ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಭಗೀರಥ ಮಹರ್ಷಿಗಳು ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತಂದ ಮಹಾಪುರುಷರು. ಅವರ ಸಾಧನೆ, ಛಲ ಎಲ್ಲರಿಗೂ ಆದರ್ಶ. ಭಗೀರಥ ಮಹರ್ಷಿಗಳ ಜೀವನಗಾಥೆಯನ್ನು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿ ತೆಗೆದುಕೊಂಡು, ತಮ್ಮ ಜೀವನದಲ್ಲಿ ಅವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಟಿ.ಬಿ ಜಯಚಂದ್ರ ಹೇಳಿದರು. ಅವರು ಶಿರಾ ತಾಲೂಕು ಭಗೀರಥ ಉಪ್ಪಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶ್ರೀ ಭಗೀರಥ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸರಕಾರಿ ನೌಕರರು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನನ್ನ ಅವಧಿಯಲ್ಲಿ ಸುಮಾರು ೧೩ ಸಮುದಾಯಗಳಿಗೆ ಸಮುದಾಯದ ಭವನಕ್ಕೆ ನಿವೇಶನ ನೀಡಿದ್ದೇನೆ. ಅದೇ ರೀತಿ ಉಪ್ಪಾರ ಸಮುದಾಯಕ್ಕೂ ನಿವೇಶನ ನೀಡಿದ್ದೇನೆ. ಶಿರಾ ನಗರದಲ್ಲಿ ಉಪ್ಪಾರ ಸಮುದಾಯ ಭವನಕ್ಕೆ ೧ ಕೋಟಿ ರು. ಅನುದಾನ ನೀಡುತ್ತೇನೆ ಹಾಗೂ ಸಮುದಾಯದ ಅಭಿವೃದ್ಧಿಗೆ ಸರಕಾರದಿಂದ ಸಿಗಬಹುದಾದ ಎಲ್ಲಾ ರೀತಿಯ ಸಹಾಯ ಒದಗಿಸುತ್ತೇನೆ. ಉಪ್ಪಾರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು. ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದರು. ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯ ಸಿಂಹಾಸನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿಗಳು ಮಾತನಾಡಿ, ಸತತ ಪ್ರಯತ್ನ ಹಾಗೂ ಸಾಧನೆಯ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಭಗೀರಥ ಮಹರ್ಷಿಗಳು ಆದರ್ಶವಾಗಿದ್ದಾರೆ. ಎಲ್ಲರೂ ಭಗೀರಥ ಮಹರ್ಷಿಗಳ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮಕ್ಕೂ ಮುನ್ನಾ ನಗರದ ಅಂಬೇಡ್ಕರ್ ಸರ್ಕಲ್ನಿಂದ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಭಗಿರಥ ಮಹರ್ಷಿರವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಂತರ ನಗರದ ಉಪ್ಪಾರ ಸಂಘದ ನಿವೇಶನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸರಕಾರಿ ನೌಕರರು ಮತ್ತು ಸಾಧಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಆರ್.ಗೌಡ, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ಕುಮಾರ್, ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್.ಉಗ್ರೇಶ್, ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಎಸ್.ಡಿ.ಪಾಂಡುರಂಗ, ಹೃದಯರೋಗ ತಜ್ಞ ಡಾ.ರಾಘವೇಂದ್ರ, ದಲಿತ ಮುಖಂಡ ಜೆ.ಎನ್.ರಾಜಸಿಂಹ, ಪೌರಾಯುಕ್ತ ರುದ್ರೇಶ್.ಕೆ, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ನಾಗಣ್ಣ, ತಾ.ಪಂ. ನಗೇಗಾ ಎಡಿ ಕನಕಪ್ಪ ಹನುಮಪ್ಪ ಮೇಲಸಕ್ರಿ, ಮುಖಂಡ ರಾಮಚಂದ್ರಪ್ಪ, ಕಲ್ಲೇಶ, ಚಿಕ್ಕಣ್ಣ, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.