಳಿದು ದುಃಖ ಮತ್ತು ಸಂತೋಷವನ್ನು ಸಮಪಾಲಾಗಿ ಸ್ವೀಕರಿಸಬೇಕು. ಇತರರ ಏಳಿಗೆಗೆ ನೋಡಿ ಕೇಡನ್ನು ಬಯಸದೇ, ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಅಳಡಿಸಿಕೊಂಡು ಜೀವಿಸಿದಾಗ ಆತ್ಮತೃಪ್ತಿ ದೊರೆಯುತ್ತದೆ ಎಂದರು.

ಇಸ್ಕಾನ್ ದೇವಾಲಯದ ದಾಮೋದರ್ ನೀಲದಾಸ್ ಶ್ರೀಕೃಷ್ಣನ ಕುರಿತು ಉಪನ್ಯಾಸ ನೀಡಿ, ಶ್ರೀಕೃಷ್ಣ ಪ್ರಸಿದ್ಧಿಯಾಗಿರುವುದು ಭಗವದ್ಗೀತೆಯಿಂದ. ಇದರಲ್ಲಿ ಜಗತ್ತಿಗೆ ಉತ್ತಮ ಸಂದೇಶಗಳನ್ನು ನೀಡಿದ್ದು, ಶ್ರೀ ಕೃಷ್ಣನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು, ಕೃಷ್ಣನನ್ನು ನೆನೆದಾಗ ಬದುಕಿನ ಕಷ್ಟಗಳೆಲ್ಲವೂ ಮಾಯವಾಗುತ್ತವೆ. ಶ್ರೀ ಕೃಷ್ಣನು ಮಾನವರಿಗೆ ಉತ್ತಮ ಜೀವನ ಸಂದೇಶ ನೀಡಿದ್ದಾನೆ ಎಂದು ತಿಳಿಸಿದರು.

ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ. ನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತಿತರರು ಇದ್ದರು.

ಇಸ್ಕಾನ್‌ ದೇವಾಲಯ ದಾಮೋದರ್ ನೀಲದಾಸ್ ಸಂಗಡಿಗರಿಂದ ಭಜನೆ ಕಾರ್ಯಕ್ರಮ ನಡೆಯಿತು.