ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಶಿಕ್ಷಣ ಮಕ್ಕಳ ಬದುಕಿನ ಹಕ್ಕಾಗಬೇಕು ಎಂದು ಎಲ್ಲೆಡೆ ಉಚಿತವಾಗಿ ಶಾಲೆ ಆರಂಭಿಸಿದವರು ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳು ಎಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಜೆ.ಎನ್. ರಾಮಕೃಷ್ಣೇಗೌಡ ಹೇಳಿದರು.ಹೋಬಳಿಯ ಆನೆಗೊಳ ಗ್ರಾಮದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ 11ನೇ ಪುಣ್ಯ ಸಂಸ್ಮರಣೋತ್ಸವ ಹಾಗೂ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ಈ ದೂರದೃಷ್ಟಿಯಿಂದ ಶ್ರೀಮಠದಿಂದ ಹಳ್ಳಿಗಳಲ್ಲಿ ಶಾಲೆ, ಕಾಲೇಜುಗಳನ್ನು ಆರಂಭಿಸಲಾಯಿತು. ವಸತಿ, ಶಿಕ್ಷಣ, ಆರೋಗ್ಯ, ಅನ್ನದಾಸೋಹದ ಪರಿಕಲ್ಪನೆಯ ಮಠದ ಆಶಯಕ್ಕೆ ಸಹಕರಿಸಬೇಕು ಎಂದರು.ಮಕ್ಕಳ ಸೂಪ್ತ ಕೌಶಲ್ಯತೆಯನ್ನು ಟಿವಿ, ಮೊಬೈಲ್ ಕಸಿಯುತ್ತಿದೆ. ಕನ್ನಡ ಶಾಲೆ ಉಳಿದರೆ ಧಮನಿತ ವರ್ಗ ಮಕ್ಕಳಿಗೆ ಶಿಕ್ಷಣ ಸಿಗಲಿದೆ. ಮಕ್ಕಳ ಶಿಕ್ಷಣಕ್ಕೆ ಭೈರವೈಕ್ಯರ ಆಶೀರ್ವಾದವಿದೆ. ಮಕ್ಕಳಲ್ಲಿ ಸಂಸ್ಕಾರ, ಸನ್ನಡತೆಗಾಗಿ ಪೋಷಕರು ಟಿವಿ, ಮೊಬೈಲ್ನಿಂದ ದೂರವಿರಿಸಬೇಕು. ಪುಸ್ತಕ ಪರಂಪರೆ, ಪತ್ರಿಕೆ ಓದುವ ಹವ್ಯಾಸ ಮೂಡಿಸಬೇಕಿದೆ ಎಂದರು.
ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಕನ್ನಡ ಭಾಷೆ ಜೊತೆ ಆಂಗ್ಲ ಭಾಷೆ ಅಗತ್ಯವಿದೆ. ಎಲ್ಲೆಡೆ ಶಾಲೆಗಳು ಹೆಚ್ಚಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಮಕ್ಕಳು ತಂದೆ, ತಾಯಿ, ಗುರುಗಳನ್ನು ಗೌರವಿಸುವಂತಾಗಬೇಕು ಎಂದರು.ಆರ್ಟಿಒ ನೌಕರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಮಠಮಾನ್ಯಗಳ ಪರಿಕಲ್ಪನೆಯ ಗುರುಕುಲ ಶಿಕ್ಷಣ ಅವಶ್ಯವಿದೆ. ಹೈಟೆಕ್, ಖಾಸಗಿ ಶಾಲಾ ವಾಹನ ಆರ್ಭಟಕ್ಕೆ ಪೋಷಕರು ಮುಗಿಬೀಳುವಂತಹ ಸನ್ನಿವೇಶ ಶೈಕ್ಷಣಿಕ ಪ್ರಗತಿಗೆ ಧಕ್ಕೆ ತರುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.
ಸಂಸ್ಥೆಯ ಡೈರಿ, ಕ್ಯಾಲೆಂಡರ್, ಮಕ್ಕಳ ಚಿಣ್ಣರ ಜಾಣರ ಸಿರಿ, ಚಿಣ್ಣರ ಕುಂಚ ಸಂಚಿಕೆ ಬಿಡುಗಡೆ ಮಾಡಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಚುಂಚಶ್ರೀ ಅವರ ಪುತ್ಥಳಿ, ಶಾಲಾ ಸ್ಥಳ ದಾನಿ ಬೋಳಮಾರನಹಳ್ಳಿ ವೆಂಕಟಯ್ಯ, ಹಿರಿಸಾವೆ ಅಣ್ಣಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ ಸ್ಮರಿಸಿದರು. ಗ್ರಾಪಂ ಅಧ್ಯಕ್ಷ ಮಹಾಲಕ್ಷ್ಮೀ ವಿಶ್ವನಾಥ್, ಉಪಾಧ್ಯಕ್ಷ ನಂಜೇಶ್, ಮುಖಂಡರಾದ ಎ.ಆರ್.ಮಂಜುನಾಥ್, ಬಿ.ಎಸ್. ಮಂಜುನಾಥ್, ರಾಮೇಗೌಡ, ಜಯರಾಂ, ಶ್ರೀನಿವಾಸ್ ಉಪಸ್ಥಿತರಿದ್ದರು.