ಕರಾವಳಿ ಭಜನಾ ಸಂಕೀರ್ತನೆಯ ತಾಣ: ಆನಂದ ಕುಂದರ್

| Published : Mar 26 2024, 01:01 AM IST

ಸಾರಾಂಶ

ಶನಿವಾರ ಕೋಟದ ಮಣೂರು ಪಡುಕರೆಯ ಉದ್ಭವಲಿಂಗೇಶ್ವರ ಭಜನಾ ಮಂದಿರ ೩೮ನೇ ವಾರ್ಷಿಕ ಭಜನಾ ಮಂಗಲೋತ್ಸವ ನಡೆಯಿತು. ಆನಂದ್‌ ಸಿ. ಕುಂದರ್‌ ಭಜನೆಯ ಬಗ್ಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೋಟರಾಜ್ಯದ ಕರಾವಳಿ ಭಾಗ ಭಜನಾ ಸಂಕೀರ್ತನೆಯ ತಾಣವಾಗಿ ಗುರುತಿಸಿಕೊಂಡಿದೆ ಎಂದು ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ. ಕುಂದರ್ ಹೇಳಿದರು.

ಅವರು ಶನಿವಾರ ಕೋಟದ ಮಣೂರು ಪಡುಕರೆಯ ಉದ್ಭವಲಿಂಗೇಶ್ವರ ಭಜನಾ ಮಂದಿರ ೩೮ನೇ ವಾರ್ಷಿಕ ಭಜನಾ ಮಂಗಲೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರಾವಳಿಯ ಭಜನಾ ಮಂದಿರಗಳು ನಮ್ಮ ಒಗ್ಗಟ್ಟಿನ ತಾಣವಾಗಿ ನಿಂತಿದೆ. ಇಲ್ಲಿ ಪ್ರಾಚೀನ ಕಾಲದಲ್ಲೇ ಭಜನೆಯ ಮೂಲಕ ಸಂಸ್ಕಾರ ಶಿಕ್ಷಣವನ್ನು ನಮ್ಮ ಹಿರಿಯರು ನಮಗೆ ಉಣಬಡಿಸಿದ್ದಾರೆ. ಅದು ಜಾತಿ ಭೇದವನ್ನು ಮೀರಿಸಿ ನಿಂತ ಕಲೆಯಾಗಿ ಪರಿಣಮಿಸಿದೆ ಎಂದರು.

ಇದೇ ವೇಳೆ ಸಮಾಜಸೇವಕ ಈಶ್ವರ್ ಮಲ್ಪೆ, ಪಿಎಚ್‌ಡಿ ಪದವೀಧರೆ, ಸಾಮಾಜಿಕ ಹೋರಾಟಗಾರ್ತಿ ಡಾ.ಕಲಾವತಿ, ಹಿರಿಯ ಭಜಕ ಪಾಂಡೇಶ್ವರ ಶಿವಣ್ಣ, ಶಿಕ್ಷಣಿಕ ಸಾಧಕ ದರ್ಶನ್ ಮಣೂರು ಪಡುಕರೆ ಅವರನ್ನು ಸನ್ಮಾನಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಭಜನಾ ಮಂದಿರ ಅಧ್ಯಕ್ಷ ನವೀನ್ ಕುಮಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ವಿದ್ವಾನ್ ದಾಮೋದರ ಶರ್ಮ, ಉಪನ್ಯಾಸಕಿ ಸವಿತ ಎರ್ಮಾಳ್, ಜನಸೇವಾ ಟ್ರಸ್ಟ್‌ನ ವಸಂತ್ ಗಿಳಿಯಾರು, ನಂದಗೋಕುಲ ಕ್ಯಾಶು ಇಂಡಸ್ಟ್ರಿ ಮಾಲಿಕ ಕಟ್ಕೇರೆ ಪ್ರೇಮಾನಂದ ಶೆಟ್ಟಿ, ಭಜನಾ ಮಂದಿರದ ಹರೀಶ್ ಕುಮಾರ್, ಸಾಮಾಜಿಕ ಮುಖಂಡ ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ಮತ್ತಿತರರು ಉಪಸ್ಥಿತರಿದ್ದರು.ಮಂದಿರದ ಸದಸ್ಯ ಪ್ರಭಾಕರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಟಿವಿ ನಿರೂಪಕಿ ಪ್ರಗತಿ, ಶಿಕ್ಷಕ ಸಂತೋಷ್ ಕುಮಾರ್ ಕೋಟ ನಿರ್ವಹಿಸಿ, ವಂದಿಸಿದರು. ಸಂಘಟಕ ಪ್ರಮೋದ್ ಕುಮಾರ್ ಸಹಕರಿಸಿದರು. ನಂತರ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.